ನವದೆಹಲಿ, ಅ. 6– ರಾಷ್ಟ್ರದ ಕಾಂಗ್ರೆಸ್ ದುರಾಡಳಿತದ ವಿರುದ್ಧ ಕಮ್ಯುನಿಸ್ಟೇತರ ವಿರೋಧ ಪಕ್ಷಗಳು ಆರಂಭಿಸಿರುವ ಚಳವಳಿ ಪ್ರಾರಂಭದ ಸಂಕೇತವಾಗಿ ಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾದ ಜೆ.ಬಿ.ಕೃಪಲಾನಿ ಅವರು ಇಂದು ಇಲ್ಲಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ನಿವಾಸಕ್ಕೆ ಭಾರಿ ಮೆರವಣಿಗೆ ಕೊಂಡೊಯ್ದರು.
ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರ 50 ಸಾವಿರ ಮಂದಿ ಬೆಂಬಲಿಗರ ಮೆರವಣಿಗೆಯು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ರಾಮಲೀಲಾ ಮೈದಾನದಿಂದ ಆರಂಭವಾಯಿತು.
ಚಿನ್ನ: ಕೋಟಿಗಟ್ಟಲೆ ಕಪ್ಪುಹಣದ ಮೂಲ
ಮುಂಬಯಿ, ಅ. 6– ಈ ವರ್ಷದ ಆದಿಯವರೆಗೆ ಕಳ್ಳಸಾಗಾಣಿಕೆದಾರರು ಬಂಗಾರದ ಕಳ್ಳಸಾಗಾಣಿಕೆ ಒಂದರಿಂದಲೇ ವರ್ಷಕ್ಕೆ ನೂರು ಕೋಟಿ ರೂಪಾಯಿ ಕಪ್ಪುಹಣ ಸಂಪಾದಿಸುತ್ತಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ವರ್ಷದ ಆದಿಯಲ್ಲಿ ಸುಮಾರು ಎಪ್ಪತ್ತು ಸಾವಿರ ಕೆ.ಜಿ ಚಿನ್ನವನ್ನು ಅಕ್ರಮವಾಗಿ ತರಲಾಗಿದೆ ಎಂದು ಸರ್ಕಾರಕ್ಕೆ ಬಂದಿರುವ ರಹಸ್ಯ ವರದಿ ತಿಳಿಸಿದೆ.