ಸರ್ಕಾರದ ಜೊತೆ ಪೂರ್ಣ ಅಸಹಕಾರ: ಸೋಷಲಿಸ್ಟರ ಚಳವಳಿಗೆ ಸಿಪಿಐ ವಿರೋಧ
ನವದೆಹಲಿ, ಜುಲೈ 1– ಸೋಷಲಿಸ್ಟ್ ಪಕ್ಷವು ಸೂಚಿಸಿರುವ ‘ಸರ್ಕಾರದ ಜೊತೆ ಸಂಪೂರ್ಣ ಅಸಹಕಾರ’ ಚಳವಳಿಯನ್ನು ಭಾರತದ ಕಮ್ಯುನಿಸ್ಟ್ ಪಕ್ಷವು ವಿರೋಧಿಸುವುದೆಂದು ಸಿ.ಪಿ.ಐ.ನ ಪ್ರಧಾನ ಕಾರ್ಯದರ್ಶಿ ರಾಜೇಶ್ವರರಾವ್ ಅವರು ಇಂದು ಇಲ್ಲಿ ತಿಳಿಸಿದರು.
ಸೋಷಲಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸುರೇಂದ್ರಮೋಹನ್ ಅವರ ಹೇಳಿಕೆಗೆ ಪ್ರತಿ ಹೇಳಿಕೆಯೊಂದನ್ನು ನೀಡಿ ರಾಜೇಶ್ವರ ರಾಯರು ಸಿ.ಪಿ.ಐ. ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರಗತಿಪರ ಕಾಂಗ್ರೆಸ್ಸಿಗರ ಜೊತೆ ಮೈತ್ರಿಯುತ ಬಾಂಧವ್ಯ ಅಂತೆಯೇ ಸರ್ಕಾರದ ಜನತಾ ವಿರೋಧಿ ನೀತಿಗಳ ವಿರುದ್ಧ ಹೋರಾಟ ಕುರಿತ ಸಿ.ಪಿ.ಐ. ಧೋರಣೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.