ಅಳ್ನಾವರ: ‘ಲೋಕಸಭಾ ಚುನಾವಣೆ ಮುಗಿದ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮುಂದುವರಿಯುವ ಯಾವುದೇ ಗ್ಯಾರಂಟಿ ಇಲ್ಲ. ಮಹಾರಾಷ್ಟ್ರ ಮಾದರಿಯ ಏಕನಾಥ ಪ್ಯಾಟರ್ನ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಎಲ್ಲ ಲಕ್ಷಣಗಳಿವೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅಭಿಪ್ರಾಯಪಟ್ಟರು.
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಗುರುವಾರ ರಾತ್ರಿ ನಡೆದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
‘ದೇಶದ ಸಮಗ್ರ ವಿಕಾಸ ಮತ್ತು ಬದಲಾವಣೆಗಾಗಿ ಬಿಜೆಪಿಗೆ ಮತ ನೀಡಿ, ಪ್ರಲ್ಹಾದ ಜೋಶಿ ಅವರನ್ನು ಮತ್ತೆ ಸಂಸತ್ತಿಗೆ ಕಳುಹಿಸಿ. ಸರಳ ವ್ಯಕ್ತಿತ್ವದ ಜೋಶಿ ಎಲ್ಲ ವರ್ಗದ ಜನರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದಾರೆ’ ಎಂದರು.
‘ಬಿಜೆಪಿಯಿಂದ ಮಾತ್ರ ದೇಶದ ಹಿತ ಕಾಪಾಡಲು ಸಾಧ್ಯ ಎಂಬ ಮರ್ಮ ನಿಮಗೆ ತಿಳಿಸಲು ನಾನು ಮಹಾರಾಷ್ಟ್ರದಿಂದ ಬಂದಿದ್ದೇನೆ. ಆತ್ಮ ನಿರ್ಭರಕ್ಕಾಗಿ, ಸದೃಢ ಭಾರತ ಕಟ್ಟಲು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ’ ಎಂದರು.
ಪ್ರಲ್ಹಾದ ಜೋಶಿ ಮಾತನಾಡಿ, ‘ನಾಲ್ಕು ಬಾರಿ ನನಗೆ ಈ ಭಾಗದ ಜನರು ಆಶೀರ್ವಾದ ಮಾಡಿದ್ದೀರಿ, ಕ್ಷೇತ್ರದ ಜನರಿಗೆ ಗೌರವ ತರುವ ಕಾರ್ಯ ಮಾಡಿದ್ದೇನೆ, ನೀವು ತಲೆ ತಗ್ಗಿಸುವ ಯಾವುದೇ ಕಾರ್ಯ ಎಂದಿಗೂ ಮಾಡುವುದಿಲ್ಲ. ನನ್ನನ್ನು ದೇಶದ ಉನ್ನತ ಸ್ಥಾನಕ್ಕೆ ಕೂರಿಸಿದ ಮಾಲಿಕರು ನೀವು. ಸಾಮಾನ್ಯ ಕುಟುಂಬದಿಂದ ಬಂದ ನನಗೆ ದೇಶ ಸೇವೆ ಮಾಡಲು ಮತ್ತೊಮ್ಮೆ ಆಶೀರ್ವಾದ ಮಾಡಿ’ ಎಂದರು.
ಶಾಸಕರಾದ ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಮಾಜಿ ಶಾಸಕ ನಾಗರಾಜ ಛಬ್ಬಿ, ಬಸವರಾಜ ಕುಂದಗೋಳಮಠ, ಕಲ್ಮೇಶ ಬೈಲೂರ, ನಾರಾಯಣ ಮೋರೆ, ಪ್ರವೀಣ ಪವಾರ ಇದ್ದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನಿಂಗಪ್ಪ ಘಾಟಿನ್ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.