ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಹುಲ್ ಗಾಂಧಿ ಹಿಂದುತ್ವದ ಹೇಳಿಕೆಗೆ ಆರ್‌ಎಸ್‌ಎಸ್ ಅಸಮಾಧಾನ

Published 1 ಜುಲೈ 2024, 16:31 IST
Last Updated 1 ಜುಲೈ 2024, 16:31 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹಿಂದುತ್ವದ ಬಗೆಗಿನ ಭಾಷಣಕ್ಕೆ ಆರ್‌ಎಸ್‌ಎಸ್‌ ವಿರೋಧ ವ್ಯಕ್ತಪಡಿಸಿದೆ. ಹಿಂದುತ್ವವನ್ನು ಹಿಂಸೆಯೊಂದಿಗೆ ಹೋಲಿಕೆ ಮಾಡಿರುವುದು ದುರದೃಷ್ಟಕರ ಎಂದು ಅದು ಹೇಳಿದೆ.

ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್‌ಎಸ್‌ಎಸ್‌ನ ಪ್ರಚಾರ ವಿಭಾಗದ ಮುಖ್ಯಸ್ಥ ಸುನಿಲ್ ಅಂಬೆಕರ್, ‘ಪ್ರಮುಖ ಹುದ್ದೆಯಲ್ಲಿರುವವರು ಹಿಂದುತ್ವವನ್ನು ಹಿಂಸೆಗೆ ಹೋಲಿಕೆ ಮಾಡಿರುವುದು ದುರದೃಷ್ಟಕರ. ಸ್ವಾಮಿ ವಿವೇಕಾನಂದರದ್ದೇ ಆಗಿರಲಿ, ಅಥವಾ ಮಹಾತ್ಮಾ ಗಾಂಧಿಯವರದ್ದೇ ಅಗಿರಲಿ ಹಿಂದುತ್ವವು ಸಾಮರಸ್ಯದ ಪ್ರತೀಕ’ ಎಂದು ಅವರು ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಅವರೂ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಖಂಡಿಸಿದ್ದಾರೆ. ಹಿಂದೂಗಳನ್ನು ಮೂಲೆಗೆ ತಳ್ಳುವ ಹಾಗೂ ಅವಮಾನಿಸುವ ಮೂಲಕ ತಮ್ಮ ಪಕ್ಷವು ಮತ ಪಡೆಯುತ್ತದೆ ಎಂದು ಕಾಂಗ್ರೆಸ್ ನಾಯಕ ಭಾವಿಸಿದ್ದರೆ, ಗೆದ್ದ ಸ್ಥಾನಗಳ ವಿಷಯದಲ್ಲಿ ಅದು ಬಿಜೆಪಿಗಿಂತ ಹಿಂದೆಯೇ ಇದೆ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚುನಾವಣೆಯಲ್ಲಿ ಕಾಂಗ್ರೆಸ್ 542 ರಲ್ಲಿ ಕೇವಲ 99 ಸ್ಥಾನಗಳನ್ನು ಪಡೆದಿದೆ ಎಂದು ರಾಹುಲ್ ಗಾಂಧಿ ನೆನಪಿಟ್ಟುಕೊಳ್ಳಬೇಕು. ಕಾಂಗ್ರೆಸ್ ತನ್ನ ಪ್ರತಿಸ್ಪರ್ಧಿಗಿಂತ ಹಿಂದೆಯೇ ಇದೆ’ ಎಂದು ಕುಮಾರ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಇಂದು ಬಿಜೆ‍ಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ‘ಬಿಜೆಪಿ ನಾಯಕರು ಹಿಂಸೆ ಹಾಗೂ ದ್ವೇಷದಲ್ಲಿ ತೊಡಗಿದ್ದು, ಅವರು ಹಿಂದುಗಳಲ್ಲ’ ಎಂದು ಹೇಳಿದ್ದರು.

ಅವರ ಈ ಹೇಳಿಕೆ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಪ್ರತಿಭಟನೆ ವ್ಯಕ್ತಪಡಿಸಿದ್ದರು. ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಎದ್ದು ನಿಂತು ‘ಇಡೀ ಹಿಂದೂ ಸಮಾಜವೇ ಹಿಂಸಾತ್ಮಕ ಎಂದು ಕರೆಯುವುದು ಗಂಭೀರ ವಿಷಯ’ ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿದ ರಾಹುಲ್, ‘ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಮತ್ರ ಹಿಂದೂ ಸಮಾಜವಲ್ಲ’ ಎಂದು ಹೇಳಿದರು.

‘ಎಲ್ಲಾ ಧರ್ಮಗಳು ಧೈರ್ಯದ ಬಗ್ಗೆ ಮಾತನಾಡುತ್ತವೆ. ಇಸ್ಲಾಂ, ಕ್ರೈಸ್ತ, ಬೌದ್ಧ, ಜೈನ ಹಾಗೂ ಸಿಖ್ ಧರ್ಮಗಳು ಧೈರ್ಯದ ಮಹತ್ವನನ್ನು ಸಾರುತ್ತವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT