ಬೆಂಗಳೂರು: ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ತಾಯಿ ಮೀನಾ ಸೇರಿದಂತೆ ಅವರ ಕುಟುಂಬಸ್ಥರು ಸೋಮವಾರ ಭೇಟಿಯಾದರು.
ಮೀನಾ ಅವರೊಂದಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ, ಸಹೋದರ ದಿನಕರ್ ತೂಗುದೀಪ್ ಭೇಟಿ ಮಾಡಿ ಕೆಲಕಾಲ ಚರ್ಚಿಸಿದರು. ಒಂದೇ ಕಾರಿನಲ್ಲಿ ಕುಟುಂಬಸ್ಥರು ಬಂದಿದ್ದರು. ಜೂನ್ 24ರಂದೂ ವಿಜಯಲಕ್ಷ್ಮಿ ಹಾಗೂ ಪುತ್ರ ಭೇಟಿ ಮಾಡಿದ್ದರು.
‘ತಾಯಿಯನ್ನು ಕಂಡ ದರ್ಶನ್ ಕಣ್ಣೀರು ಹಾಕಿದರು. ಇದೇ ವೇಳೆ ಜತೆಗಿದ್ದ ಎಲ್ಲರೂ ಭಾವುಕರಾದರು’ ಎಂದು ಜೈಲಿನ ಮೂಲಗಳು ತಿಳಿಸಿವೆ. ದಿನಕರ್ ಅವರು ಕಾನೂನು ಹೋರಾಟದ ಕುರಿತು ಕೆಲಕಾಲ ಚರ್ಚಿಸಿದರು ಎಂದು ಗೊತ್ತಾಗಿದೆ.
ಕಡಿಮೆಯಾಗದ ಅಭಿಮಾನಿಗಳು:
‘ಜೈಲಿನಲ್ಲಿರುವ ದರ್ಶನ್ ಅವರನ್ನು ನೋಡಬೇಕು ಮತ್ತು ಅವರನ್ನು ಮಾತನಾಡಿಸಬೇಕು’ ಎಂದು ಬರುವ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೋಮವಾರ ವೃದ್ಧೆಯೊಬ್ಬರು ಬಂದು ಮೂರು ತಾಸು ಕಾದರು. ಅವರಿಗೆ ಚೆಕ್ಪೋಸ್ಟ್ನಿಂದ ಮುಂದಕ್ಕೆ ಹೋಗಲು ಅವಕಾಶ ನೀಡಲಿಲ್ಲ. ಬಳಿಕ ಅವರು ವಾಪಸ್ ತೆರಳಿದರು ಎಂದು ಮೂಲಗಳು ತಿಳಿಸಿವೆ.