ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ 2018ನೇ ಬ್ಯಾಚ್ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಜಂಟಿ ನಿರ್ದೇಶಕ, ಹುಬ್ಬಳ್ಳಿ-ಧಾರವಾಡ ಡಿಸಿಪಿ ಹಾಗೂ ಚಿಂತಾಮಣಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರವಹಿಸಿಕೊಂಡು 20 ದಿನಗಳಾಗಿದ್ದು ಅಪರಾಧ ತಡೆ ಮತ್ತು ಜಿಲ್ಲೆಯ ಪೊಲೀಸ್ ವ್ಯವಸ್ಥೆ ಕಾರ್ಯನಿರ್ವಹಣೆಯ ಬಗ್ಗೆ ಅವರು ‘ಪ್ರಜಾವಾಣಿ’ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಯಾವ ವಿಷಯಗಳ ಮೇಲೆ ಪ್ರಮುಖವಾಗಿ ಗಮನ ಕೇಂದ್ರೀಕರಿಸಿದ್ದೀರಿ?
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೈಬರ್ ಕ್ರೈಂ ಗಣನೀಯವಾಗಿ ಹೆಚ್ಚುತ್ತಿದೆ. ಉಡುಗೊರೆಗಳ ಹೆಸರಿನಲ್ಲಿ, ಒಟಿಪಿ, ಹೂಡಿಕೆ ಮಾಡಿದರೆ ಉತ್ತಮ ಆದಾಯ ದೊರೆಯುತ್ತದೆ ಎಂದು ನಂಬಿಕೆ ಹುಟ್ಟಿಸಿ ಹೀಗೆ ವಿವಿಧ ರೀತಿಯಲ್ಲಿ ಸೈಬರ್ ಕ್ರೈಂಗಳು ಹೆಚ್ಚುತ್ತಿವೆ. ಈ ಬಗ್ಗೆ ಜನರನ್ನು ಮತ್ತಷ್ಟು ಜಾಗೃತಗೊಳಿಸಬೇಕಾಗಿದೆ. ಆದ್ದರಿಂದ ಸೈಬರ್ ಅಪರಾಧಗಳ ತಡೆಗೆ ಪ್ರಮುಖವಾಗಿ ಆದ್ಯತೆ ನೀಡಲಾಗುವುದು. ಈ ಪ್ರಕರಣಗಳ ತನಿಖೆಯನ್ನು ಸೂಕ್ತವಾಗಿ ನಡೆಸಲಾಗುವುದು. ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಯುವ ಸಮುದಾಯ ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ. ಈಶ ಯೋಗ ಕೇಂದ್ರ ಮತ್ತು ನಂದಿಗಿರಿಧಾಮದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಈ ಕಾರಣದಿಂದಲೂ ಸಂಚಾರ ನಿಯಮಗಳ ಉಲ್ಲಂಘನೆ ಆಗುತ್ತಿವೆ. ಇವುಗಳ ತಡೆ ವಿಚಾರವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ಮತ್ತೂ ಉಲ್ಲಂಘಿಸಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಅಪರಾಧ ತಡೆ ವಿಚಾರವಾಗಿ ಸಾರ್ವಜನಿಕರ ಜೊತೆ ಹೆಚ್ಚು ಸಂವಹನ ನಡೆಸಲಾಗುವುದು. ಸಾರ್ವಜನಿಕರ ಸಲಹೆಗಳನ್ನು ಸಹ ಸ್ವೀಕರಿಸಲಾಗುವುದು.
ಜನರ ಅಹವಾಲು ಕೇಳಲು ಮತ್ತು ಪರಿಹರಿಸುವ ವಿಚಾರದಲ್ಲಿ ನಿಮ್ಮ ಆಲೋಚನೆ ಏನು?
ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ ಅಹವಾಲು, ಸಮಸ್ಯೆಗಳನ್ನು ಕೇಳಲು ಮತ್ತು ಅವುಗಳನ್ನು ಪರಿಹರಿಸಲು ಫೋನ್ ಇನ್ ಕಾರ್ಯಕ್ರಮ ಮಾಡಬೇಕು ಎಂದುಕೊಂಡಿದ್ದೇವೆ. ಜಿಲ್ಲಾ ಅಥವಾ ತಾಲ್ಲೂಕು ಮಟ್ಟದಲ್ಲಿ ನಡೆಸಬೇಕೆ, ಯಾವ ಸಮಯದಲ್ಲಿ ನಡೆಸಬೇಕು ಎನ್ನುವ ಬಗ್ಗೆ ಚಿಂತನೆಗಳು ಇವೆ. ನಿರ್ದಿಷ್ಟ ದಿನ ಸಾರ್ವಜನಿಕರಿಗೆ ಮಾಹಿತಿ ನೀಡಿ ಫೋನ್ ಇನ್ ಕಾರ್ಯಕ್ರಮ ನಡೆಸಲಾಗುವುದು. ಜನರು ಕರೆ ಮಾಡಿ ಖುದ್ದು ನಮ್ಮ ಜೊತೆಯೇ ಮಾತನಾಡಬಹುದು. ನಿರಂತರವಾಗಿ ಫೋನ್ ಇನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಲೋಚನೆ ಇದೆ. ಕರೆ ಮಾಡಿದ ಸಾರ್ವಜನಿಕರ ಸಮಸ್ಯೆಗಳು ಇಲಾಖೆಯ ಕಾನೂನು ವ್ಯಾಪ್ತಿಯಲ್ಲಿ ಇದ್ದರೆ ತ್ವರಿತವಾಗಿ ಪರಿಹರಿಸಲಾಗುವುದು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಿದ್ದೇನೆ.
ಅಧಿಕಾರವಹಿಸಿಕೊಂಡ ನಂತರ ಸಾರ್ವಜನಿಕರು ಯಾವ ಸಮಸ್ಯೆಗಳನ್ನು ಹೊತ್ತು ಹೆಚ್ಚು ಭೇಟಿ ಆಗುತ್ತಿದ್ದಾರೆ?
ಕಂದಾಯ ಇಲಾಖೆಯ ಸಮಸ್ಯೆಗಳ ಪರಿಹಾರ ವಿಚಾರವಾಗಿ ದೂರುಗಳನ್ನು ತೆಗೆದುಕೊಂಡು ಬರುತ್ತಿರುವವರೇ ಹೆಚ್ಚಿದ್ದಾರೆ. ಜಮೀನು ಹದ್ದುಬಸ್ತು, ಜಮೀನಿನ ವಿಚಾರವಾಗಿ ಕುಟುಂಬಗಳ ನಡುವೆ ಅಥವಾ ಬೇರೊಬ್ಬ ವ್ಯಕ್ತಿ ಜೊತೆ ತಗಾದೆಗಳಿಗೆ ಸಂಬಂಧಿಸಿದ ದೂರುಗಳು ಬರುತ್ತಿವೆ. ನಮ್ಮ ವ್ಯಾಪ್ತಿಯಲ್ಲಿ ಜಮೀನು ವಿವಾದಗಳ ಪರಿಹಾರ ಕಷ್ಟ. ಜಮೀನು ವಿವಾದಗಳಲ್ಲಿ ಗಲಾಟೆ ಅಥವಾ ಕ್ರಿಮಿನಲ್ ಚಟುವಟಿಕೆಗಳು ನಡೆದರೆ ಕ್ರಮವಹಿಸುತ್ತೇವೆ. ಜಮೀನು ವಿವಾದಗಳಿಗೆ ಪೊಲೀಸ್ ಇಲಾಖೆ ಪರಿಹಾರ ನೀಡುವುದಿಲ್ಲ. ಹಳ್ಳಿಗಳಲ್ಲಿ ಜಮೀನು ವಿಚಾರವಾಗಿ ಗಲಾಟೆಗಳು ನಡೆಯುತ್ತಿದ್ದರೆ ಈ ಬಗ್ಗೆ ಹೆಚ್ಚು ಗಮನವಹಿಸುವಂತೆ ಬೀಟ್ ಸಿಬ್ಬಂದಿಗೆ ಸೂಚಿಸಿದ್ದೇವೆ.
ಕೆಲವು ಠಾಣೆಗಳಲ್ಲಿ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ಇವೆ. ಜನರಿಗೆ ಸ್ಪಂದಿಸದ ಸಿಬ್ಬಂದಿಗೆ ಯಾವ ಎಚ್ಚರಿಕೆ ನೀಡುತ್ತೀರಿ?
ಪೊಲೀಸ್ ವ್ಯವಸ್ಥೆ ಜನಸ್ನೇಹಿ ಆಗಿರಬೇಕು. ಆಗ ಅಪರಾಧ ಚಟುವಟಿಕೆಗಳ ನಿಯಂತ್ರಣ ಸಾಧ್ಯ. ಸಮಸ್ಯೆಗಳಿದ್ದರೆ ಅಲ್ಲವೆ ಸಾರ್ವಜನಿಕರು ಪೊಲೀಸರ ಬಳಿ ಬರುವುದು. ಪೊಲೀಸರ ಬಳಿ ಬಂದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಬರುವರು. ಆ ನಂಬಿಕೆಗೆ ಚ್ಯುತಿ ಬರಬಾರದು. ಸಮಸ್ಯೆಗಳನ್ನು ಹೊತ್ತು ತರುವ ಜನರಿಗೆ ಸೂಕ್ತವಾಗಿ ಸ್ಪಂದಿಸಬೇಕು. ನಮ್ಮ ಪ್ರತಿಕ್ರಿಯೆಗಳು ಮೊದಲಿಗೆ ಉತ್ತಮವಾಗಿ ಇರಬೇಕು. ದೂರುಗಳಿಗೆ ಸಂಬಂಧಿಸಿದಂತೆ ಎರಡೂ ಕಡೆಯವರ ಪ್ರತಿಕ್ರಿಯೆಗಳನ್ನು ಕೇಳಬೇಕು. ಆಗ ಯಾರದ್ದು ಸುಳ್ಳು, ಯಾರದ್ದು ಸತ್ಯ ಎನ್ನುವುದು ತಿಳಿಯಲಿದೆ. ಸಾರ್ವಜನಿಕ ಜೊತೆ ಉತ್ತಮವಾಗಿ ನಡೆದುಕೊಳ್ಳಬೇಕು ಎಂದು ಸಿಬ್ಬಂದಿ ಸೂಚಿಸಲಾಗಿದೆ. ಸಾರ್ವಜನಿಕರಿಂದ ಯಾವುದೇ ದೂರು ಬಾರದಂತೆ ಕೆಲಸ ಮಾಡಬೇಕು ಎಂದು ಎಲ್ಲ ಪೊಲೀಸ್ ಠಾಣಾಧಿಕಾರಿಗಳಿಗೆ, ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ಪೊಲೀಸ್ ಅಧಿಕಾರಿಗಳು ಅಥವಾ ಸಿಬ್ಬಂದಿ ಕರ್ತವ್ಯ ಲೋಪ ಎಸಗಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು
ಚಿಂತಾಮಣಿಯಲ್ಲಿ ಎಎಸ್ಪಿಯಾಗಿ ಕೆಲಸ ನಿರ್ವಹಿಸಿದ್ದೀರಿ. ಅಲ್ಲಿನ ಅನುಭವ ಹೇಗಿತ್ತು?
2021ರ ಸೆಪ್ಟೆಂಬರ್ನಿಂದ 2023ರ ಸೆಪ್ಟೆಂಬರ್ವರೆಗೆ ಅಂದರೆ ಒಂದು ವರ್ಷ ಹನ್ನೊಂದು ತಿಂಗಳು ಚಿಂತಾಮಣಿ ಎಎಸ್ಪಿಯಾಗಿ ಕೆಲಸ ಮಾಡಿದ್ದೇನೆ. ದೊಡ್ಡ ಪ್ರಮಾಣದ ಕೋಟಾ ನೋಟು ದಂಧೆಯನ್ನು ಪತ್ತೆ ಮಾಡಿದ್ದೆವು. ಮಾದಕ ವಸ್ತುಗಳ ಸಾಗಾಣಿಕೆಯ ಪ್ರಕರಣಗಳನ್ನು ಪತ್ತೆ ಹಚ್ಚಿದ್ದೆವು. ಚಿಂತಾಮಣಿಯಲ್ಲಿ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣಗಳು ಸಹ ಹೆಚ್ಚತ್ತಿದ್ದವು. ದಲಿತ ಮುಖಂಡರ ಜೊತೆ ಸಭೆಗಳನ್ನು ಮಾಡಿದ್ದೆವು. ಹೀಗೆ ಅಲ್ಲಿ ಕೆಲಸ ಮಾಡಿದ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಅಕ್ರಮಗಳನ್ನು ತಡೆಯಲಾಗಿದೆ. ಈಗ ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಅಕ್ರಮಗಳನ್ನು ತಡೆಯಲು ಕ್ರಮವಹಿಸಲಾಗುವುದು. ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆ ಸಹಿಸುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.