ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ–2 ಸಮಾವೇಶದಲ್ಲಿ ಭಾರಿ ಜನಸಾಗರ ಕಂಡುಬಂತು. ಕಿಕ್ಕಿರಿದು ಸೇರಿದ್ದ ಜನರು ಕಾಂಗ್ರೆಸ್ ಪರ ಘೋಷಣೆ ಕೂಗಿ, ಸಂಭ್ರಮಿಸಿದರು.
ನಗರ ಮಾತ್ರವಲ್ಲದೇ ಜಿಲ್ಲೆಯ ಮೂಲೆ ಮೂಲೆಯಿಂದಲೂ ಬಸ್, ಕಾರು, ಆಟೊ, ಬೈಕ್ ಹಾಗೂ ಇನ್ನಿತರ ವಾಹನಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹುರುಪಿನಿಂದಲೇ ಆಗಮಿಸಿದ್ದರು.
ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಸ್ಗಳು ಸೇರಿದಂತೆ ಇನ್ನಿತರ ವಾಹನಗಳನ್ನು ನಗರ ಹೊರಭಾಗದಲ್ಲೇ ತಡೆದರು.
ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕಾರ್ಯಕರ್ತರು, ವಾಹನಗಳನ್ನು ನಿಲ್ಲಿಸಿದ ಜಾಗದಿಂದ ಸುಡು ಬಿಸಿಲನ್ನೂ ಲೆಕ್ಕಿಸದೇ ಸಮಾವೇಶದತ್ತ ಹೆಜ್ಜೆ ಹಾಕತೊಡಗಿದರು.
ಮಧ್ಯಾಹ್ನ 1 ಗಂಟೆಯಿಂದಲೇ ಜನರು ತಂಡೋಪತಂಡವಾಗಿ ಸಮಾವೇಶದ ಸ್ಥಳಕ್ಕೆ ಆಗಮಿಸಿ ಕುರ್ಚಿ ಹಿಡಿದಿದ್ದರು. ಕೆಲವರು ನಾಯಕರ ಭಾಷಣ ಕೇಳಿದರೆ, ಇನ್ನೂ ಕೆಲವರು ಬಿಸಿಲಿನ ಧಗೆ, ಸೆಕೆ ತಾಳದೇ ಅತ್ತಿಂದಿತ್ತ ಓಡಾಡುತ್ತಿರುವುದು, ಗಿಡಮರಗಳ ಕೆಳಗೆ ನಿಂತಿರುವುದು ಕಂಡುಬಂತು.
ನಗರದ ವಿವಿಧ ವಾರ್ಡ್ಗಳ ಪಕ್ಷದ ಸದಸ್ಯರು, ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಡ್ರಮ್ಸೆಟ್, ತಮಟೆಯ ಸದ್ದಿನೊಂದಿಗೆ ಮೆರವಣಿಗೆ ಮೂಲಕ ಸಮಾವೇಶಕ್ಕೆ ಆಗಮಿಸಿದರು. ಆ ಮೂಲಕ ಕಾರ್ಯಕ್ರಮಕ್ಕೆ ಹುರುಪು ತುಂಬಿದರು. ಎಲ್ಲೆಡೆ ಕಾಂಗ್ರೆಸ್ ಪಕ್ಷದ ಬಾವುಟಗಳು ಹಾರಾಡಿದವು.
ನಗರದಲ್ಲಿ 39 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಬಿಸಿಲ ಝಳ ತಾಳದೇ ಜನರು ಕಬ್ಬಿನ ಹಾಲು, ಎಳನೀರು, ಮಜ್ಜಿಗೆ, ಸೋಡಾ ಹಾಗೂ ಇನ್ನಿತರ ತಂಪುಪಾನೀಯಗಳ ಮೊರೆ ಹೋದರು. ಅದರಲ್ಲೂ ಸಮಾವೇಶ ನಡೆದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಬ್ಬಿನ ಹಾಲು ಮಾರಾಟ ಜೋರಾಗಿತ್ತು. ಮುಖ್ಯ ರಸ್ತೆಯಲ್ಲಿನ ಅಂಗಡಿಗಳಲ್ಲಿನ ವ್ಯಾಪಾರವೂ ಎಂದಿಗಿಂತ ಜಾಸ್ತಿ ಕಂಡುಬಂತು.
ಸಮಾವೇಶದ ಸ್ಥಳದಲ್ಲಿ ಆಸನ ಹಾಗೂ ಇನ್ನಿತರ ಸಣ್ಣಪುಟ್ಟ ಕಾರಣಗಳಿಗಾಗಿ ಆಗಾಗ ಸಣ್ಣ ಪುಟ್ಟ ಗದ್ದಲ, ಗಲಾಟೆ ನಡೆಯುತ್ತಲೇ ಇತ್ತು. ಸ್ಥಳದಲ್ಲಿದ್ದ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
ಕಾರ್ಯಕ್ರಮದಲ್ಲಿ ಭಾಷಣ ಮುಗಿಸಿ ತುರ್ತಾಗಿ ಹೊರಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೇಷ್ಮೆ ಶಾಲು ಹೊದಿಸಿ ಬೆಳ್ಳಿ ಗದೆಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ಬೃಹತ್ ಬೆಳ್ಳಿ ಕಪ್ ಅನ್ನು ನೀಡಿ ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.