<p><strong>ಬೆಂಗಳೂರು</strong>: ‘ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ವಿಷಾದನೀಯ. ಕೂಡಲೇ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು, ಈ ಮಸೂದೆಯನ್ನು ಜಾರಿ ಮಾಡಬೇಕು’ ಎಂದು ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. </p>.<p>ಮೈಸೂರಿನ ಕನ್ನಡ ಕ್ರಿಯಾ ಸಮಿತಿ, ಇಲ್ಲಿನ ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಮಸೂದೆ ಜಾರಿಗೆ ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.</p>.<p>ಸಾಹಿತಿ ಹಂ.ಪ. ನಾಗರಾಜಯ್ಯ ಮಾತನಾಡಿ, ‘ಬೇರೆಯವರಿಗೆ ಉದ್ಯೋಗ ನೀಡಬೇಡಿ ಎನ್ನುವುದು ನಮ್ಮ ಹೋರಾಟದ ಆಶಯವಲ್ಲ. ಮಸೂದೆಯಲ್ಲಿ ‘ಕನ್ನಡ ನಾಡಿನಲ್ಲಿ ಹುಟ್ಟಿದ, 15 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನೆಲೆಸಿರುವ, ಕನ್ನಡ ಓದಲು ಬರೆಯಲು ಬಲ್ಲ ವ್ಯಕ್ತಿ ಕನ್ನಡಿಗ’ ಎಂದು ವಿವರಿಸಲಾಗಿದೆ. ಹೀಗಾಗಿ, ಈ ಮಸೂದೆ ಜಾರಿಯಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ನಮ್ಮ ಅಸ್ಮಿತೆಯನ್ನು ಉಳಿಸುವ ಹೋರಾಟ ಇದಾಗಿದೆ’ ಎಂದು ಹೇಳಿದರು.</p>.<p>ಕವಿ ಎಲ್. ಹನುಮಂತಯ್ಯ ಮಾತನಾಡಿ, ‘ಪ್ರಾದೇಶಿಕತೆ ಇಲ್ಲದೆಯೇ ಭಾರತೀಯತೆ ಮಾತನಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಮಸೂದೆಯನ್ನು ಜಾರಿಗೆ ತರಬೇಕು. ಇಲ್ಲಿನ ಉದ್ದಿಮೆದಾರರು ಬೆಂಬಲ ನೀಡಬೇಕು. ಒಂದು ವೇಳೆ ಅಪಸ್ವರ ಎತ್ತಿದರೆ ಅವರೊಂದಿಗೆ ಮಾತುಕತೆ ನಡೆಸಿ, ಮುಂದಿನ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.</p>.<p><strong>ನ್ಯಾಯ ಸಿಗಬೇಕು: ‘</strong>ಉದ್ದಿಮೆಗಳು ತಮ್ಮ ಶಕ್ತಿ ಬಳಸಿ ಮಸೂದೆ ಜಾರಿಗೆ ಅಡ್ಡಿಪಡಿಸಿವೆ. ಸರ್ಕಾರ ಉದ್ದಿಮೆದಾರರ ಲಾಬಿಗೆ ಮಣಿಯಬಾರದು. ಆಯಾ ರಾಜ್ಯದಲ್ಲಿ ಆಯಾ ಭಾಷಿಕರಿಗೆ ನ್ಯಾಯ ಸಿಗಬೇಕು. ಆಗ ದೇಶ ಸಂಮೃದ್ಧವಾಗುತ್ತದೆ. ಆದ್ದರಿಂದ ತಕ್ಷಣ ಅಧಿವೇಶನ ಕರೆಯಬೇಕು’ ಎಂದು ಲೇಖಕಿ ಬಿ.ಟಿ. ಲಲಿತಾ ನಾಯಕ್ ಒತ್ತಾಯಿಸಿದರು. </p>.<p>ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್, ‘ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಬೇಕು. ಆಗ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನೂರಕ್ಕೆ ನೂರರಷ್ಟು ಅಲ್ಲದಿದ್ದರೂ ಶೇ 75 ರಷ್ಟಾದರೂ ಕನ್ನಡಿಗರಿಗೆ ಮೀಸಲಾತಿ ನೀಡಬೇಕು. ಬಂಡವಾಳಶಾಹಿಗಳು ಹಾಗೂ ಕನ್ನಡ ವಿರೋಧಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು’ ಎಂದರು. </p>.<p>ಮೈಸೂರಿನ ಕನ್ನಡ ಕ್ರಿಯಾ ಸಮಿತಿಯ ಸ.ರ. ಸುದರ್ಶನ, ‘ಶಿಕ್ಷಣ ಅಥವಾ ಉದ್ಯೋಗ ಸಂಬಂಧ ಪಾಶ್ಚಾತ್ಯ ದೇಶಗಳಿಗೆ ತೆರಳುವವರು ಗೇಟ್, ಟೊಫೆಲ್ ಎಂಬ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಒಪ್ಪಿಕೊಳ್ಳುವ ಉದ್ಯಮಿಗಳು, ಬುದ್ದಿಜೀವಿಗಳು ಕನ್ನಡ ಪರೀಕ್ಷೆ ನಿರಾಕರಿಸುವುದು ಗುಲಾಮಿ ಮನೋಭಾವ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p> <strong>‘ಕಾನೂನಾತ್ಮಕ ವಿಷಯವಾಗಬೇಕು’</strong></p><p>‘ಮಸೂದೆಯನ್ನು ಮೋಹನದಾಸ್ ಪೈ ಅಂತಹವರು ವಿರೋಧಿಸಿರುವುದು ಖಂಡನೀಯ. ಕನ್ನಡಿಗರಲ್ಲಿ ಕೌಶಲ ಇಲ್ಲವೆ? ಇದು ಭಾವನಾತ್ಮಕ ವಿಷಯ ಆಗಿರದೆ ಕಾನೂನಾತ್ಮಕ ವಿಷಯ ಆಗಬೇಕು. ಸಾಂವಿಧಾನಿಕವಾಗಿ ಭಾಷಾವಾರು ರಾಜ್ಯಗಳನ್ನು ರಚಿಸಿದ ಮೇಲೆ ಅದಕ್ಕೆ ಸಲ್ಲಬೇಕಾದ ಸವಲತ್ತುಗಳನ್ನು ಒದಗಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್. ನಾಗಾಭರಣ ಆಗ್ರಹಿಸಿದರು. ಕನ್ನಡ ಪರ ಹೋರಾಟಗಾರದಾದ ರಾ.ನಂ. ಚಂದ್ರಶೇಖರ ವ.ಚ. ಚನ್ನೇಗೌಡ ‘ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ ಸಂವಿಧಾನದಲ್ಲಿ ಬದಲಾವಣೆಯಾಗಿಲ್ಲ. ಇದರಿಂದ ಸಮಸ್ಯೆ ಎದುರಾಗುತ್ತಿದ್ದು ಸಂವಿಧಾನದಲ್ಲಿ ತಿದ್ದುಪಡಿ ತರಬೇಕು. ಆಗ ಶಿಕ್ಷಣ ಮತ್ತು ಉದ್ಯೋಗದಲ್ಲಿ ನ್ಯಾಯ ಸಿಗುತ್ತದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ವಿಷಾದನೀಯ. ಕೂಡಲೇ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು, ಈ ಮಸೂದೆಯನ್ನು ಜಾರಿ ಮಾಡಬೇಕು’ ಎಂದು ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. </p>.<p>ಮೈಸೂರಿನ ಕನ್ನಡ ಕ್ರಿಯಾ ಸಮಿತಿ, ಇಲ್ಲಿನ ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಮಸೂದೆ ಜಾರಿಗೆ ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.</p>.<p>ಸಾಹಿತಿ ಹಂ.ಪ. ನಾಗರಾಜಯ್ಯ ಮಾತನಾಡಿ, ‘ಬೇರೆಯವರಿಗೆ ಉದ್ಯೋಗ ನೀಡಬೇಡಿ ಎನ್ನುವುದು ನಮ್ಮ ಹೋರಾಟದ ಆಶಯವಲ್ಲ. ಮಸೂದೆಯಲ್ಲಿ ‘ಕನ್ನಡ ನಾಡಿನಲ್ಲಿ ಹುಟ್ಟಿದ, 15 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನೆಲೆಸಿರುವ, ಕನ್ನಡ ಓದಲು ಬರೆಯಲು ಬಲ್ಲ ವ್ಯಕ್ತಿ ಕನ್ನಡಿಗ’ ಎಂದು ವಿವರಿಸಲಾಗಿದೆ. ಹೀಗಾಗಿ, ಈ ಮಸೂದೆ ಜಾರಿಯಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ನಮ್ಮ ಅಸ್ಮಿತೆಯನ್ನು ಉಳಿಸುವ ಹೋರಾಟ ಇದಾಗಿದೆ’ ಎಂದು ಹೇಳಿದರು.</p>.<p>ಕವಿ ಎಲ್. ಹನುಮಂತಯ್ಯ ಮಾತನಾಡಿ, ‘ಪ್ರಾದೇಶಿಕತೆ ಇಲ್ಲದೆಯೇ ಭಾರತೀಯತೆ ಮಾತನಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಮಸೂದೆಯನ್ನು ಜಾರಿಗೆ ತರಬೇಕು. ಇಲ್ಲಿನ ಉದ್ದಿಮೆದಾರರು ಬೆಂಬಲ ನೀಡಬೇಕು. ಒಂದು ವೇಳೆ ಅಪಸ್ವರ ಎತ್ತಿದರೆ ಅವರೊಂದಿಗೆ ಮಾತುಕತೆ ನಡೆಸಿ, ಮುಂದಿನ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.</p>.<p><strong>ನ್ಯಾಯ ಸಿಗಬೇಕು: ‘</strong>ಉದ್ದಿಮೆಗಳು ತಮ್ಮ ಶಕ್ತಿ ಬಳಸಿ ಮಸೂದೆ ಜಾರಿಗೆ ಅಡ್ಡಿಪಡಿಸಿವೆ. ಸರ್ಕಾರ ಉದ್ದಿಮೆದಾರರ ಲಾಬಿಗೆ ಮಣಿಯಬಾರದು. ಆಯಾ ರಾಜ್ಯದಲ್ಲಿ ಆಯಾ ಭಾಷಿಕರಿಗೆ ನ್ಯಾಯ ಸಿಗಬೇಕು. ಆಗ ದೇಶ ಸಂಮೃದ್ಧವಾಗುತ್ತದೆ. ಆದ್ದರಿಂದ ತಕ್ಷಣ ಅಧಿವೇಶನ ಕರೆಯಬೇಕು’ ಎಂದು ಲೇಖಕಿ ಬಿ.ಟಿ. ಲಲಿತಾ ನಾಯಕ್ ಒತ್ತಾಯಿಸಿದರು. </p>.<p>ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್, ‘ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಬೇಕು. ಆಗ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನೂರಕ್ಕೆ ನೂರರಷ್ಟು ಅಲ್ಲದಿದ್ದರೂ ಶೇ 75 ರಷ್ಟಾದರೂ ಕನ್ನಡಿಗರಿಗೆ ಮೀಸಲಾತಿ ನೀಡಬೇಕು. ಬಂಡವಾಳಶಾಹಿಗಳು ಹಾಗೂ ಕನ್ನಡ ವಿರೋಧಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು’ ಎಂದರು. </p>.<p>ಮೈಸೂರಿನ ಕನ್ನಡ ಕ್ರಿಯಾ ಸಮಿತಿಯ ಸ.ರ. ಸುದರ್ಶನ, ‘ಶಿಕ್ಷಣ ಅಥವಾ ಉದ್ಯೋಗ ಸಂಬಂಧ ಪಾಶ್ಚಾತ್ಯ ದೇಶಗಳಿಗೆ ತೆರಳುವವರು ಗೇಟ್, ಟೊಫೆಲ್ ಎಂಬ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಒಪ್ಪಿಕೊಳ್ಳುವ ಉದ್ಯಮಿಗಳು, ಬುದ್ದಿಜೀವಿಗಳು ಕನ್ನಡ ಪರೀಕ್ಷೆ ನಿರಾಕರಿಸುವುದು ಗುಲಾಮಿ ಮನೋಭಾವ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p> <strong>‘ಕಾನೂನಾತ್ಮಕ ವಿಷಯವಾಗಬೇಕು’</strong></p><p>‘ಮಸೂದೆಯನ್ನು ಮೋಹನದಾಸ್ ಪೈ ಅಂತಹವರು ವಿರೋಧಿಸಿರುವುದು ಖಂಡನೀಯ. ಕನ್ನಡಿಗರಲ್ಲಿ ಕೌಶಲ ಇಲ್ಲವೆ? ಇದು ಭಾವನಾತ್ಮಕ ವಿಷಯ ಆಗಿರದೆ ಕಾನೂನಾತ್ಮಕ ವಿಷಯ ಆಗಬೇಕು. ಸಾಂವಿಧಾನಿಕವಾಗಿ ಭಾಷಾವಾರು ರಾಜ್ಯಗಳನ್ನು ರಚಿಸಿದ ಮೇಲೆ ಅದಕ್ಕೆ ಸಲ್ಲಬೇಕಾದ ಸವಲತ್ತುಗಳನ್ನು ಒದಗಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್. ನಾಗಾಭರಣ ಆಗ್ರಹಿಸಿದರು. ಕನ್ನಡ ಪರ ಹೋರಾಟಗಾರದಾದ ರಾ.ನಂ. ಚಂದ್ರಶೇಖರ ವ.ಚ. ಚನ್ನೇಗೌಡ ‘ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ ಸಂವಿಧಾನದಲ್ಲಿ ಬದಲಾವಣೆಯಾಗಿಲ್ಲ. ಇದರಿಂದ ಸಮಸ್ಯೆ ಎದುರಾಗುತ್ತಿದ್ದು ಸಂವಿಧಾನದಲ್ಲಿ ತಿದ್ದುಪಡಿ ತರಬೇಕು. ಆಗ ಶಿಕ್ಷಣ ಮತ್ತು ಉದ್ಯೋಗದಲ್ಲಿ ನ್ಯಾಯ ಸಿಗುತ್ತದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>