ಬೆಂಗಳೂರು: ‘ಹಿರಿಯ ಕವಿ ನಿಸಾರ್ ಅಹಮದ್ ಅವರಿಗೆ ಇದುವರೆಗೂ ಪಂಪ ಪ್ರಶಸ್ತಿ ದೊರೆತಿಲ್ಲ. ಇದು ವ್ಯವಸ್ಥೆ ಮಾಡುತ್ತಿರುವ ಹಾಸ್ಯವೋ ಅಥವಾ ಕುತಂತ್ರವೋ ಎಂಬುದು ತಿಳಿಯುತ್ತಿಲ್ಲ’ ಎಂದು ಸಂಸದ ಎಂ.ವೀರಪ್ಪ ಮೊಯಿಲಿ ವಿಷಾದಿಸಿದರು.
ಭಾಗವತರು ಸಾಂಸ್ಕೃತಿಕ ಸಂಘಟನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ನಿತ್ಯೋತ್ಸವ ಕವಿಗೆ 80’ ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ, ಗಾಯನ, ಕವಿತೆ ಓದು, ಸಾಂಸ್ಕೃತಿಕ ಗೌರವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಎರಡು ಸಂಸ್ಕೃತಿ ನಡುವೆ ಬರೆಯುವ ಅನಿವಾರ್ಯತೆ ನಿಸಾರ್ ಅವರಿಗಿತ್ತು. ಆದರೆ, ಅವರು ತಮ್ಮ ಸೃಜನಶೀಲತೆಯಿಂದ ಈ ಸಂಸ್ಕೃತಿ, ಆಚಾರಗಳನ್ನು ಮೀರಿ ಬೆಳೆದವರು. ಅವರನ್ನು ಯಾವುದೇ ಸಂಸ್ಕೃತಿ ಕಟ್ಟಿ ಹಾಕಲು ಸಾಧ್ಯವಾಗಿಲ್ಲ. ಅವರು ಸಂವೇದನಾಶೀಲ ಕವಿ’ ಎಂದು ನುಡಿದರು.
‘ಕವಿಗಳು, ಸಾಹಿತಿಗಳು ಒಂದೊಂದು ಪ್ರಕಾರಕ್ಕೆ ಸೇರಿ, ಅಲ್ಲಿಂದ ಹೊರಗೆ ಬರದೆ ಸಿಕ್ಕಿಹಾಕಿಕೊಂಡಿರುತ್ತಾರೆ. ಆದರೆ, ನಿಸಾರ್ ಅವರು ನವ್ಯ, ನವೋದಯ, ದಲಿತ, ಬಂಡಾಯ ಈ ಯಾವುದೇ ಪ್ರಕಾರಕ್ಕೆ ಸೇರದೆ, ತಮ್ಮ ಕಾವ್ಯಗಳ ಲಹರಿಯನ್ನು ಹರಿಯಬಿಟ್ಟವರು’ ಎಂದರು.
‘ನಿಸಾರ್ ಅವರ ಕಾವ್ಯಗಳು ಸಮಾಜ-ಮುಖಿಯಾಗಿವೆ. ಅವರ ಕಾವ್ಯದಲ್ಲಿ ಯಾವುದೇ ಅಪಶ್ರುತಿ ಇಲ್ಲ’ ಎಂದು ನುಡಿದರು.
‘ನಿಸಾರ್ ಅವರು ಸುಮಾರು 5 ದಶಕಗಳಿಂದ ಕಾವ್ಯ ಕೃಷಿಯಲ್ಲಿ ತೊಡಗಿದ್ದಾರೆ. ಅವರ ಕಾವ್ಯಗಳಿಗೆ ಅನೇಕ ನೆಲೆಗಳಿವೆ. ಅವರ ಕಾವ್ಯಗಳಾದ ‘ಮನಸು ಗಾಂಧಿ ಬಜಾರು’ ಹಾಗೂ ‘ನಿತ್ಯೋತ್ಸವ’ ಸಾರ್ವತ್ರಿಕವಾಗಿವೆ ಮತ್ತು ಜನಮನ್ನಣೆ ಗಳಿಸಿವೆ’ ಎಂದು ನುಡಿದರು.
ಲೇಖಕ ಡಾ.ಪ್ರಭುಶಂಕರ ಮಾತನಾಡಿ, ‘ನಿಸಾರ್ ಅವರ ಕಾವ್ಯ ವಿಶಿಷ್ಟವಾಗಿದೆ. ಅವರು ಯಾವುದೇ ವರ್ಗ, ಜಾತಿಗೆ ಸೇರದ ಜನತೆಯ ಕವಿಯಾಗಿದ್ದಾರೆ. ನಾಡಿನ ಭಾಷೆಯನ್ನು ಉನ್ನತ ಮಟ್ಟಕ್ಕೇರಿಸಲು ಪ್ರಯತ್ನಿಸಿದವರಲ್ಲಿ ನಿಸಾರ್ ಕೂಡ ಒಬ್ಬರು’ ಎಂದರು.