ನವದೆಹಲಿ: ಕರ್ನಾಟಕ ಸರ್ಕಾರದ ಆದಾಯ ಕ್ರೋಢೀಕರಣ ಸುಧಾರಿಸಲು ಸಲಹೆ ನೀಡಲು ಅರ್ಥಶಾಸ್ತ್ರಜ್ಞರನ್ನು ಒಳಗೊಂಡ ತಜ್ಞರ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದರು.
ಕೇಂದ್ರ ಸಚಿವರನ್ನು ಭೇಟಿ ಮಾಡಲು ರಾಷ್ಟ್ರ ರಾಜಧಾನಿಗೆ ಬಂದಿರುವ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಆದಾಯ ಸುಧಾರಿಸಲು ಮತ್ತು ವ್ಯರ್ಥ ವೆಚ್ಚ ಕಡಿಮೆ ಮಾಡಲು ಹೊಸ ಮಾರ್ಗಗಳನ್ನು ಸೂಚಿಸಲು ಸಮಿತಿಯನ್ನು ಕೇಳಲಾಗುವುದು’ ಎಂದು ಹೇಳಿದರು.
ಹೆಚ್ಚುವರಿ ಆದಾಯ ಗಳಿಸುವುದು ಸರ್ಕಾರಕ್ಕೆ ಸವಾಲಾಗಿದೆ ಎಂದು ಒಪ್ಪಿಕೊಂಡ ಅವರು, ರಾಜ್ಯ ಸರ್ಕಾರವು ₹3.46 ಲಕ್ಷ ಕೋಟಿ ವಾರ್ಷಿಕ ಬಜೆಟ್ನಲ್ಲಿ ₹52 ಸಾವಿರ ಕೋಟಿಗಳನ್ನು ಖಾತರಿ ಯೋಜನೆಗಳ ಅನುಷ್ಠಾನಕ್ಕೆ ವ್ಯಯಿಸುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಖಾತರಿ ಯೋಜನೆಗಳನ್ನು ಸ್ಥಗಿತಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ‘ರಾಜ್ಯದಲ್ಲಿ ಜಿಎಸ್ಟಿ ಸಂಗ್ರಹ ಸುಧಾರಿಸಲು ಗ್ಯಾರಂಟಿ ಯೋಜನೆಯೂ ಒಂದು ಕಾರಣ’ ಎಂದರು.