ಕುಡತಿನಿ (ತೋರಣಗಲ್ಲು): ಇಲ್ಲಿನ ಹೊಸ ಬಸ್ ನಿಲ್ದಾಣದ ಹೊರ ಆವರಣದಲ್ಲಿ ಮಹಾತ್ಮ ಗಾಂಧಿ ಅವರ ನೂತನ ಮೂರ್ತಿ ಪ್ರತಿಷ್ಠಾಪಿಸುವಂತೆ ಒತ್ತಾಯಿಸಿ ಕುಡತಿನಿಯ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಸಮ್ಮ ವಂದವಾಗಿಲ ಚಂದ್ರಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಕರವೇ ಅಧ್ಯಕ್ಷ ಬಾವಿಶಿವಕುಮಾರ್ ಮಾತನಾಡಿ, ‘ಕುಡತಿನಿ ಪಟ್ಟಣದಲ್ಲಿನ ಶಿಥಿಲಗೊಂಡ ಮಹಾತ್ಮ ಗಾಂಧಿ ಅವರ ಮೂರ್ತಿಯನ್ನು ಶೀಘ್ರ ತೆರವುಗೊಳಿಸಿ, ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಬಸ್ ನಿಲ್ದಾಣದ ಹೊರ ಆವರಣದಲ್ಲಿ ಸುಂದರ ಉದ್ಯಾನವನ ನಿರ್ಮಿಸಿ, ಅದೇ ಸ್ಥಳದಲ್ಲಿ ನೂತನ ಮೂರ್ತಿ ಪ್ರತಿಷ್ಠಾಪಿಸಬೇಕು’ ಎಂದು ಒತ್ತಾಯಿಸಿದರು.
‘ಶಿಥಿಲಗೊಂಡ ಮೂರ್ತಿ ತೆರವುಗೊಳಿಸಿ ಸೂಕ್ತ ಸ್ಥಳದಲ್ಲಿ ನೂತನ ಮೂರ್ತಿ ಪ್ರತಿಷ್ಠಾಪಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಪ್ರತಿಕ್ರಿಸಿದರು.
ಉಪಾಧ್ಯಕ್ಷ ಕೆ.ಪಂಪಾಪತಿ, ಮುಖಂಡರಾದ ಜಂಗ್ಲಿಸಾಬ್, ಮಂಜುನಾಥ, ಹನುಮಯ್ಯ, ಸಿದ್ದಯ್ಯ, ಶಿವಶಂಕರ ಇದ್ದರು.