ಬೆಂಗಳೂರು: ಹಿರಿಯ ಛಾಯಾಗ್ರಾಹಕ ಟಿ.ಎಲ್. ರಾಮಸ್ವಾಮಿ (89) ಅವರು ಶುಕ್ರವಾರ ಬೆಳಿಗ್ಗೆ ನಿಧನರಾದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರ ಇದ್ದಾರೆ. ಬನಶಂಕರಿಯಲ್ಲಿ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದವರು ತಿಳಿಸಿದರು.
1950ರಿಂದ 1985ರವರೆಗೆ ‘ಡೆಕ್ಕನ್ ಹೆರಾಲ್ಡ್’ ಹಾಗೂ ‘ಪ್ರಜಾವಾಣಿ’ ಪತ್ರಿಕೆಗೆ ರಾಮಸ್ವಾಮಿ ಅವರು ನಿಯಮಿತವಾಗಿ ಚಿತ್ರಗಳನ್ನು ಒದಗಿಸುತ್ತಿದ್ದರು.
ಜಪಾನ್ನ ನಿಹಾನ್ ಸಿನ್ಬುನ್ ಕ್ಯೊಕಾಯಿ ಸಂಸ್ಥೆ ಮತ್ತು ಲಂಡನ್ನ ಥಾಮ್ಸನ್ ಪ್ರತಿಷ್ಠಾನದಿಂದ ಛಾಯಾಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದಿದ್ದರು.ಜಪಾನ್ನ ಅಸಾಹಿ ಶಿನ್ಬುನ್, ಮೈನಿಚಿ ಶಿನ್ಬುನ್, ಯೊಮಿಯುರಿ ಮತ್ತು ಕ್ಯೋಟೋ ಶಿನ್ಬುನ್ ಪತ್ರಿಕೆಗಳಲ್ಲೂ ಕೆಲಸ ಮಾಡಿದ್ದರು.
ರಾಜ್ಯದ ಮೊದಲ ಸುದ್ದಿ ಛಾಯಾಗ್ರಾಹಕರಾಗಿದ್ದ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿತ್ತು. ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಆಜೀವ ಸದಸ್ಯರೂ ಆಗಿದ್ದರು.