ಮೇಲುಕೋಟೆ: ವಿಷಪೂರಿತ ಆಹಾರ ಸೇವಿಸಿ ಹನ್ನೊಂದು ಮೇಕೆಗಳು ಸಾವನ್ನಪ್ಪಿರುವ ಘಟನೆ ಹೋಬಳಿಯ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.
ಹೋಬಳಿ ಸಮೀಪದ ಹೊಸಕೋಟೆ ಗ್ರಾಮದ ನಿವಾಸಿ ಭಾಗ್ಯಮ್ಮ ಲೇಟ್ ವೆಂಕಟೇಶ್, ಗಾಯತ್ರಮ್ಮ, ಹಾಳಯ್ಯ, ಧರ್ಮೇಶ್ ಎಂಬ ರೈತರಿಗೆ ಸೇರಿದ ಹನ್ನೊಂದು ಮೇಕೆಗಳು ತಮ್ಮ ಜಮೀನಿನ ಬಳಿ ಮೇಯುತ್ತಿದ್ದ ವೇಳೆ ವಿಷಪೂರಿತ ಸೊಪ್ಪು ಸೇವಿಸಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಸುಮಾರು ₹2 ಲಕ್ಷ ಮೌಲ್ಯದ ಮೇಕೆಗಳು ಸಾವನಪ್ಪಿದ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಇಲಾಖೆ ವೈದ್ಯರಾದ ರವಿನಾಯಕ್ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ವಿಷಪೂರಿತ ಆಹಾರ ಸೇವಿಸಿ ಮೃತಪಟ್ಟಿವೆ ದೃಢಕರಿಸಿದರು. ರೈತರಿಗೆ ಸರ್ಕಾರದಿಂದ ಸಿಗುವ ಪರಿಹಾರ ನೀಡುವ ಭರವಸೆ ನೀಡಿದರು.
ಸಂಕಷ್ಟಕ್ಕೆ ಸಿಲುಕಿದ ಭಾಗ್ಯಮ್ಮ ಕುಟುಂಬ: ಭಾಗ್ಯಮ್ಮ ಪತಿ ಆಗಸ್ಟ್ 14ರಂದು ಹಳೇಬಿಡು ಪಂಚಾಯಿತಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರು. ಇವರಿಗೆ ಇಬ್ಬರೂ ಹೆಣ್ಣು ಮಕ್ಕಳಿದ್ದು ಜೀವನವೇ ಕಷ್ಟಕರವಾಗಿತ್ತು. ಇದೀಗಾ ಜೀವನಕ್ಕೆ ಆಧಾರವಾಗಿದ್ದ ಮೇಕೆಗಳು ಕೂಡ ಆಕಸ್ಮಿಕವಾಗಿ ಮೃತಪಟ್ಟಿರುವುದು ಮತ್ತಷ್ಟು ಸಮಸ್ಯೆ ಎದುರಾಗಿದೆ.
ಹೊಸಕೋಟೆ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ ಹನ್ನೊಂದು ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.