ಚಾಮರಾಜನಗರ: ಜನಪದ ಕಲೆಗಳ ನಾಡು, ಮಲೆ ಮಾದಪ್ಪನ ಬೀಡು ಚಾಮರಾಜನಗರದಲ್ಲಿ ಅ.7ರಿಂದ 9ರವರೆಗೆ ವಿಜೃಂಭಣೆಯಿಂದ ‘ಚೆಲುವ ಚಾಮರಾಜನಗರ ದಸರಾ’ ಮಹೋತ್ಸವ ನಡೆಯುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಭಾಗವಾಗಿ ನಡೆಯತ್ತಿರುವ ಚಾಮರಾಜನಗರ ದಸರಾಗೆ ಇಡೀ ನಗರ ನವವಧುವಂತೆ ಸಿಂಗಾರಗೊಂಡಿದೆ.
ಚಾಮರಾಜೇಶ್ವರ ದೇವಸ್ಥಾನದಿಂದ 1 ಕಿ.ಮೀ ಉದ್ದದವರೆಗಿನ ಬಿ.ರಾಚಯ್ಯ ಜೋಡಿ ರಸ್ತೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ದೇವಸ್ಥಾನದ ಉದ್ಯಾನದ ಬಳಿ ಮಲೆ ಮಹದೇಶ್ವರ, ಚಾಮುಂಡೇಶ್ವರಿ ದೇವಿಯ ಮಾದರಿಯ ಎಲ್ಇಡಿ ಚಿತ್ತಾರ ಚಿತ್ತಾಕರ್ಷಕವಾಗಿದೆ.
ಜಿಲ್ಲಾಡಳಿತ ಭವನದ ಮುಂಭಾಗ ಬುದ್ದ, ಬಸವ, ಅಂಬೇಡ್ಕರ್ ಮಾದರಿಯ ಲೈಟಿಂಗ್ಸ್ ಸುಂದರವಾಗಿ ಮೂಡಿಬಂದಿದೆ. ಜಿಲ್ಲಾಡಳಿತ ಭವನ, ಎಸ್ಪಿ ಕಚೇರಿ, ನಗರಸಭೆ, ಚೆಸ್ಕಾಂ, ತಾಲ್ಲೂಕು ಆಡಳಿತ ಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳು ಅಲಂಕೃತಗೊಂಡು ಕಣ್ಣಿಗೆ ಮುದ ನೀಡುತ್ತಿವೆ.
ಜಿಲ್ಲೆಯ ನೆಲಮೂಲದ ಜನಪದ ಸಂಸ್ಕೃತಿ, ಮಹದೇಶ್ವರ, ಮಂಟೆಸ್ವಾಮಿಯ ಪರಂಪರೆ, ತತ್ವಪದಗಳ ಶ್ರೀಮಂತಿಕೆಯನ್ನು ಉಣಬಡಿಸಲು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಲ್ಲದೆ ಯುವ ದಸರಾ, ಫಲಪುಷ್ಪ ಪ್ರದರ್ಶನ, ಕವಿಗೋಷ್ಠಿ, ರೈತ ದಸರಾ, ದಸರಾ ಗ್ರಾಮೀಣ ಕ್ರೀಡಾಕೂಟ, ಪಾರಂಪರಿಕ ನಡಿಗೆ, ಮ್ಯಾರಥಾನ್, ಚಿತ್ರಸಂತೆ, ವಸ್ತು ಪ್ರದರ್ಶನ, ಆಹಾರ ಮೇಳವೂ ಪ್ರಮುಖ ಆಕರ್ಷಣೆಯಾಗಿದೆ.
ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಮುಖ್ಯವೇದಿಕೆ ನಿರ್ಮಾಣ ಮಾಡಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರ, ಜೆ.ಎಚ್.ಪಟೇಲ್ ಸಭಾಂಗಣಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಅ.7ರಂದು 12.15ಕ್ಕೆ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಜಿಲ್ಲಾ ದಸರಾ ಮಹೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ದೇವಸ್ಥಾನದ ಉದ್ಯಾನವನದಲ್ಲಿ ಚಿತ್ರಸಂತೆ ಉದ್ಘಾಟನೆಯಾಗಲಿದ್ದು ನಂತರ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಉದ್ಘಾಟನೆಯಾಗಲಿದ್ದು, ಮಹಿಳಾ ದಸರಾಗೂ ಚಾಲನೆ ದೊರೆಯಲಿದೆ. ಮಧ್ಯಾಹ್ನ 1ಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, 1.15ಕ್ಕೆ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕವಿಗೋಷ್ಠಿ ಆರಂಭವಾಗಲಿದೆ.
ಮಧ್ಯಾಹ್ನ 1.45ಕ್ಕೆ ಜಿಲ್ಲಾಡಳಿತ ಭವನದಿಂದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದವರೆಗೆ ಕಲಾತಂಡಗಳ ಮುಖ್ಯ ಮೆರವಣಿಗೆ, ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ, ಮಧ್ಯಾಹ್ನ 3.45ಕ್ಕೆ ಸಿಂಹ ಚಿತ್ರಮಂದಿರದಲ್ಲಿ ಚಲನಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ.
ಸಂಜೆ 6 ಗಂಟೆಗೆ ನಗರದ ಜನನ ಮಂಟಪದಲ್ಲಿ ಚಾಮರಾಜೇಶ್ವರ ಸ್ವಾಮಿಯ ದರ್ಬಾರ್, 6.30ಕ್ಕೆ ದೇವಸ್ಥಾನದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, 7.30ಕ್ಕೆ ಯುವದಸರಾಗೆ ಚಾಲನೆ ಸಿಗಲಿದೆ.
ಅ.8ರಂದು ಬೆಳಿಗ್ಗೆ 6.30ಕ್ಕೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನ ಆವರಣದಿಂದ ಬಿ.ರಾಜಯ್ಯ ಜೋಡಿ ರಸ್ತೆಯ ಮೂಲಕ ರಾಮಸಮುದ್ರದ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ, ಲೋಕೋಪಯೋಗಿ ಪ್ರವಾಸಿ ಮಂದಿರದವರೆಗೆ ಮ್ಯಾರಥಾನ್ ಇದೆ. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟಲಿವೆ.
ಅ.9ರಂದು ಬೆಳಿಗ್ಗೆ 6.30ಕ್ಕೆ ದೇವಸ್ಥಾನ ಆವರಣದಿಂದ ಜಿಲ್ಲಾಡಳಿತ ಭವನದವರೆಗೆ ಪಾರಂಪರಿಕ ನಡಿಗೆ, ಬೆಳಿಗ್ಗೆ 9.30ಕ್ಕೆ ರೈತ ದಸರಾ ಮೆರವಣಿಗೆ, 11 ಗಂಟೆಗೆ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ರೈತ ದಸರಾ ವೇದಿಕೆ ಕಾರ್ಯಕ್ರಮ ನಡೆಯಲಿದೆ. ದೇವಸ್ಥಾನದ ಆವರಣ, ಜಿಲ್ಲಾ ರಂಗಮಂದಿರ, ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ದಿನಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6.30ರಿಂದ ರಾತ್ರಿ 9.45ರವರೆಗೆ ದೇವಸ್ಥಾನದ ಆವರಣದಲ್ಲಿ ದಸರಾ ಸಮಾರೋಪ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.