ಬಸವಕಲ್ಯಾಣ (ಬೀದರ್): ತಾಲ್ಲೂಕಿನ ಮಂಠಾಳ ಠಾಣೆಯ ವ್ಯಾಪ್ತಿಯ ಉಜಳಂಬ ಗ್ರಾಮದ ಸರ್ವೇ ನಂಬರ್ ಹೊಂದಿರುವ ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿನ ಹೊಲವೊಂದರಲ್ಲಿ ಬೆಳೆದ ಅಂದಾಜು ₹3 ಕೋಟಿ ಮೌಲ್ಯದ ಗಾಂಜಾ ಗಿಡಗಳನ್ನು ಭಾನುವಾರ ಜಿಲ್ಲಾ ಪೊಲೀಸರು ಜಪ್ತಿ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿಯವರ ನೇತೃತ್ವದಲ್ಲಿ ದಾಳಿ ನಡೆಸಿ, ಗಾಂಜಾ ಬೆಳೆ ಕಿತ್ತು ಹಾಕಿ ನಾಶಪಡಿಸಲಾಗಿದೆ.
6 ಅಡಿ ಎತ್ತರ ಬೆಳೆದಿದ್ದ ಗಾಂಜಾ ಗಿಡಗಳನ್ನು ನಾಶಪಡಿಸಿದರು. ತಾವು ಸ್ವತಃ ಸಹ ಕೆಲ ಗಿಡಗಳನ್ನು ಕಿತ್ತು ಹಾಕಿದರು. ಮಹಾರಾಷ್ಟ್ರ ಮೂಲದ ಬಸವರಾಜ ಎನ್ನುವವರು ಗಾಂಜಾ ಬೆಳೆಸಿದ್ದರು.
ನಂತರ ಪ್ರದೀಪ ಗುಂಟಿ ಅವರು ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, `ಪೊಲೀಸ್ ಸಿಬ್ಬಂದಿಯಿಂದ ಈಗಾಗಲೇ ಆಳೆತ್ತರಕ್ಕೆ ಬೆಳೆದ ನೂರಾರು ಗಾಂಜಾ ಗಿಡಗಳನ್ನು ಕಿತ್ತು ಹಾಕಿದ್ದೇವೆ. ಗಿಡ ಬೆಳೆದ ಜಮೀನು ಕರ್ನಾಟಕದ ಉಜಳಂಬ ಗ್ರಾಮದ ವ್ಯಾಪ್ತಿಯಲ್ಲಿದ್ದರೆ ಇದರ ಮಾಲೀಕ ಬಸವರಾಜ ಎನ್ನುವವರು ಮಹಾರಾಷ್ಟ್ರದಲ್ಲಿ ವಾಸಿಸುತ್ತಾರೆ' ಎಂದರು.
ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್, ಸಿಪಿಐ ಕೃಷ್ಣಕುಮಾರ ಪಾಟೀಲ, ಸಬ್ ಇನ್ ಸ್ಪೆಕ್ಟರ್ ರೇಣುಕಾ ಹಾಗೂ ಸಿಬ್ಬಂದಿ ಹಾಜರಿದ್ದರು