ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ರಾಜಮನೆತನಕ್ಕೆ ವಿಶೇಷ ಸ್ಥಾನಮಾನ ನೀಡಿ: ಸಂಸದ ಡಾ. ಮಂಜುನಾಥ್ ಒತ್ತಾಯ

Published : 27 ಸೆಪ್ಟೆಂಬರ್ 2024, 7:36 IST
Last Updated : 27 ಸೆಪ್ಟೆಂಬರ್ 2024, 7:36 IST
ಫಾಲೋ ಮಾಡಿ
Comments

ಮೈಸೂರು: 'ರಾಜ್ಯ ಸರ್ಕಾರವು ಮೈಸೂರು ರಾಜಮನೆತನಕ್ಕೆ ವಿಶೇಷ ಸ್ಥಾನಮಾನ (ರಾಯಲ್ ಸ್ಟೇಟಸ್) ನೀಡಬೇಕು' ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಒತ್ತಾಯಿಸಿದರು.

ನಗರದ ಜೆ.ಕೆ. ಮೈದಾನದ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಸರ್ಕಾರ, ಆಡಳಿತ ಅದರ ಪಾಡಿಗೆ ನಡೆಯಲಿ, ಆದರೆ, ರಾಜಮನೆತಕ್ಕೆ ಗೌರವ ಸಲ್ಲಿಸುವ ವ್ಯವಸ್ಥೆಯೂ ಆಗಬೇಕು' ಎಂದರು.

'ಇಂಗ್ಲೆಂಡ್ ದೇಶದಲ್ಲಿ‌ ಪ್ರಜಾಪ್ರಭುತ್ವ ಇದ್ದರೂ ರಾಜಮನೆತನಕ್ಕೆ ಉನ್ನತ ಸ್ಥಾನ ನೀಡಲಾಗಿದೆ. ಡೆನ್ಮಾರ್ಕ್, ಸ್ವೀಡನ್ ದೇಶದಲ್ಲೂ ರಾಜರ ವಿಶೇಷ ಸ್ಥಾನಮಾನ ಮುಂದುವರಿಸಲಾಗಿದೆ. ಆದರೆ, ನಮ್ಮ ರಾಜ್ಯ ಹಾಗೂ ದೇಶದಲ್ಲಿ ಅವರನ್ನು ಗೌರವಿಸುವ ದೊಡ್ಡ ಹೃದಯಗಳಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

'ಪ್ರಸ್ತುತ ಆರೋಗ್ಯ ಕ್ಷೇತ್ರಕ್ಕೆ ಜಿಡಿಪಿಯ ಕೇವಲ ಶೇ 1.9ರಷ್ಟು ವೆಚ್ಚ ಮಾಡಲಾಗುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಶೇ 5ರಿಂದ ಶೇ 6ರಷ್ಟು ವೆಚ್ಚ ಮಾಡಲಾಗುತ್ತಿತ್ತು. ಶಿಕ್ಷಣ, ಆರೋಗ್ಯ ಮತ್ತು ಇತರ ಕ್ಷೇತ್ರಗಳಿಗೆ ಅನೇಕ ಕೊಡುಗೆ ನೀಡಿದ ಅರಸು ಮನೆತನಕ್ಕೆ ನಮ್ಮ ರಾಜ್ಯದಲ್ಲಾದರೂ ವಿಶೇಷ ಸ್ಥಾನಮಾನ ದೊರೆಯಲಿ' ಎಂದರು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾತನಾಡಿ, 'ಹತ್ತು ವರ್ಷದ ಹಿಂದೆ ನಮ್ಮ ಕುಟುಂಬ ಕಷ್ಟದ ಸಮಯದಲ್ಲಿದ್ದಾಗ, ರಾಜ್ಯದ ಜನತೆ ತೋರಿದ ಪ್ರೀತಿ ಧೈರ್ಯ ತುಂಬಿತು. ಸಂಸದ ಮಂಜುನಾಥ್ ಅವರು ವಿಶೇಷ ಸ್ಥಾನಮಾನ ನೀಡಲು ಒತ್ತಾಯಿಸಿದ್ದು, ನಾಡಿನ ಜನತೆಯ ರಾಜಮನೆತನದ ಬಗ್ಗೆ ಹೊಂದಿರುವ ಅಭಿಮಾನವನ್ನು ತೋರುತ್ತಿದೆ' ಎಂದು ಭಾವುಕರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT