ಔರಾದ್: ತಾಲ್ಲೂಕಿನ ಗಡಿ ಭಾಗದ ಮರಾಠಿ ಮಾಧ್ಯಮ ಶಾಲೆಯಲ್ಲಿ ಕನ್ನಡ ವಿಭಾಗ ತೆರೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಬೇಡಿಕೆ ಮಂಡಿಸಿದೆ.
ವೇದಿಕೆಯ ತಾಲ್ಲೂಕು ಅಧ್ಯಕ್ಷ ಅನೀಲ ದೇವಕತೆ, ಗೌರವಾಧ್ಯಕ್ಷ ಬಸವರಾಜ ಶೆಟಕಾರ ಮತ್ತಿತರರು ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಶಿಕ್ಷಣ ಸಚಿವರಿಗೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ಅನೇಕ ಗ್ರಾಮ ಮತ್ತು ತಾಂಡಾ ಜನರು ತಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಬಯಸಿದ್ದರೂ ಸರ್ಕಾರ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಬಸವನವಾಡಿ ತಾಂಡಾ ಹಾಗೂ ಹುಲ್ಯಾಳ ತಾಂಡಾ ನಿವಾಸಿಗಳು ಕನ್ನಡ ಮಾಧ್ಯಮ ಶಾಲೆ ತೆರೆಯಲು ಲಿಖಿತ ಮನವಿ ಕೊಟ್ಟರೂ ಸ್ಪಂದನೆ ಸಿಗುತ್ತಿಲ್ಲ.
ಡೊಂಗರಗಾಂವ್ದಲ್ಲಿ ಸದ್ಯ 1ರಿಂದ 5ನೇ ತರಗತಿ ಶಾಲೆ ಇದ್ದು, ಅಲ್ಲಿ 8ನೇ ತರಗತಿ ವ್ಯವಸ್ಥೆ ಮಾಡುವಂತೆ ಪಾಲಕರು ಬೇಡಿಕೆ ಸಲ್ಲಿಸಿದ್ದಾರೆ. ಈ ಬೇಡಿಕೆಗೂ ಸ್ಪಂದನೆ ಸಿಗದ ಕಾರಣ ಅನೇಕ ಪಾಲಕರು ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕನ್ನಡ ಶಾಲೆ ವಿಷಯದಲ್ಲಿ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಸಿದ್ದಾರೆ.
ಸೋನು ರಾಠೋಡ್, ಆಕಾಶ ಮೇತ್ರೆ, ಬಾಲಾಜಿ ಕಾಸ್ಲೆ, ಭೀಮರಾವ್ ಪವಾರ್, ದಿಲೀಪ ಹಕ್ಕೆ, ರಾಜು ಸೇರಿ ತಾಂಡಾ ನಿವಾಸಿಗಳು ಹಾಜರಿದ್ದರು.