ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಪದ ಸೃಷ್ಟಿ: ಹೃತ್ಪಕ್ಷಿ

Published : 29 ಸೆಪ್ಟೆಂಬರ್ 2024, 0:32 IST
Last Updated : 29 ಸೆಪ್ಟೆಂಬರ್ 2024, 0:32 IST
ಫಾಲೋ ಮಾಡಿ
Comments

ಹೃತ್ಪಕ್ಷಿ

ಕುವೆಂಪು ಅವರು ಮಲೆನಾಡಿನಲ್ಲಿ ಹುಟ್ಟಿ ಶಿಶುವಾಗಿ ಕಣ್ಣರಳಿಸಿ ಕುತೂಹಲದಿಂದ ನೋಡಿ ನಲಿದು ಆಡಿದ್ದು ಪಕ್ಷಿಗಳೊಡನೆ. ಅವುಗಳ ಕಲರವ ಕಣ್ಣು ಬಣ್ಣ ಬೆಡಗು, ಶಾಂತ ಸುಂದರ ಲಕ್ಷಣ ಎಲ್ಲರನ್ನೂ ಸೆಳೆದಾಡಿಸುತ್ತದೆ. ಅವುಗಳಂತೆ ಹಾರಿ ಆಕಾಶದಲ್ಲಿ ತೇಲಾಡಬೇಕು ಎನಿಸುತ್ತದೆ. ಕವಿಯ ಅಂತಹ ಸುಮಧುರ ಭಾವ ಕಲ್ಪನಾ ಲಹರಿ ಹೀಗೆ ಭಾವಗೀತೆಯಲ್ಲಿ ಗರಿಗೆದರಿದೆ.

‘ಹಕ್ಕಿಗಳ ಸಂಗದಲಿ

ರೆಕ್ಕೆ ಮೂಡುವುದೆನಗೆ;

ಹಾರುವುದು ಹೃತ್ಪಕ್ಷಿ

ಲೋಕಗಳ ಕೊನೆಗೆ!’

(ಹಕ್ಕಿಗಳ ಸಂಗದಲ್ಲಿ : ಅನಿಕೇತನ)

ಕರ್ಣಚೈತ್ರ

ಕುವೆಂಪು ಕವಿ ಪ್ರತಿಭೆ ವಸಂತ ಋತುವನ್ನು ಕರ್ಣಚೈತ್ರವಾಗಿ ಆಲಿಸಿದೆ. ವಸಂತ ಋತುವಿನ ಗತಿಶೀಲತೆಗೆ ಹಕ್ಕಿಗಳು ಪ್ರತೀಕವಾಗಿವೆ. ವಸಂತ ಋತುವನ್ನು ಇದುವರೆಗೆ ಅನುಭವಿಸಿ ವರ್ಣಿಸಿದ ಕವಿಗಳಿಗಿಂತ ಭಿನ್ನವಾಗಿ- ಪಕ್ಷಿಗಳ ನಾದಾನುಭವದಲ್ಲಿ ಲೀನವಾಗಿ ಆ ಋತುವನ್ನು ‘ಕರ್ಣಚೈತ್ರ’ ಎಂದು ಕರೆದಿದ್ದಾರೆ. ಅದು ವಸಂತ ಋತುವಿನ ಕರ್ಣಾನಂದ ರಸತತ್ವವನ್ನು ಆಸ್ವಾದಿಸಿ ಕಾವ್ಯದಲ್ಲಿ ಪ್ರಕಟಿಸಿದ ಆಹ್ಲಾದ. ಪಕ್ಷಿಗಳು ಆ ಋತುವಿನ ಧ್ವನಿಯಾಗಿ, ಪ್ರಕೃತಿಯ ಸಂವಹನ ಧಾತುವಾಗಿರುವ ಕಲ್ಪನಾ ಸೌಂದರ್ಯ ಕಾವ್ಯದಲ್ಲಿ ಹೊಸತು.

‘ಕರ್ಣಚೈತ್ರನಾ ಪರ್ಣಶಾಲೆ’ ವಸಂತ ಋತುವಿನ ಬಗ್ಗೆ ಧ್ಯಾನಿಸಿದ ಮಹಾಕವಿಯ ನವನವೀನ ಬೌದ್ಧಿಕ ಲಹರಿಯ ಹೊಸ ಪದ. ಅದನ್ನು ಆಶ್ರಮದ ಚಿತ್ರಣದಲ್ಲಿ ಹೀಗೆ ಬಣ್ಣಿಸಿದ್ದಾರೆ.

‘ಹಸುರು ಹೂ

ಹಣ್ಣುಕಾಯ್‍ವೊತ್ತ ತರುಗಳಲಿ ಶತಶತ ವಿವಿಧ

ಪಕ್ಷಿ ಚಿತ್ರಸ್ವನಂ ವರ್ಣವರ್ಣ ಸ್ವರ್ಣಮಯ

ರಂಗವಲ್ಲಿಯನಿಕ್ಕುತಿದೆ ಕರ್ಣಚೈತ್ರನಾ

ಪರ್ಣಶಾಲೆಯಲಿ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT