ಬಂಡಾಯ ಸಾಹಿತ್ಯದ ಮುಂಚೂಣಿಯ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕವಿತೆ, ಕತೆ, ಕಾದಂಬರಿಗಳಂತಹ ಸೃಜನಶೀಲ ಬರವಣಿಗೆ ಜೊತೆಗೆ ವಿಚಾರ ಮತ್ತು ವಿಮರ್ಶೆಗೆ ಹೆಸರಾದವರು. ಸಾಹಿತ್ಯದಷ್ಟೇ ಸಿನಿಮಾ ಮಾಧ್ಯಮವನ್ನು ಗಾಢವಾಗಿ ಪ್ರೀತಿಸುವ ಇವರು, ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಪರ ಧ್ವನಿ ಎತ್ತುವುದರಲ್ಲೂ ಸದಾ ಮುಂದು. ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಲವು ರಚನಾತ್ಮಕ ಕೆಲಸಗಳ ಮೂಲಕ ಗಮನ ಸೆಳೆದವರು. ಅವರೊಂದಿಗಿನ ಸಂದರ್ಶನದ ಸಂಕ್ಷಿಪ್ತ ರೂಪವಿದು.
ನಿಮ್ಮ ಶಿಕ್ಷಣದ ಹೆಜ್ಜೆಗಳು ಯಾವ ರೀತಿ ಇದ್ದವು...
ಶಿಕ್ಷಣವೇ ನನ್ನ ಮೊದಲ ಆದ್ಯತೆ ಆಗಿತ್ತು. ಅಂದಿನ ಮಾಧ್ಯಮಿಕ ಶಾಲೆಯವರೆಗೆ ನಮ್ಮೂರು ಬರಗೂರಲ್ಲೇ ಓದಿದೆ. ಆನಂತರ ಪ್ರೌಢಶಾಲೆಗೆ ತಾಲ್ಲೂಕು ಕೇಂದ್ರ ಸಿರಾಕ್ಕೆ ಬಂದೆ. ಅಲ್ಲಿ ಆರು ತಿಂಗಳು ಅಷ್ಟೆ. ತುಮಕೂರಲ್ಲಿ ನನ್ನ ಎರಡನೇ ಅಣ್ಣ ಜಯರಾಮಯ್ಯ ಟಿ.ಸಿ.ಎಚ್. ಓದುತ್ತಾ ಇದ್ದದ್ರಿಂದ ಅವರ ಜೊತೆಗೆ ಬಂದು ಸರ್ಕಾರಿ ಪ್ರೌಢಶಾಲೆ ಸೇರಿದೆ. ಐಚ್ಛಿಕ ವಿಷಯ ತೆಗೆದುಕೊಳ್ಳಬೇಕಿತ್ತು. ತಂಗಿ ಅಮ್ಮಾಜಮ್ಮ ನನ್ನ ಕಣ್ಣೆದುರೇ ಸತ್ತದ್ದು ನೋಡಿದ ವೈದ್ಯ ಆಗ್ಬೇಕು ಅನ್ನಿಸಿ ವಿಜ್ಞಾನವನ್ನು ಐಚ್ಛಿಕ ವಿಷಯವಾಗಿ ತಗೊಂಡಿದ್ದೆ. ಆದ್ರೆ ಎಂಬಿಬಿಎಸ್ ಓದೋಕೆ ಆಗಲಿಲ್ಲ. ಕನ್ನಡ ಸಾಹಿತ್ಯಾನ ಮೇಜರ್ ಸಬ್ಜಕ್ಟ್ ಆಗಿ ತಗೊಂಡು ಬಿ.ಎ. ಸೇರಿದೆ. ಮುಂಚೆ ನನಗಿದ್ದ ಇನ್ನೊಂದು ಆಸೆ ಅಂದ್ರೆ ಸರ್ಕಾರಿ ಬಸ್ಸಿನ ಡ್ರೈವರ್ ಆಗೋದು, ನನ್ನ ಅಣ್ಣನನ್ನು ನಮ್ಮ ತಂದೆ ಕಂಡಕ್ಟರ್ ಕೆಲಸಕ್ಕೆ ಸೇರಿಸಬೇಕು ಅಂತಿದ್ರು. ಕಂಡಕ್ಟರ್ಗಿಂತ ದೊಡ್ಡೋನ್ ಆಗ್ಬೇಕು ಅಂತ ಡ್ರೈವರ್ ಆಗೋ ಕನಸು ಕಟ್ಟಿದ್ದೆ. ಹೀಗೇ ಏನೇನೋ ತಿರುವುಗಳು. ಬಿ.ಎ. ಮುಗಿಸಿ ಹೈಸ್ಕೂಲ್ ಮೇಷ್ಟ್ರಾದೆ. ರಾಜೀನಾಮೆ ಕೊಟ್ಟು ಎಂ.ಎ. ಓದಲು ಬೆಂಗಳೂರಿಗೆ ಬಂದೆ. ರಾಜೀನಾಮೆ ಕೊಟ್ಟಾಗ ಆ ಊರಿನ-(ಪಾವಗಡ ತಾಲ್ಲೂಕು ಕೊಂಡೇತಿಮ್ಮನಹಳ್ಳಿ) ವಿದ್ಯಾರ್ಥಿಗಳು ನಾನು ಬಿಟ್ಟು ಹೋಗಬಾರದು ಅಂತ ಮುಷ್ಕರ ಮಾಡಿದ್ರು. ಅದೊಂದು ಅವಿಸ್ಮರಣೀಯ ಅವಧಿ.
ನಿಮ್ಮ ಆರಂಭಿಕ ಸಾಹಿತ್ಯದ ಓದು-ಬರಹ ಹೇಗಿತ್ತು? ಬೆಳವಣಿಗೆಯ ಹಾದಿ ಬಗ್ಗೆ ಹೇಳ್ತೀರ?
ಸಾಹಿತ್ಯದ ಆರಂಭಿಕ ಓದು-ಬರಹ ಅನ್ನೋದು ನಾನು ಈಗಲೂ ಮೆಚ್ಚುವ ಜನಪ್ರಿಯ ಸಾಹಿತ್ಯದ ವಲಯಕ್ಕೆ ಸೇರಿತ್ತು. ಚಿಕ್ಕಂದಿನಲ್ಲಿ ಚಂದಮಾಮ, ಬಾಲಮಿತ್ರ ಅನ್ನೊ ಮಕ್ಕಳ ಮಾಸಪತ್ರಿಕೆ ಓದ್ತಾ ಇದ್ದೆ. ಆನಂತರ ಎನ್.ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗೆ ಬಂದೆ. ಮುಂದೆ ಅ.ನ.ಕೃಷ್ಣರಾಯರು, ನಾಡಿಗೇರ ಕೃಷ್ಣರಾಯರು, ಬೀಚಿ, ಬಸವರಾಜ ಕಟ್ಟೀಮನಿ, ನಿರಂಜನ, ತ್ರಿವೇಣಿ, ಎಂ.ಕೆ.ಇಂದಿರಾ–ಹೀಗೆ ಇನ್ನೂ ಹಲವರ ಪುಸ್ತಕಗಳನ್ನು ಓದಿದೆ. ಪದವಿ ತರಗತಿಗೆ ಬಂದಾಗ ಕುವೆಂಪು, ಬೇಂದ್ರೆ, ಕೆ.ಎಸ್.ನ. ಮುಂತಾದವರನ್ನು ಓದಿದೆ. ನನಗೆ ಮೊದಲಿಂದಲೂ ಪತ್ರಿಕೆಗಳಲ್ಲಿ ನನ್ನ ಬರಹಗಳು ಬರಬೇಕು ಅನ್ನೋ ಆಸೆ. ಯಾಕೆಂದ್ರೆ ಹೆಚ್ಚು ಜನಕ್ಕೆ ತಲುಪಬೇಕು ಅನ್ನೋದು ಅಂದಿಗೂ ಇಂದಿಗೂ ನನ್ನ ಬಯಕೆ. ನನ್ನ ಆರಂಭಿಕ ಬರಹಗಳು–ಅದೂ ಹಾಸ್ಯ ವಿಡಂಬನೆಯ ಬರಹಗಳು ಪ್ರಕಟ ಆದದ್ದು ‘ಜನಪ್ರಗತಿ’ ವಾರಪತ್ರಿಕೆಯಲ್ಲಿ, ಆನಂತರ ಎರಡು ಮೂರು ಸಣ್ಣ ಕತೆಗಳು ‘ಮಲ್ಲಿಗೆ’ ಮಾಸ ಪತ್ರಿಕೆಯಲ್ಲಿ ಬಂದವು. ಮುಂದೆ ನನ್ನ ಬಹಳಷ್ಟು ಕತೆ, ಕವಿತೆಗಳನ್ನು ಪ್ರಕಟಿಸಿದ್ದು ‘ಪ್ರಜಾವಾಣಿ’ ಪತ್ರಿಕೆ. ನಾನು ಎರಡನೇ ಬಿ.ಎ. ಇದ್ದಾಗಲೇ ‘ಮುಳ್ಳುಹಾದಿ’ ಅಂತ ನಾಟಕ ಬರೆದೆ. ಆನಂತರ ಎಂಟು ನಾಟಕ ಬರೆದರೂ ಕಳಪೆ ಅಂತ ಗೊತ್ತಾಗಿ ಪ್ರಕಟಿಸಲಿಲ್ಲ! ನಾಟಕ ರಚನೆ ಬಿಟ್ಟು ಕವಿತೆ, ಕತೆ, ಕಾದಂಬರಿಗೆ ಹೊರಳಿದೆ. ಈಗ ಹೆಚ್ಚು ವಿಚಾರ, ವಿಮರ್ಶೆ.
ಸಾಹಿತ್ಯ ಮತ್ತು ಸಾಹಿತಿಯನ್ನು ನೀವು ನೋಡುವ ಬಗೆ...
ಸಾಹಿತ್ಯ ಅನ್ನೋದು ಲೋಕಾಂತವನ್ನು ಏಕಾಂತಕ್ಕೆ ತಂದು ಸೃಷ್ಟಿಸುವ ಒಂದು ಪ್ರಕ್ರಿಯೆ. ಲೋಕಾಂತ ಮತ್ತು ಏಕಾಂತ ಪ್ರತ್ಯೇಕವಲ್ಲ. ಸಾಹಿತಿಗಳಾದ ನಾವು ಮೆರವಣಿಗೆಯ ನಡುವೆಯೂ ‘ಮೌನ’ವನ್ನು ಅನುಭವಿಸಬೇಕು. ಸಂತೆಯ ಸದ್ದು, ಗದ್ದಲದ ನಡುವೆಯೂ ‘ನಿಶ್ಯಬ್ದ’ವಾಗಬೇಕು. ಕೊರಳಲ್ಲಿ ಘೋಷಣೆಗಳು ಮೊಳಗುವಾಗ ಕರುಳಿನ ಕರೆಗೂ ಓಗೊಡಬೇಕು. ಸ್ಫೋಟ ಗುಣ ಒಳಗೊಂಡು ಸಂತ ಗುಣವೂ ಇರಬೇಕು. ಶತಮಾನಗಳ ಸಾಮಾಜಿಕ ‘ಮೌನ’ಗಳಿಗೆ ‘ಮಾತು’ ಕೊಡುವ ಮನುಷ್ಯರಾಗಬೇಕು. ಮಾತಿನ ಹಿಂದೆ ಮೌನ, ಸಂಭ್ರಮದ ಹಿಂದೆ ಸಂಕಟ, ಸುಖದ ಹಿಂದೆ ದುಃಖ, ನಲಿವಿನ ಹಿಂದೆ ನೋವು ಸದಾ ಹಿಂಬಾಲಿಸುತ್ತದೆಯೆಂಬ ಅರಿವು ಇರುವ ಸಾಹಿತಿ ಮತ್ತು ಸಾಹಿತ್ಯ ವ್ಯಕ್ತಿ ವೈಪರೀತ್ಯವಾಗದೆ ಸಾಮಾಜಿಕವಾಗುತ್ತದೆ. ಸಾಹಿತಿಗೆ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಬೇಕು ಎಂದು ನಂಬಿದವನು ನಾನು. ಸಾಮಾಜಿಕ ಪ್ರಜ್ಞೆಯೆಂದರೆ ಜಾತಿಪರ ಪ್ರಜ್ಞೆ ಅಲ್ಲ. ರಾಜಕೀಯ ಪ್ರಜ್ಞೆಯೆಂದರೆ ಪಕ್ಷಪರ ಪ್ರಜ್ಞೆ ಅಲ್ಲ. ಜಾತಿಗಳು, ಸಾಮಾಜಿಕ ವಾಸ್ತವ. ಆದರೆ ಅದು ಜಾತಿವಾದ ಆಗಬಾರದು. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ವಾಸ್ತವ. ಯಾವುದಾದರೂ ಪಕ್ಷದ ಬಗ್ಗೆ ಸಹಾನುಭೂತಿಯಿದ್ದರೆ ತಪ್ಪಲ್ಲ. ಆದರೆ ಆ ಪಕ್ಷದ ವಕ್ತಾರರಂತೆ ವರ್ತಿಸಬಾರದು. ಮಾನಸಿಕ ದೂರ ಸಾಹಿತಿಗಳ ಒಂದು ಮುಖ್ಯ ಮಾನದಂಡವಾಗಬೇಕು. ಇದು ನಾನು ಪ್ರತಿಪಾದಿಸುವ ಸಾಮಾಜಿಕ ಪ್ರಜ್ಞೆ, ರಾಜಕೀಯ ಪ್ರಜ್ಞೆ. ಈ ಮೂಲಕ ನಮ್ಮ ಸಾಹಿತ್ಯವು ಓದುಗರಲ್ಲಿ ಸಮಾಜಮುಖಿಯಾದ ಮಾನವೀಯ ಮಾನಸಿಕ ಪರಿಸರವನ್ನು ರೂಪಿಸಬಹುದು. ಈ ಪ್ರಕ್ರಿಯೆಗೆ ಪೂರಕವಾಗಿ ನಮಗೆ ಪರಂಪರೆಯ ಪ್ರಜ್ಞೆಯೂ ಬೇಕು. ಸಮಕಾಲೀನ ಪ್ರಜ್ಞೆಯೂ ಬೇಕು. ಹಳೆಯದೆಲ್ಲವೂ ಪ್ರಸ್ತುತ ಎಂದರೆ ನಾವು ಬದುಕಿಲ್ಲ ಎಂದರ್ಥ. ಹಳೆಯದೆಲ್ಲವೂ ಅಪ್ರಸ್ತುತ ಎಂದರೆ ನಾವು ಬೆಳೆದಿಲ್ಲ ಎಂದರ್ಥ. ಇದು ನಮ್ಮ ಅರಿವಿನಲ್ಲಿ ಇದ್ದರೆ ಜನರಲ್ಲೂ ಅರಿವು ಮೂಡಿಸಬಹುದು.
ಕನ್ನಡ ಕಟ್ಟುವ ಬಗೆ ಕುರಿತು ನಿಮ್ಮ ಅಭಿಪ್ರಾಯ?
ಕರ್ನಾಟಕದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಆಡಳಿತದಲ್ಲಿ ಕನ್ನಡಕ್ಕೇ ಅಗ್ರಸ್ಥಾನ ಇರಬೇಕು. ಕನ್ನಡವನ್ನು ಒಂದು ಭಾಷೆಯನ್ನಾಗಿಯಾದರೂ ಕಲಿಯದೆ ಶಿಕ್ಷಣ ಪೂರೈಸಬಾರದು. ಉದ್ಯೋಗಕ್ಕೆ ಅರ್ಹ ವಿದ್ಯಾರ್ಹತೆ ಅನುಭವಗಳ ಜೊತೆಗೆ ಕನ್ನಡ ಭಾಷೆಯ ಓದು-ಬರಹವೂ ಒಂದು ಮಾನದಂಡವಾಗಬೇಕು. ರಾಜ್ಯದ ಒಳಗಿನ ಆಡಳಿತವೂ ಕನ್ನಡದಲ್ಲೇ ನಡೆಯಬೇಕು. ಈ ನಿಟ್ಟಿನಲ್ಲಿ ಏನೂ ಆಗಿಯೇ ಇಲ್ಲ ಎಂದು ಹೇಳುವಂತಿಲ್ಲ. ಆದರೆ ನಾವು ಭಾಷೆಯನ್ನು ಜನಗಳ ಮೂಲಕ ನೋಡುವ ಕ್ರಮವನ್ನು ರೂಢಿಸಿಕೊಳ್ಳಬೇಕು. ಜನಗಳ ಮೂಲಕ ಭಾಷೆಯನ್ನು ನೋಡುವ ಆದ್ಯತೆಗೂ ಭಾಷೆಯ ಮೂಲಕ ಮಾತ್ರ ಜನಗಳನ್ನು ನೋಡುವ ವಿಧಾನಕ್ಕೂ ವ್ಯತ್ಯಾಸ ಇದೆ. ನನ್ನ ಮಾತನ್ನ ಹೀಗೂ ಹೇಳಬಹುದು. ಕನ್ನಡ ಜನರನ್ನು ಬದುಕಿಸಿ, ಅವರು ಕನ್ನಡವನ್ನು ಬದುಕಿಸಿಕೊಳ್ತಾರೆ. ಕನ್ನಡವನ್ನು ಓದಿದರೆ ಉದ್ಯೋಗ ಸಿಗುತ್ತೆ ಅನ್ನುವಂಥ ವಾತಾವರಣ ಸೃಷ್ಟಿಸಿ, ಈ ಮೂಲಕ ಕನ್ನಡವನ್ನು ‘ಅನ್ನದ ಭಾಷೆ’ ಮಾಡಿ. ಕನ್ನಡ ಜನರು ಕನ್ನಡವನ್ನು ಉಳಿಸಿ ಬೆಳುಸ್ತಾರೆ. ಅಂದ್ರೆ ಭಾಷೆ ಮತ್ತು ಬದುಕಿಗೆ ಸಂಬಂಧ ಕಲ್ಪಿಸುವ ನೀತಿಗಳು ನಮಗೀಗ ಬೇಕು. ಉಳಿದಂತೆ ಕನ್ನಡವು ಜನಗಳಲ್ಲಿ ವೈವಿಧ್ಯತೆಯಿಂದ ವಿವಿಧ ವಿಧಾನಗಳಲ್ಲಿ ಬಳಕೆಯಾಗುತ್ತದೆ. ಭಾಷೆಯ ಬಳಕೆಗೆ ಬೈಲಾ ಬೇಕಿಲ್ಲ. ಬಳಕೆಯು ಬಂಧಮುಕ್ತ ಬೆಳವಣಿಗೆ. ಜನಕನ್ನಡಂ ಗೆಲ್ಗೆ– ಎನ್ನುವುದು ನನ್ನ ಮನದಾಳದ ಮಾತು. ನನ್ನ ಘೋಷವಾಕ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.