ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಪುತೋಟದಲ್ಲಿ ಅರಳಿದ ಅರಮನೆ

ನಾಳೆಯಿಂದ 10 ದಿನಗಳ ಕಾಲ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ
Published : 5 ಆಗಸ್ಟ್ 2015, 20:13 IST
ಫಾಲೋ ಮಾಡಿ
Comments

ಬೆಂಗಳೂರು: ‘ಸಸ್ಯಕಾಶಿ’ಯ ಕೆಂಪುತೋಟ ಲಾಲ್‌ಬಾಗ್ ಮತ್ತೊಂದು ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಬೆಂಗಳೂರು ಅರಮನೆ ಪ್ರತಿಕೃತಿಯೊಂದಿಗೆ ಸಜ್ಜಾಗಿದೆ.

ಇದೇ 7ರಿಂದ 16ರವರೆಗೆ ನಡೆಯಲಿರುವ ಈ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆಯಲಿದೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆಯ ಪ್ರಭಾರ ನಿರ್ದೇಶಕ ಎಚ್‌.ಎಸ್‌.ಶಿವಕುಮಾರ್‌, ‘ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕಾಗಿ ಅಂತಿಮ ಹಂತದ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ’ ಎಂದು ಹೇಳಿದರು.

‘ಮೈಸೂರು ಸಂಸ್ಥಾನದ ಯದುವಂಶದ ಅರಸರ ತ್ಯಾಗ ಮತ್ತು ಸೇವೆ ಸ್ಮರಣೆಗಾಗಿ ಈ ಬಾರಿ ಬೆಂಗಳೂರು ಅರಮನೆ ಪ್ರತಿಕೃತಿ ನಿರ್ಮಿಸಲಾಗಿದೆ.  ಪ್ರದರ್ಶನವನ್ನು ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಮತ್ತು  ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಆಗಸ್ಟ್‌ 7 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ’ ಎಂದು ತಿಳಿಸಿದರು.

‘ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ  ಅವರು ಲಾಲ್‌ಬಾಗ್‌ ಸಸ್ಯತೋಟದ ವರ್ಣಚಿತ್ರ ಪುಸ್ತಕ ಮತ್ತು ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೀವ್‌ ಚಾವ್ಲಾ ಕಿರುಹೊತ್ತಗೆ ಬಿಡುಗಡೆ ಮಾಡಲಿದ್ದಾರೆ’ ಎಂದರು. ‘ಆಗಸ್ಟ್‌ 8 ಮತ್ತು 9 ರಂದು ಎಂ.ಎಚ್‌.ಮರಿಗೌಡ ಸ್ಮಾರಕ ಭವನದಲ್ಲಿ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್‌, ಡಚ್‌ ಹೂವಿನ ಜೋಡಣೆ, ಥಾಯ್‌ ಆರ್ಟ್‌, ಜಾನೂರು ಒಣಹೂವಿನ ಜೋಡಣೆಯ ಕಲೆಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ’ ಎಂದು ಹೇಳಿದರು.

‘ಪ್ರದರ್ಶನದ ಅಂಗವಾಗಿ ನಡೆಸುವ ಹೂತೋಟಗಳು, ತಾರಸಿ ತೋಟ ಹಾಗೂ ಉದ್ಯಾನ ಸ್ಪರ್ಧೆಗಳು ನಡೆಯಲಿವೆ. ಎಲ್ಲ ಸ್ಪರ್ಧಾ ವಿಜೇತರಿಗೆ ಆಗಸ್ಟ್‌ 14 ರಂದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಕಲಾಂ ಮರಳು ಶಿಲ್ಪ: ಇತ್ತೀಚೆಗಷ್ಟೇ ನಿಧನರಾದ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಮರಳಿನ ಶಿಲ್ಪ ಈ ಬಾರಿ ಪ್ರದರ್ಶನದ ಆಕರ್ಷಣೆಗಳಲ್ಲಿ ಒಂದು. ಮೈಸೂರಿನ ಮರಳು ಶಿಲ್ಪಿ ಗೌರಿ ಅವರು ಒಂದು ಲಾರಿ ಮರಳಿನಲ್ಲಿ ಕಲಾಂ ಅವರ ಶಿಲ್ಪವನ್ನು ಸಿದ್ಧಪಡಿಸುತ್ತಿದ್ದಾರೆ.

ಚಿತ್ತಾಕರ್ಷಕ ಪ್ರದರ್ಶನ: ಈ ಬಾರಿ ಪ್ರದರ್ಶನದಲ್ಲಿ ಕುಂಡಗಳಲ್ಲಿ ಬೆಳೆದ 150ಕ್ಕೂ ವಿವಿಧ ಬಗೆಯ ಆಲಂಕಾರಿಕ ಹೂವುಗಳು ಪುಷ್ಪ ರಸಿಕರ ಮನ ತಣಿಸಲಿವೆ. ಊಟಿಯ ಫರ್ನ್‌ಹಿಲ್‌ ಉದ್ಯಾನದ ಶೀತವಲಯದ ಹೂವುಗಳು, 45 ವರ್ಷಗಳಷ್ಟು ಹಳೆಯದಾದ ಸ್ಟ್ಯಾಗ್‌ಹಾರ್ನ್‌ ಫರ್ನ್ಸ್‌ ಹೂವುಗಳು ಪುಷ್ಪ ಪ್ರದರ್ಶನದ ಮೆರಗು ಹೆಚ್ಚಿಸಲಿವೆ. ಸಸ್ಯತೋಟದ ವಾದ್ಯರಂಗ ಪ್ರದೇಶದಲ್ಲಿ ಆಯೋಜಿಸುವ ಭಾರತ ಸಂಗೀತ ಪರಂಪರೆಯ ವಾದ್ಯಗಳ ವಿನ್ಯಾಸಗಳು ಬಣ್ಣ ಬಣ್ಣದ ಹೂವುಗಳ ಅಲಂಕಾರದಿಂದ ಮನಸೂರೆಗೊಳ್ಳಲಿವೆ.

ಪ್ರದರ್ಶನದಲ್ಲಿ ಸಾವಯವ ಹಣ್ಣು ಮತ್ತು ತರಕಾರಿಗಳನ್ನು ಚಿಕ್ಕ ಜಾಗ, ಮನೆಯ ಬಾಲ್ಕನಿ ಮತ್ತು ತಾರಸಿಗಳಲ್ಲಿ ಕಡಿಮೆ ನೀರು ಬಳಸಿ ಬೆಳೆಸುವುದು ಹೇಗೆ ಎನ್ನುವ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ಈ ವರ್ಷ ಮೈಸೂರು ಅರಸರಿಗೆ ಸಂಬಂಧಿಸಿದ ಛಾಯಾಚಿತ್ರಗಳುಳ್ಳ ‘ರಾಜ ದರ್ಶನ’ ಎಂಬ ವಿಶೇಷ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಬೋನ್ಸಾಯ್‌ ಉದ್ಯಾನದಲ್ಲಿ  ಆಳೆತ್ತರ ಆನೆ ನಿರ್ಮಿಸಿ ಅದನ್ನು ಬಣ್ಣ ಬಣ್ಣದ ದಪ್ಪ ಮೆಣಸಿನಕಾಯಿಯಿಂದ ಅಲಂಕರಿಸುವ ಹೊಣೆಯನ್ನು ಹಾಪ್‌ಕಾಮ್ಸ್‌ ಹೊತ್ತಿದೆ.

ಸಸ್ಯ ಸಂತೆ: ಪ್ರದರ್ಶನದಲ್ಲಿ ಔಷಧಿ, ಆಲಂಕಾರಿಕ ಗಿಡಗಳೊಂದಿಗೆ ಬಗೆಬಗೆ ಹೂವುಗಳು ಮತ್ತು ಹಣ್ಣುಗಳ ಗಿಡಗಳನ್ನು ಮಾರಾಟ ಮಾಡಲು ಮಳಿಗೆಗಳು ಇರಲಿವೆ. ಜತೆಗೆ, ಗೊಬ್ಬರ, ಔಷಧಿ ಮತ್ತು ತೋಟಗಾರಿಕೆಗೆ ಅಗತ್ಯವಾದ ಸಲಕರಣೆಗಳು ಸಸ್ಯಸಂತೆಯಲ್ಲಿ ದೊರೆಯಲಿವೆ.

ಶಾಲಾ ಮಕ್ಕಳಿಗೆ ಉಚಿತ ಪ್ರವೇಶ: ಶಾಲಾ ಮಕ್ಕಳಿಗೆ ಆಗಸ್ಟ್‌ 14 ಮತ್ತು 15 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ವಾಹನ ತರುವವರ ಗಮನಕ್ಕೆ: ಪ್ರದರ್ಶನದ ದಿನಗಳಲ್ಲಿ ಲಾಲ್‌ಬಾಗ್‌ನ ನಾಲ್ಕು ಪ್ರವೇಶ ದ್ವಾರಗಳ ಮೂಲಕ ಸಾರ್ವಜನಿಕ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕರೆತರುವ ವಾಹನಗಳು ಮಾತ್ರ ಜೋಡಿರಸ್ತೆಯ ಮೂಲಕ ಲಾಲ್‌ಬಾಗ್‌ ಪ್ರವೇಶಿಸಿ ಬಂಡೆಯ ಎಡ ಪ್ರದೇಶದಲ್ಲಿರುವ ವಾಹನ ನಿಲ್ದಾಣದಲ್ಲಿ ನಿಲುಗಡೆ ಮಾಡಬಹುದು. ಪ್ರದರ್ಶನಕ್ಕೆ ಬರುವವರು ತಮ್ಮ ವಾಹನಗಳನ್ನು ಲಾಲ್‌ಬಾಗ್‌ ಸಮೀಪದ ಶಾಂತಿನಗರ ಬಸ್‌ ನಿಲ್ದಾಣದಲ್ಲಿರುವ ಬಹುಮಹಡಿ ನಿಲ್ದಾಣದಲ್ಲಿ ನಿಲುಗಡೆ ಮಾಡಿದರೆ ಅನುಕೂಲ. ಜೆ.ಸಿ.ರಸ್ತೆಯ ಕಡೆಯಿಂದ ಬರುವ ವಾಹನ ಸವಾರರು ಮಯೂರ ರೆಸ್ಟೋರೆಂಟ್‌ ಬಳಿ ಇರುವ ಬಿಬಿಎಂಪಿಯ ಬಹುಮಹಡಿ ವಾಹನ ನಿಲ್ದಾಣದಲ್ಲಿ ವಾಹನ ನಿಲ್ಲಿಸಬಹುದು.

ದ್ವಿಚಕ್ರ ವಾಹನ ನಿಲುಗಡೆ ವ್ಯವಸ್ಥೆ: ಲಾಲ್‌ಬಾಗ್‌ ಬಳಿಯ ಅಲ್‌ ಅಮೀನ್‌ ಕಾಲೇಜು ಮೈದಾನದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಭದ್ರತಾ ಕಪಾಟು ವ್ಯವಸ್ಥೆ: ಲಾಲ್‌ಬಾಗ್‌ನ ನಾಲ್ಕೂ ಪ್ರವೇಶದ್ವಾರಗಳ ಬಳಿ ಭದ್ರತಾ ಕಪಾಟುಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಮೊಬೈಲ್‌, ಕ್ಯಾಮೆರಾ ಹೊರತುಪಡಿಸಿ ಉದ್ಯಾನದೊಳಗೆ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ನಿಷೇಧಿಸಲಾಗಿದೆ. ಒಂದೊಮ್ಮೆ, ಪ್ರವಾಸಿಗರು ಇತರೆ ವಸ್ತುಗಳನ್ನು ತಂದರೆ ಅವುಗಳನ್ನು ಈ ಭದ್ರತಾ ಕಪಾಟುಗಳಲ್ಲಿ ಇಡಬೇಕು.

ತಿಂಡಿ ತಿನಿಸು ತರದಿರಿ: ಲಾಲ್‌ಬಾಗ್‌ನಲ್ಲಿ ಅನಧಿಕೃತ ಮಾರಾಟ ನಿಷೇಧಿಸಲಾಗಿದೆ. ಜತೆಗೆ, ಉದ್ಯಾನದೊಳಗಿನ ಮಳಿಗೆದಾರರು, ಸಾರ್ವಜನಿಕರು ಪ್ಲಾಸ್ಟಿಕ್‌ ಬಳಕೆ ಮಾಡುವುದು ಮತ್ತು ಉದ್ಯಾನದೊಳಗೆ ತಿಂಡಿ ತಿನಿಸು ತರುವುದನ್ನು ನಿರ್ಬಂಧಿಸಲಾಗಿದೆ.
ಉದ್ಯಾನದೊಳಗಿರುವ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಹಣ್ಣುಗಳ ಸಲಾಡ್‌, ಒಣ ಹಣ್ಣುಗಳು, ತಂಪು ಪಾನೀಯ, ಕುಡಿಯುವ ನೀರು ಮಾತ್ರ ದೊರೆಯುತ್ತದೆ. ಹೀಗಾಗಿ, ಪ್ರದರ್ಶನಕ್ಕೆ ಬರುವವರು ಮಕ್ಕಳಿಗೆ ಸಾಧ್ಯವಾದಷ್ಟು ಮನೆಯಲ್ಲಿಯೇ ಆಹಾರ ತಿನ್ನಿಸಿ ಕರೆತರಬೇಕು.

ಸಿಸಿ ಕ್ಯಾಮೆರಾ, ಡ್ರೋನ್‌ ಕಣ್ಗಾವಲು: ‘ಪ್ರದರ್ಶನದ ಭದ್ರತೆಗಾಗಿ ಉದ್ಯಾನದಲ್ಲಿ ಒಬ್ಬ ಡಿಸಿಪಿ, ಮೂವರು ಎಸಿಪಿ, ಒಂಬತ್ತು ಜನ ಇನ್‌ಸ್ಪೆಕ್ಟರ್‌ಗಳು, ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳು ಹಾಗೂ 350 ಪೊಲೀಸರನ್ನು ನಿಯೋಜಿಸಲಾಗುತ್ತದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್‌ ಕುಮಾರ್‌ ತಿಳಿಸಿದರು. ‘ಜನಸಂದಣಿ ಮೇಲೆ ಕಣ್ಣಿಡಲು ಒಂದು ಡ್ರೋನ್‌ ಬಳಕೆ ಮಾಡಲಾಗುತ್ತಿದೆ. 48 ಸಿಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ನಿಯಂತ್ರಣ ಕೊಠಡಿ ತೆರೆದು ಪ್ರವಾಸಿಗರ ಮೇಲೆ ಸದಾ ನಿಗಾ ಇಡಲಾಗುತ್ತದೆ’ ಎಂದು  ಅವರು
ಹೇಳಿದರು.
*
ಹೇಗಿದೆ ಹೂವಿನ ಅರಮನೆ?
ಗಾಜಿನಮನೆಯ ಮಧ್ಯಭಾಗದಲ್ಲಿ 45 ಅಡಿ ಉದ್ದ, 20 ಅಡಿ ಅಗಲ ಪ್ರದೇಶದಲ್ಲಿ ಹೂಬಳ್ಳಿಗಳಲ್ಲಿ ಮೈದಳೆದ ಬೆಂಗಳೂರು ಅರಮನೆ 35 ಅಡಿ ಎತ್ತರವಿದೆ. ಅರಮನೆಯ ಮುಂಭಾಗದಲ್ಲಿ ಚಾಮರಾಜ ಒಡೆಯರ್‌, ಮುಮ್ಮಡಿ ಕೃಷ್ಣರಾಜ ಒಡೆಯರ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌, ಜಯಚಾಮರಾಜ ಒಡೆಯರ್‌ ಮತ್ತು ಶ್ರೀಕಂಠದತ್ತ ಒಡೆಯರ್‌ ಅವರ ಆಳೆತ್ತರದ ವಿಗ್ರಹಗಳನ್ನು ನಿಲ್ಲಿಸಲಾಗಿದೆ.

ಅರಮನೆಯ ಪರಿಸರಕ್ಕೆ ರಂಗು ಮೂಡಿಸಲು ನಾಲ್ಕು ಆನೆ, ಎರಡು ಕುದುರೆ ಮತ್ತು ಎರಡು ಜಿಂಕೆಗಳ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಮೈಸೂರು ಅರಮನೆ ಮುಂದಿರುವ ಲೋಹದ ಸಿಂಹದ ಪ್ರತಿಮೆಗಳನ್ನು ಹೋಲುವ ಪ್ರತಿಕೃತಿಗಳನ್ನು ಗಾಜಿನ ಮನೆ ಮುಂಭಾಗದ ಹುಲ್ಲು ಹಾಸಿನ ಮೇಲೆ ಅಳವಡಿಸಲಾಗಿದೆ.

ಸಿಪಾಯಿಗಳ ಸ್ವಾಗತ: ಅರಮನೆ ಎಂದ ಮೇಲೆ ಪಲ್ಲಕ್ಕಿ, ಸಿಂಹಾಸನ, ಸಿಪಾಯಿಗಳು ಇರದಿದ್ದರೇನು ಚೆಂದ? ಹೀಗಾಗಿ, ಅರಮನೆಯ ಉತ್ತರ ಭಾಗದಲ್ಲಿ ಪಲ್ಲಕ್ಕಿ, ದಕ್ಷಿಣ ಭಾಗದಲ್ಲಿ ರಾಜ ಸಿಂಹಾಸನ ಇಡಲಾಗಿದೆ. ಪ್ರದರ್ಶನಕ್ಕೆ ಬರುವವರನ್ನು ಸ್ವಾಗತಿಸಲು ನಾಲ್ವರು ಸಿಪಾಯಿಗಳು ಇರಲಿದ್ದಾರೆ. ಅರಮನೆ ಆವರಣದಾಚೆಗೆ ನಾಲ್ಕು ಫಿರಂಗಿಗಳು ಮತ್ತು ಮೈಸೂರು ಮಾದರಿಯಲ್ಲಿ ವೃತ್ತಾಕಾರದ ಮಂಟಪಗಳು ಮೈದಳೆದಿವೆ.

3.5 ಲಕ್ಷ ಗುಲಾಬಿಗಳ ಅಲಂಕಾರ
‘ಈ ಅರಮನೆ ವಿನ್ಯಾಸವನ್ನು ಕಳೆದ 15 ದಿನಗಳಿಂದ 30 ಜನ ಪರಿಣಿತರ ತಂಡ ಸಿದ್ಧಪಡಿಸಿದೆ. ಅರಮನೆ ಅಲಂಕಾರಕ್ಕಾಗಿ ಹಳದಿ, ಕೆಂಪು ಮತ್ತು ಬಿಳಿ ಬಣ್ಣದ ಸುಮಾರು 3.5 ಲಕ್ಷ ಗುಲಾಬಿಗಳನ್ನು ಬಳಸಲಾಗುತ್ತಿದೆ’ ಎಂದು  ಅರಮನೆ ನಿರ್ಮಾಣ ಕಾರ್ಯ ಗುತ್ತಿಗೆ ಪಡೆದಿರುವ ಸ್ನಿಲು ಫ್ಲವರ್ಸ್‌ ಮಾಲೀಕ ಎಸ್‌.ಪಿ.ಅಗರ್‌ವಾಲ್‌ ತಿಳಿಸಿದರು. ‘ಅರಮನೆಗಾಗಿ ನಗರದ ಸುತ್ತಮುತ್ತಲಿನ ಫಾರ್ಮ್‌ಗಳಿಂದ ಗುಣಮಟ್ಟದ ಗುಲಾಬಿ ತರಿಸಲಾಗಿದೆ. 4–5 ದಿನಕ್ಕೊಮ್ಮೆ ಅಲಂಕಾರ ಮಾಡಿದ ಹೂವುಗಳನ್ನು ಬದಲಿಸಲಾಗುತ್ತದೆ’ ಎಂದು ಹೇಳಿದರು.
*
ಮುಖ್ಯಾಂಶಗಳು
* ಆಗಸ್ಟ್‌ 14 ಮತ್ತು 15 ರಂದು ಶಾಲಾ ಮಕ್ಕಳಿಗೆ ಉಚಿತ ಪ್ರವೇಶ
*ಅಬ್ದುಲ್‌ ಕಲಾಂ ಅವರ ಮರಳು ಶಿಲ್ಪ  ವಿಶೇಷ ಆಕರ್ಷಣೆ
* ಭದ್ರತೆಗಾಗಿ ಸಿಸಿ ಟಿವಿ ಕ್ಯಾಮೆರಾ, ಡ್ರೋನ್‌ ಕಣ್ಗಾವಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT