ಟೈಗರ್ ಶಿಖರ ವಶಕ್ಕೆ ಭಾರಿ ಹೋರಾಟ: ಅಪಾರ ಸಾವು
ನವದೆಹಲಿ, ಜುಲೈ 3– ಬಟಾಲಿಕ್ ಮತ್ತು ಡ್ರಾಸ್ ವಲಯಗಳಲ್ಲಿ ಮುಂದುವರೆದಿರುವ ಭೀಕರ ಹೋರಾಟದಿಂದ ಗಡಿ ನಿಯಂತ್ರಣ ರೇಖೆಯ ಟೈಗರ್ ಶಿಖರ ವಶ ಹತ್ತಿರವಾಗುತ್ತಿದ್ದಂತೆ ಭಾರತೀಯ ಸೈನಿಕರ ಸಾವು ನೋವುಗಳು ಹೆಚ್ಚಾಗುತ್ತಿವೆ.
ಕಳೆದ 24 ಗಂಟೆಗಳಲ್ಲಿ ನಡೆದಿರುವ ಹೋರಾಟದಲ್ಲಿ ಪಾಕಿಸ್ತಾನದ ಕಡೆ 21 ಸಾವುಗಳು ಆಗಿದ್ದರೆ, ಮೂವರು ಅಧಿಕಾರಿಗಳು ಸೇರಿದಂತೆ 23 ಮಂದಿ ಭಾರತೀಯ ಸೈನಿಕರು ವೀರಮರಣ ಅಪ್ಪಿದ್ದಾರೆ.
ಅಲ್ಲದೆ, ಹದಿನಾಲ್ಕು ಮಂದಿ ಯೋಧರು ಗಾಯಗೊಂಡಿದ್ದಾರೆ ಎಂದು ಭೂ ಸೇನೆಯ ವಕ್ತಾರ ಕರ್ನಲ್ ಬಿಕ್ರಂ ಸಿಂಗ್ ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
***
ರಾಜ್ಯದಲ್ಲಿ ಆರ್ಥಿಕ ಪ್ರಗತಿ ಕುಂಠಿತ: ಕೃಷ್ಣ
ಕಲ್ಬುರ್ಗಿ, ಜುಲೈ 3– ರಾಜ್ಯದಲ್ಲಿ ಜನತಾದಳ ನೇತೃತ್ವದ ಸರ್ಕಾರದ ಗೊತ್ತು ಗುರಿಯಿಲ್ಲದ ಆರ್ಥಿಕ ಮತ್ತು ಕೈಗಾರಿಕಾ ನೀತಿಯಿಂದ ಕೈಗಾರಿಕಾ ಪ್ರಗತಿ ಕುಂಠಿತಗೊಂಡಿದೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಎಂ. ಕೃಷ್ಣ ಅವರು ಆರೋಪಿಸಿದರು.
‘ಪಾಂಚಜನ್ಯ’ ಯಾತ್ರೆಯ ಅಂಗವಾಗಿ ಇಂದು ಕಲ್ಬುರ್ಗಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ದಳದ ನಾಲ್ಕುವರೆ ವರ್ಷದ ಆಡಳಿತದಲ್ಲಿ ರಾಜ್ಯದಲ್ಲಿ ಕೈಗಾರಿಕೆಗಳ ಪ್ರಗತಿಯಾಗಿಲ್ಲ. ಕೈಗಾರಿಕಾ ಪ್ರಗತಿಯಲ್ಲಿ ಮೊದಲಿನಿಂದ ಮುಂದಿದ್ದ ರಾಜ್ಯದಲ್ಲಿ ಇಂದು ಬೆಂಗಳೂರು ಸಮೀಪದ ಕೆಲವು ಸಾಫ್ಟ್ವೇರ್ ಕೈಗಾರಿಕೆಗಳನ್ನು ಬಿಟ್ಟರೆ ಉಳಿದವು ಮುಚ್ಚುವ ಸ್ಥಿತಿಗೆ ಬಂದಿವೆ ಎಂದರು.