ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

100 ದಿನದ ಕಾರ್ಯಸೂಚಿ ಏನಾಯಿತು: ಪ್ರಧಾನಿ ಮೋದಿಗೆ ಖರ್ಗೆ ಪ್ರಶ್ನೆ

Published : 12 ಸೆಪ್ಟೆಂಬರ್ 2024, 13:15 IST
Last Updated : 12 ಸೆಪ್ಟೆಂಬರ್ 2024, 13:15 IST
ಫಾಲೋ ಮಾಡಿ
Comments

ನವದೆಹಲಿ: ‘ಚುನಾವಣೆ ಪೂರ್ವದಲ್ಲಿ 100 ದಿನದ ಕಾರ್ಯಸೂಚಿ ಕುರಿತು ಪ್ರಧಾನಿ ನರೇಂದ್ರ ಮೋದಿ ದೊಡ್ಡದಾಗಿ ತುತ್ತೂರಿ ಊದಿದ್ದರು. ಚುನಾವಣೆ ಮುಗಿದು 95 ದಿನ ಕಳೆದಿದೆ. ಆದರೆ, ಅವರ ನೇತೃತ್ವದ ಸರ್ಕಾರದ ನಿಷ್ಕ್ರಿಯತೆಯ ‘ಗಂಭೀರ ಪರಿಣಾಮಗಳಿಂದ ದೇಶ ಬಳಲುತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

‘ಪ್ರಧಾನಿಯವರ 100 ದಿನದ ಕಾರ್ಯಸೂಚಿ ಏನೆಂದು ಯಾರಿಗೂ ತಿಳಿದಿಲ್ಲ. ಆದರೆ, ‌ಸರ್ಕಾರದ ನಿಷ್ಕ್ರಿಯತೆ ಪರಿಣಾಮವನ್ನು ದೇಶ ಎದುರಿಸುತ್ತಲೇ ಇದೆ. 95 ದಿನಗಳ ಬಳಿಕವು ಮೈತ್ರಿ ಸರ್ಕಾರ ಓಲಾಡುತ್ತಿದೆ’ ಎಂದು ‘ಎಕ್ಸ್‌’ನಲ್ಲಿ ಟೀಕಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆ ಕುಸಿತ, ವಿಮಾನನಿಲ್ದಾಣ, ಅಯೋಧ್ಯೆ ರಾಮಮಂದಿರ ಸೋರಿಕೆ, ಸೇತುವೆ, ರಸ್ತೆಗಳ ಕುಸಿತ ಹೀಗೆ ನೀವು ನಿರ್ಮಿಸಿದೆವು ಎಂದು ಹೇಳಿಕೊಂಡ ಎಲ್ಲದರಲ್ಲೂ ದೋಷಗಳು ಉಳಿದಿವೆ ಎಂದು ವ್ಯಂಗ್ಯವಾಡಿದ್ದಾರೆ.

‘ಕೇಂದ್ರ ಸರ್ಕಾರದ ಜನವಿರೋಧಿ ಬಜೆಟ್‌ನಿಂದಾಗಿ ಬಡವರು, ಮಧ್ಯಮ ವರ್ಗದವರ ಮೇಲಿನ ಭಾರ ಹೆಚ್ಚಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಿತ್ತು. ಅಲ್ಲಿ ಹಲವು ಯೋಧರು ಹುತಾತ್ಮರಾದರು’ ಎಂದು ಖರ್ಗೆ ಉಲ್ಲೇಖಿಸಿದ್ದಾರೆ.

ಮೋದಿ–ಅದಾನಿ ಭಾರಿ ಹಗರಣದ ಹಲವು ಸಂಗತಿ, ಸೆಬಿ ಅಧ್ಯಕ್ಷೆಯ ನಿಯಮಬಾಹಿರ ಕಾರ್ಯಗಳು ಬಯಲಾಗಿವೆ. ನೀಟ್‌ ಪ್ರಶ್ನೆಪತ್ರಿಕೆ ಬಹಿರಂಗ ಅಥವಾ ಕಾಲ್ತುಳಿತದ ಘಟನೆಗಳು ನಿರುದ್ಯೋಗ ಸಮಸ್ಯೆಗೆ ಕನ್ನಡಿ ಹಿಡಿದಿವೆ. ಮೋದಿ ನೇತೃತ್ವದ ಸರ್ಕಾರವು ಯುವಜನರಿಗೆ ನಿತ್ಯವೂ ವಂಚಿಸುತ್ತಿದೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT