ಮುಂಬೈ: ಬರ್ತ್ಡೇ ಪಾರ್ಟಿಯಲ್ಲಿ ಸಾಕಷ್ಟು ಮದ್ಯವನ್ನು ಕೊಡಿಸಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನನ್ನು ಕಟ್ಟಡದ ನಾಲ್ಕನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು 24 ವರ್ಷದ ಕಾರ್ತಿಕ್ ವಯಲ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ವಿಠ್ಠಲವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಧೀರಜ್ ಯಾದವ್ (23) ಮತ್ತು ನೀಲೇಶ್ ಕ್ಷೀರಸಾಗರ್ (23), ಸಾಗರ್ ಕಾಳೆ (24) ಎಂದು ಗುರುತಿಸಲಾಗಿದೆ.
ಜುಲೈ 1ರಂದು ಕಾರ್ತಿಕ್ ತನ್ನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮೂವರು ಸ್ನೇಹಿತರನ್ನು ಆಹ್ವಾನಿಸಿದ್ದ. ಆದರೆ, ಪಾರ್ಟಿಯಲ್ಲಿ ಕುಡಿಯುವಷ್ಟು ಮದ್ಯವನ್ನು ಕೊಡಿಸಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತರ ಮಧ್ಯೆ ವಾಗ್ವಾದ ನಡೆದಿತ್ತು.
ಗಲಾಟೆ ವೇಳೆ ಕಾರ್ತಿಕ್ ನೀಲೇಶ್ಗೆ ಬಾಟಲಿಯಿಂದ ಹೊಡೆದಿದ್ದ. ಇದರಿಂದಾಗಿ ಧೀರಜ್, ನೀಲೇಶ್ ಮತ್ತು ಸಾಗರ್ ಕೋಪಗೊಂಡಿದ್ದರು. ಕೂಡಲೇ ಎಲ್ಲರೂ ಸೇರಿಕೊಂಡು ಕಾರ್ತಿಕ್ನನ್ನು ಬಾಲ್ಕನಿಯಿಂದ ಕೆಳಗೆ ತಳ್ಳಿದ್ದರು. ಇದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.