ನಾಗಮಂಗಲ: ‘ಪಟ್ಟಣದಲ್ಲಿ ನಡೆದಿದ್ದ ಗಲಭೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಮಂಡ್ಯದ ಮುಸ್ಲಿಂ ಮುಖಂಡರು ಪಟ್ಟಣದ ಪೊಲೀಸ್ ಠಾಣೆಗೆ ಮಂಗಳವಾರ ಭೇಟಿ ನೀಡಿ ಸಿಪಿಐ ನಿರಂಜನ್ ಅವರಿಗೆ ಮನವಿ ಮಾಡಿದರು.
‘ಹಾನಿಗೊಳಗಾದ ಅಂಗಡಿಗಳಿಗೆ ಭೇಟಿ ನೀಡಿ ಮಾಲೀಕರ ಅಳಲನ್ನು ಕೇಳಿ ಬಂದಿದ್ದೇವೆ. ಗಲಭೆಯಿಂದ ಅಪಾರ ಹಾನಿಯಾಗಿದೆ. ಹೀಗಾಗಿ ನ್ಯಾಯಪರವಾಗಿ ತನಿಖೆ ನಡೆಸಬೇಕು’ ಎಂದು ಮುಖಂಡರಾದ ಮಕಸೂದ್, ಮುಫ್ತಿ ಇಫ್ತಿಹಾರ್, ಮೌಲಾನಾ ಕೋರಿದರು.
ಅದಕ್ಕೂ ಮುನ್ನ, ಪಟ್ಟಣದ ಮಂಡ್ಯ ರಸ್ತೆ, ಮೈಸೂರು ರಸ್ತೆಯಲ್ಲಿ ಹಾನಿಗೊಳಗಾಗಿದ್ದ ಬಟ್ಟೆ, ಹಣ್ಣು ಹಾಗೂ ಪಾತ್ರೆ ಅಂಗಡಿ ಸೇರಿದಂತೆ ಹಿಂದೂ ಮತ್ತು ಮುಸ್ಲಿಮರ ಪ್ರತಿ ಅಂಗಡಿಗೂ ಭೇಟಿ ನೀಡಿ ಸಾಂತ್ವನ ಹೇಳಿದರು.
‘ನಷ್ಟದ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು, ಅಧಿಕಾರಿಗಳ ಮಟ್ಟದಲ್ಲಿ ಸಿಗಬಹುದಾದ ಪರಿಹಾರವನ್ನು ಕೊಡಿಸುವ ಪ್ರಯತ್ನ ವನ್ನೂ ಮಾಡಲಾಗುವುದು’ ಎಂದು ಅಂಗಡಿಗಳ ಮಾಲೀಕರಿಗೆ ಭರವಸೆ ನೀಡಿದರು.
ಪಟ್ಟಣದ ಹನೀಫ್ ಮಸೀದಿ ಸೇರಿದಂತೆ ವಿವಿಧ ಸ್ಥಳಗಳಿಗೂ ಭೇಟಿ ನೀಡಿದರು. ನಂತರ, ಸಮುದಾಯದ ಸ್ಥಳೀಯ ಮುಖಂಡರೊಂದಿಗೂಸಭೆ ನಡೆಸಿದರು. ಮುಖಂಡರಾದ ಇಮ್ರಾನ್, ಮಸೂದ್, ಮುಫ್ತಿ ರಿಜ್ವಾನ್, ಖಾಸಿಂ, ಮೌಲಾನಾ ಆಸೀಫ್, ಅತೀಕ್ ಪಾಷ, ಇಲಿಯಾಸ್ ಪಾಷ ಇದ್ದರು.
ಗಲಭೆಯಲ್ಲಿ ಪಾಲ್ಗೊಂಡ ಆರೋಪದಡಿ ಬಂಧನಕ್ಕೊಳಗಾಗಿರುವವರ 13 ಮಂದಿಯ ಕುಟುಂಬಸ್ಥರು ಮಂಗಳವಾರ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಅವರಿಗಾಗಿ ಮಾಜಿ ಶಾಸಕ ಸುರೇಶ್ಗೌಡ ಬಸ್ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ.