ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ ವೃತ್ತಿಪರ ಶಿಕ್ಷಣ, ಕಡೂರು ಕಾಲೇಜಿಗೆ ವಿದ್ಯಾರ್ಥಿಗಳ ಒತ್ತು ಪಾರ್ಕ್, ಕ್ರೀಡಾಂಗಣ ಸೇರಿ ಮೂಲಸೌಕರ್ಯಗಳ ಕೊರತೆ
ಮಾರ್ಗೋಪಾಯ ಏನು
ಕಡೂರಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜತೆಗೆ ಕುವೆಂಪು ವಿವಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರವೂ ಇದೆ. ಕಡೂರು ಕಾಲೇಜು ವಿದ್ಯಾರ್ಥಿಗಳ ಭಾರದಲ್ಲಿ ನಲುಗಿ ಹೋಗಿದೆ. ಬೀರೂರು ಹೊರ ವಲಯದಲ್ಲಿ ಇರುವ ಈ ಹಿಂದಿನ ಪಿಜೆಎನ್ಎಂ ಕಾಲೇಜಿನ ಕಟ್ಟಡ ಮತ್ತು ಜಾಗವನ್ನು ಸರ್ಕಾರದ ನೆರವಿನಿಂದ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿ ಅಲ್ಲಿ ಹೊಸದಾಗಿ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜು ಆರಂಭಿಸಲು ಸಾಧ್ಯವಿದೆ. ಬೀರೂರಿನ ಕಾಲೇಜನ್ನು ಕೇವಲ ವಿದ್ಯಾರ್ಥಿನಿಯರಿಗಾಗಿಯೇ ಮೀಸಲಿರಿಸಿ ಕಡೂರು ಕಾಲೇಜಿನ ಒತ್ತಡ ಕಡಿಮೆ ಮಾಡಬಹುದಾಗಿದೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಇನ್ನೊಂದು ಮಾರ್ಗೋಪಾಯ ಎಂದರೆ ಕಡೂರು ಕಾಲೇಜಿನೊಂದಿಗೆ ಇದನ್ನು ವಿಲೀನಗೊಳಿಸಿ ಇಲ್ಲಿ ಬಿ.ಎ ಬಿ.ಎಸ್ಸಿ ಬಿ.ಕಾಂ ಅಥವಾ ಅಲ್ಲಿ ಹೆಚ್ಚು ಒತ್ತಡ ಇರುವ ಯಾವುದಾದರೂ ಒಂದು ವಿಷಯಕ್ಕೆ ಮೀಸಲಾದ ಕಾಲೇಜಾಗಿ ಬದಲಾಯಿಸುವುದು. ವಿಶ್ವವಿದ್ಯಾಲಯ ನೆರವಿನೊಂದಿಗೆ ವಿದ್ಯಾರ್ಥಿ ನಿಲಯ ಆರಂಭಿಸಿ ವಸತಿ ಸಹಿತ ಪದವಿ ಕಾಲೇಜಾಗಿ ಪರಿವರ್ತಿಸುವುದು. ಹೀಗೆ ಹಲವು ದಾರಿಗಳು ಇವೆ. ಇದರಿಂದ ಮುಂದೊಂದು ದಿನ ಜಿಲ್ಲೆಗೇ ವಿಶ್ವವಿದ್ಯಾಲಯ ಮಂಜೂರಾದರೆ ಅದಕ್ಕೆ ಫೀಡಿಂಗ್ ಕಾಲೇಜುಗಳೆಂದು ಇವುಗಳನ್ನು ಗುರುತಿಸಬಹುದಾಗಿದೆ ಎಂದು ಹೇಳುತ್ತಾರೆ.