ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶರ್ಮಾ ಪಡೆಗೆ ಶಾಂತೋ ಬಳಗದ ಸವಾಲು: ಚೆನ್ನೈನಲ್ಲಿ ಭಾರತ–ಬಾಂಗ್ಲಾ ಟೆಸ್ಟ್ ಇಂದಿನಿಂದ

ಕೆ.ಎಲ್. ರಾಹುಲ್, ರಿಷಭ್ ಪಂತ್ ಮೇಲೆ ಕಣ್ಣು
Published : 18 ಸೆಪ್ಟೆಂಬರ್ 2024, 22:30 IST
Last Updated : 18 ಸೆಪ್ಟೆಂಬರ್ 2024, 22:30 IST
ಫಾಲೋ ಮಾಡಿ
Comments

ಚೆನ್ನೈ: ಐದು ವರ್ಷಗಳ ಹಿಂದೆ ಬಾಂಗ್ಲಾದೇಶದ ಎದುರಿನ ಟೆಸ್ಟ್ ಸರಣಿಗೆ ಭಾರತವು ಆತಿಥ್ಯ ವಹಿಸಿತ್ತು. ಆಗ ನಡೆದಿದ್ದ ಎರಡೂ ಪಂದ್ಯಗಳನ್ನು ಸುಲಭವಾಗಿ ಗೆದ್ದಿದ್ದ ಭಾರತವು ತವರಿನಲ್ಲಿ ಪಾರಮ್ಯ ಮೆರೆದಿತ್ತು. ಇಂದೋರ್ ಮತ್ತು ಕೋಲ್ಕತ್ತದಲ್ಲಿ ನಡೆದಿದ್ದ ಆ ಪಂದ್ಯಗಳು ನಡೆದಿದ್ದವು.

ಕಳೆದ ಕೆಲವು ವರ್ಷಗಳಿಂದ ಭಾರತ ತಂಡವು ತನ್ನ ಬ್ಯಾಟಿಂಗ್ ಮತ್ತು ವೇಗದ ವಿಭಾಗಗಳಲ್ಲಿ ಗಣನೀಯ ಸುಧಾರಣೆ ಸಾಧಿಸಿದೆ. ಬಾಂಗ್ಲಾದ ಎದುರಿನ ಆ ಸರಣಿಯ ನಂತರ ಇದುವರೆಗೆ ಇಂಗ್ಲೆಂಡ್ (ಎರಡು ಬಾರಿ), ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಎದುರು  ಜಯಭೇರಿ ಬಾರಿಸಿದೆ. ರೋಹಿತ್ ಶರ್ಮಾ ಮತ್ತು ಬಳಗವು 12 ಟೆಸ್ಟ್ ಪಂದ್ಯಗಳನ್ನು ಜಯಿಸಿದೆ. 3ರಲ್ಲಿ ಸೋತಿದೆ. 

ಅದೇ ಜಯದ ಓಟವನ್ನು ಮುಂದುವರಿಸಲು ಕಣ್ಣಿಟ್ಟಿರುವ ಭಾರತ ತಂಡವು ಗುರುವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಬಾಂಗ್ಲಾ ಎದುರಿನ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದೆ. 

ಬಾಂಗ್ಲಾ ತಂಡಕ್ಕೆ ಹೋಲಿಸಿದರೆ ಭಾರತ ತಂಡದಲ್ಲಿರುವ ಆಟಗಾರರ ಅನುಭವ, ಪ್ರತಿಭೆ ಮತ್ತು ವೈವಿಧ್ಯತೆಗಳು ಹೆಚ್ಚಿವೆ. ಈಚೆಗೆ ಪಾಕಿಸ್ತಾನ ತಂಡವನ್ನು ಅದರ ನೆಲದಲ್ಲಿಯೇ ಮಣಿಸಿದ್ದ ಬಾಂಗ್ಲಾ 2–0ಯಿಂದ ಸರಣಿ ಜಯಿಸಿತ್ತು. ಆದರೂ ಭಾರತದ ಸಾಮರ್ಥ್ಯಕ್ಕೆ ಸರಿಸಾಟಿಯಾಗಬಲ್ಲದೇ ಎಂಬುದನ್ನು ಕಾದು ನೋಡಬೇಕಿದೆ.

ನಾಯಕ ರೋಹಿತ್ ಮತ್ತು ‘ರನ್‌ ಯಂತ್ರ’ ವಿರಾಟ್ ಕೊಹ್ಲಿ ಅವರು ಭಾರತದ ಇನಿಂಗ್ಸ್ ಆರಂಭಿಸಲಿದ್ದಾರೆ. ಇಬ್ಬರೂ ಪ್ರಸ್ತುತ ಕ್ರಿಕೆಟ್‌ ಕ್ಷೇತ್ರದ ಇಬ್ಬರು ಅಪ್ರತಿಮ ಬ್ಯಾಟರ್‌ಗಳಾಗಿದ್ದಾರೆ. ಅಲ್ಲದೇ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಅವರು ಇದ್ದಾರೆ. ಗಿಲ್ ಅವರನ್ನು ಈಗಾಗಲೇ ಭಾರತದ ಭವಿಷ್ಯದ ನಾಯಕ ಎಂದು ಹೇಳಲಾಗುತ್ತಿದೆ. 

ಜೈಸ್ವಾಲ್ ತಮ್ಮ ಟೆಸ್ಟ್ ಕ್ರಿಕೆಟ್‌ ಆರಂಭವನ್ನು ಭರ್ಜರಿಯಾಗಿ ಮಾಡಿದ್ದಾರೆ. ಇಲ್ಲಿಯವರೆಗೆ ಆಡಿರುವ 9 ಪಂದ್ಯಗಳಿಂದ 1028 ರನ್‌ ಗಳಿಸಿದ್ದಾರೆ. 22 ವರ್ಷದ ಜೈಸ್ವಾಲ್ ಅವರು ಭಾರತ ತಂಡವು 4–1ರಿಂದ ಇಂಗ್ಲೆಂಡ್ ಎದುರಿನ ಸರಣಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 89ರ ಸರಾಸರಿಯಲ್ಲಿ 712 ರನ್‌ ಗಳಿಸಿದ್ದರು. 

ಆದರೆ ಇಂಗ್ಲೆಂಡ್ ಸರಣಿಯ ಆರಂಭದಲ್ಲಿ ವೈಫಲ್ಯ ಅನುಭವಿಸಿ, ಅಪಾರ ಟೀಕೆಗೊಳಗಾಗಿದ್ದರು. ನಂತರದ ಪಂದ್ಯಗಳಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕ ಗಳಿಸಿ ಟೀಕಾಕಾರರಿಗೆ ಉತ್ತರಿಸಿದ್ದರು. ವೇಗ ಮತ್ತು ಸ್ಪಿನ್ ಬೌಲರ್‌ಗಳನ್ನು ಎದುರಿಸುವ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರು. 

ವಿಕೆಟ್‌ಕೀಪರ್ ರಿಷಭ್ ಪಂತ್ ಸುಮಾರು ಎರಡು ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಅವರಿಂದಾಗಿ ಮಧ್ಯಮ ಕ್ರಮಾಂಕವು ಬಲಿಷ್ಠವಾಗಿ ಕಾಣುತ್ತಿದೆ. ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಇದು ಮರಳಿ ಅರಳುವ ಕಾಲವಾಗಿದೆ. 

ಉತ್ಕೃಷ್ಠ ದರ್ಜೆಯ ಬೌಲರ್‌ಗಳು ತಂಡದಲ್ಲಿದ್ದಾರೆ.  ವೇಗದಲ್ಲಿ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಇದ್ದರೆ, ಸ್ಪಿನ್‌ನಲ್ಲಿ ಆರ್. ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್‌ ಯಾದವ್ ಹಾಗೂ ಅಕ್ಷರ್ ಪಟೇಲ್ ಇದ್ದಾರೆ. ಸ್ಪಿನ್ನರ್‌ಗಳು ಬ್ಯಾಟಿಂಗ್‌ನಲ್ಲಿಯೂ ಉತ್ತಮ ಕಾಣಿಕೆ ನೀಡಬಲ್ಲ ಸಮರ್ಥರು. 

ನಜ್ಮುಲ್ ಹುಸೇನ್ ಶಾಂತೊ ನಾಯಕತ್ವದ ಬಾಂಗ್ಲಾ ತಂಡದ ಮುಂದೆ ಕಠಿಣ ಸವಾಲು ಇದೆ. ಆದರೆ ಆತ್ಮವಿಶ್ವಾಸ ತುಂಬಿರುವ ತಂಡವು ಅಚ್ಚರಿಯ ಫಲಿತಾಂಶ ನೀಡುವ ಛಲದಲ್ಲಿದೆ. ಇದರಿಂದಾಗಿ ಚೆನ್ನೈನ ಬಿಸಿಲಿಗೆ ಮತ್ತು ಕಾವೇರುವ ಸಾಧ್ಯತೆ ಅಲ್ಲಗಳೆಯಲಾಗದು. 

ಬಾಂಗ್ಲಾ ತಂಡದ ನಾಯಕ ನಜ್ಮುಲ್ ಹುಸೇನ್ ಶಾಂತೊ  
ಬಾಂಗ್ಲಾ ತಂಡದ ನಾಯಕ ನಜ್ಮುಲ್ ಹುಸೇನ್ ಶಾಂತೊ  
ಭಾರತದ ರಿಷಭ್ ಪಂತ್ ಮತ್ತು ಕೆ.ಎಲ್. ರಾಹುಲ್  
ಭಾರತದ ರಿಷಭ್ ಪಂತ್ ಮತ್ತು ಕೆ.ಎಲ್. ರಾಹುಲ್  
ರೋಹಿತ್ ಶರ್ಮಾ 
ರೋಹಿತ್ ಶರ್ಮಾ 

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ) ಯಶಸ್ವಿ ಜೈಸ್ವಾಲ್ ಶುಭಮನ್ ಗಿಲ್ ವಿರಾಟ್ ಕೊಹ್ಲಿ ಕೆ.ಎಲ್. ರಾಹುಲ್ ರಿಷಭ್ ಪಂತ್ (ವಿಕೆಟ್‌ಕೀಪರ್) ರವೀಂದ್ರ ಜಡೇಜ ಆರ್. ಅಶ್ವಿನ್ ಕುಲದೀಪ್ ಯಾದವ್ ಅಕ್ಷರ್ ಪಟೇಲ್ ಮೊಹಮ್ಮದ್ ಸಿರಾಜ್ ಜಸ್‌ಪ್ರೀತ್ ಬೂಮ್ರಾ. 

ಬಾಂಗ್ಲಾದೇಶ: ನಜ್ಮುಲ್ ಹುಸೇನ್ ಶಾಂತೊ (ನಾಯಕ) ಜಾಕೀರ್ ಅಲಿ ಲಿಟನ್ ದಾಸ್   ಝಾಕೀರ್ ಹಸನ್ ಮುಷ್ಫೀಕುರ್ ರಹೀಮ್ (ಮೂವರು ವಿಕೆಟ್‌ಕೀಪರ್)  ಮೆಹಮುದುಲ್ ಹಸನ್ ಜಾಯ್ ಮೊಮಿನುಲ್ ಹಕ್ ಮೆಹದಿ ಹಸನ್ ಮಿರಾಜ್ ಶಕೀಬ್ ಅಲ್ ಹಸನ್ ಹಸನ್ ಮೆಹಮೂದ್ ಖಾಲಿದ್ ಅಹಮದ್ ನಹೀದ್ ರಾಣಾ ನಯೀಂ ಹಸನ್ ತೈಜುಲ್ ಇಸ್ಲಾಂ ತಸ್ಕಿನ್ ಅಹಮದ್.  ಪಂದ್ಯ ಆರಂಭ: ಬೆಳಿಗ್ಗೆ 9.30 ನೇರಪ್ರಸಾರ: 

ಗಂಭೀರ್ ಹನುಮಾನ್ ಚಾಲೀಸಾ ಕೊಹ್ಲಿಯ ನಮಃ ಶಿವಾಯ

ಚೆನ್ನೈ: ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಅವರ ನಡುವಿನ ಸ್ನೇಹ ಮತ್ತು ವೈಮನಸ್ಸಿನ ಹಲವು ಕತೆಗಳು ಜನಜನಿತವಾಗಿವೆ. ದೆಹಲಿಯವರಾದ ಈ ಇಬ್ಬರೂ ಆಟಗಾರರು ಈಗ ಮತ್ತೆ ಒಂದೇ ತಂಡದಲ್ಲಿ ಜೊತೆಗೂಡಿದ್ದಾರೆ.  ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿದ್ದಾರೆ. ವಿರಾಟ್ ಆಟಗಾರನಾಗಿ ಅವರ ಮಾರ್ಗದರ್ಶನದಲ್ಲಿ ಆಡುತ್ತಿದ್ದಾರೆ. ಅವರಿಬ್ಬರ ಆಟದ ಶೈಲಿ ಅನುಭವ ಮತ್ತು ನಡವಳಿಕೆಗಳು ಭಿನ್ನವಾಗಿರಬಹುದು. ಆದರೆ ಆಧ್ಯಾತ್ಮದ ವಿಷಯದಲ್ಲಿ ಇಬ್ಬರಲ್ಲೂ ಸಾಮ್ಯತೆ ಇದೆ.  ಬಿಸಿಸಿಐ ಡಾಟ್ ಟಿವಿಯಲ್ಲಿ ವಿರಾಟ್ ಅವರು ಗೌತಮ್ ಗಂಭೀರ್ ಅವರನ್ನು ಸಂದರ್ಶನ ಮಾಡಿದ ವಿಡಿಯೊದಲ್ಲಿ ಇದು ಬಹಿರಂಗವಾಗಿದೆ. ಒಂದೂವರೆ ದಶಕದ ಹಿಂದೆ ನೇಪಿಯರ್‌ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಟೆಸ್ಟ್‌ನಲ್ಲಿ ಭಾರತವನ್ನು ಸೋಲಿನಿಂದ ತಪ್ಪಿಸಲು ಗಂಭೀರ್ ಅಮೋಘವಾಗಿ ಬ್ಯಾಟಿಂಗ್ ಮಾಡಿದ್ದರು. ಆ ಸಂದರ್ಭದಲ್ಲಿ ಅವರು ಬ್ಯಾಟಿಂಗ್ ಮಾಡುವಾಗ ‘ಹನುಮಾನ್ ಚಾಲೀಸಾ’ ಪಠಿಸಿದ್ದರಂತೆ.  ಇದಕ್ಕೆ ಪ್ರತ್ಯುತ್ತರವಾಗಿ ವಿರಾಟ್ ಕೂಡ ತಮ್ಮದೊಂದು ಹಳೆಯ ನೆನಪು ಹಂಚಿಕೊಂಡರು. 2014ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ನಾಲ್ಕು ಶತಕ ಗಳಿಸಿದ್ದರು. ಆ ಸಂದರ್ಭದಲ್ಲಿ ಅವರು ಬ್ಯಾಟಿಂಗ್ ಮಾಡುವಾಗಲೆಲ್ಲ ‘ಓಂ ನಮಃ ಶಿವಾಯ’ ಪಠಿಸುತ್ತಿದ್ದರಂತೆ. 

632 ದಿನಗಳ ನಂತರ ಮರಳಿದ ರಿಷಭ್

ಚೆನ್ನೈ : ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು 632 ದಿನಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿದ್ದಾರೆ.  ಕಾಕತಾಳೀಯವೆಂದರೆ 2022ರಲ್ಲಿ ಅವರು ಕೊನೆಯ ಬಾರಿಗೆ ಟೆಸ್ಟ್ ಪಂದ್ಯವಾಡಿದ್ದು ಬಾಂಗ್ಲಾದೇಶದ ಎದುರು. ಈಗ ಮರಳುತ್ತಿರುವುದು ಕೂಡ ಅದೇ ತಂಡದ ವಿರುದ್ಧದ ಪಂದ್ಯಕ್ಕೆ.  ಅದೇ ವರ್ಷ ಭೀಕರ ಕಾರು ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಶಸ್ತ್ರಚಿಕಿತ್ಸೆ ಆರೈಕೆಗಳ ನಂತರ ಈ ವರ್ಷದ ಐಪಿಎಲ್ ಟೂರ್ನಿಯ ಮೂಲಕ ಕ್ರಿಕೆಟ್‌ಗೆ ಮರಳಿದ್ದರು. ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಅಮೋಘವಾಗಿ ಆಡಿದ್ದರು. ಇದೀಗ ದೀರ್ಘ ಮಾದರಿಯಲ್ಲಿ ಅವರ ಸಾಮರ್ಥ್ಯ ಪರೀಕ್ಷೆಗೆ ವೇದಿಕೆ ಸಿದ್ಧವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT