ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಬಾಲಕಾರ್ಮಿಕ ಪದ್ಧತಿ: ಎರಡು ತಿಂಗಳಲ್ಲಿ 12 ಪ್ರಕರಣ ಪತ್ತೆ

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಇಂದು; ಜಾಗೃತಿಗೆ ಇಲಾಖೆ ಸಜ್ಜು
Published 12 ಜೂನ್ 2024, 6:33 IST
Last Updated 12 ಜೂನ್ 2024, 6:33 IST
ಅಕ್ಷರ ಗಾತ್ರ

ಮೈಸೂರು: ಜೂನ್‌ 12ರಂದು ವಿಶ್ವದಾದ್ಯಂತ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆಯಾಗುತ್ತಿದೆ. ದೇಶದಲ್ಲಿ 1986ರಲ್ಲಿಯೇ ಬಾಲ ಕಾರ್ಮಿಕ ಪದ್ಧತಿ ನಿಷೇಧಿಸಿ ಕಾಯ್ದೆ ಮಾಡಿದ್ದರೂ ಇಂದಿಗೂ ಈ ಪಿಡುಗು ಕಾಡುತ್ತಿದ್ದು, ಸಾಂಸ್ಕೃತಿಕ ಕೇಂದ್ರ ಮೈಸೂರು ಜಿಲ್ಲೆಯಲ್ಲಿ ಕಳೆದ ವರ್ಷ 32 ಬಾಲ ಮತ್ತು ಕಿಶೋರ ಕಾರ್ಮಿಕ ಪ್ರಕರಣಗಳು ದಾಖಲಾಗಿವೆ.

ಕಳೆದ ಎರಡು ತಿಂಗಳ ಅವಧಿಯಲ್ಲಿಯೇ ಕಿಶೋರ ಕಾರ್ಮಿಕನ್ನು ದುಡಿಸಿಕೊಳ್ಳುತ್ತಿದ್ದ 12 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಅವರನ್ನು ಪುನರ್ವಸತಿ ಕೇಂದ್ರಗಳಿಗೆ ತಲುಪಿಸಲಾಗಿದೆ.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆಯಿಂದ ಜೆಲ್ಲೆಯಾದ್ಯಂತ ನೂರಾರು ಜಾಗೃತಿ ಕಾರ್ಯಕ್ರಮ, ಜಾಥಾ, ಬೀದಿ ನಾಟಕಗಳನ್ನು ಆಯೋಜಿಸಿದ್ದರೂ ಈ ಅನಿಷ್ಟ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಲು ಸಾಧ್ಯವಾಗುತ್ತಿಲ್ಲ. 2023–24ರಲ್ಲಿ ಜಿಲ್ಲೆಯ 1,893 ಸ್ಥಳಗಳಲ್ಲಿ ಇಲಾಖೆಯಿಂದ ಬಾಲ ಕಾರ್ಮಿಕ ಪದ್ಧತಿ ನಡೆಯುತ್ತಿರುವ ಗುಮಾನಿ ಮೇಲೆ ತಪಾಸಣೆ ನಡೆಸಲಾಗಿದೆ. ಈ ಸಂಖ್ಯೆಯು ಆತಂಕ ಹುಟ್ಟಿಸುವಂತಿದ್ದು, ಸಮಸ್ಯೆಯ ಗಂಭೀರತೆಯನ್ನು ತೋರುತ್ತದೆ.

ಈ ತಪಾಸಣೆ ವೇಳೆ ಸಾಲಿಗ್ರಾಮ ತಾಲ್ಲೂಕಿನಲ್ಲಿ ಇಬ್ಬರು ಬಾಲಕಾರ್ಮಿಕರು ಪತ್ತೆಯಾಗಿದ್ದಾರೆ. ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 30 ಕಿಶೋರ ಕಾರ್ಮಿಕರು ದುಡಿಮೆಯಲ್ಲಿ ತೊಡಗಿದ್ದಾರೆ. ಈ ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ₹42 ಸಾವಿರ ದಂಡವನ್ನೂ ವಸೂಲಿ ಮಾಡಲಾಗಿದೆ.

ಹುಣಸೂರಿನಲ್ಲಿ ಹೆಚ್ಚು:: 2023ರ ಏಪ್ರಿಲ್‌ ಬಳಿಕ ಜಿಲ್ಲೆಯಲ್ಲಿ ಕಂಡುಬಂದ ಪ್ರಕರಣಗಳಲ್ಲಿ ಹುಣಸೂರು ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ದಾಖಲಾಗಿದ್ದು, 13 ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ.

ವಲಸೆ ಬಾಲಕಾರ್ಮಿಕರು: ‘ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ವಲಸೆ ಕಾರ್ಮಿಕರ 68 ಮಕ್ಕಳನ್ನು ರಕ್ಷಿಸಿ, ಶಾಲೆಗೆ ಸೇರಿಸಲಾಗಿದೆ. ದುಡಿಮೆಗಾಗಿ ನಗರಕ್ಕೆ ವಲಸೆ ಬಂದ ಕುಟುಂಬಗಳ ಈ ಮಕ್ಕಳು ನಗರದಲ್ಲಿಯೇ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇವರು ತಾತ್ಕಾಲಿಕ ಸ್ಥಳದಲ್ಲಿ, ಅಂದಿನ ಮಾರುಕಟ್ಟೆಗೆ ತಕ್ಕ ದುಡಿಮೆಯನ್ನು ಮಾಡುತ್ತಾರೆ. ಇಂಥವರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವುದು ಸವಾಲಿನ ಕೆಲಸ’ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎಚ್‌.ಪಿ.ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು.

ಭಿಕ್ಷಾಟನೆಯ ಛಾಯೆ: ‘ಭಿಕ್ಷಾಟನೆಯಲ್ಲಿ ತೊಡಗಿರುವ ಪೋಷಕರು ತಮ್ಮ ಮಕ್ಕಳನ್ನೂ ಭಿಕ್ಷಾಟನೆಗೆ ದೂಡಿರುತ್ತಾರೆ. ಈ ರೀತಿಯ ಸುಮಾರು 32 ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿದ್ದು, ಸಮಾಜ ಕಲ್ಯಾಣ ಇಲಾಖೆ ಮೂಲಕ ಕ್ರಮ ವಹಿಸಲಾಗಿದೆ. ಈ ವಿಚಾರದಲ್ಲಿ ಕಾರ್ಮಿಕ ಇಲಾಖೆಯೂ ಅಗತ್ಯ ಸಹಕಾರ ನೀಡಿದೆ’ ಎಂದು ಹೇಳಿದರು.

‘ಮುಸ್ಲಿಂ ಸಮುದಾಯದವರೇ ಹೆಚ್ಚು’

‘ಜಿಲ್ಲೆಯಲ್ಲಿ ಕಳೆದ ವರ್ಷ ಕಂಡುಬಂದ ಕಿಶೋರ ಕಾರ್ಮಿಕ ಪ್ರಕರಣಗಳಲ್ಲಿ ಶೇ 60ರಷ್ಟು ಮುಸ್ಲಿಂ ಸಮುದಾಯದ ಮಕ್ಕಳಿದ್ದಾರೆ. ಸಮುದಾಯದಲ್ಲಿರುವ ಅರಿವಿನ ಕೊರತೆ ಪೋಷಕರ ಸ್ಥಿತಿಗತಿಯೂ ಇದಕ್ಕೆ ಕಾರಣ’ ಎಂದು ಎಚ್‌.ಪಿ.ಮಲ್ಲಿಕಾರ್ಜುನ ತಿಳಿಸಿದರು. ‘ಓದಿದರೂ ಉದ್ಯೋಗ ಎಲ್ಲಿ ಸಿಗುತ್ತದೆ? ಈಗಿನಿಂದಲೇ ಕೆಲಸ ಕಲಿತರೆ ಜೀವನ ಸಾಗಿಸಬಹುದು ಎಂದು ವಾದಿಸುತ್ತಾರೆ. ಗ್ಯಾರೇಜ್‌ ಹೋಟೆಲ್‌ಗಳಲ್ಲಿ ಇಂಥ ಕೆಲಸಗಾರರ ಸಂಖ್ಯೆ ಹೆಚ್ಚು’ ಎಂದರು.

‘ಬಾಲಕಾರ್ಮಿಕ ಪದ್ಧತಿ ಕೊನೆಗೊಳಿಸೋಣ’

ಬಾಲಕಾರ್ಮಿಕ ಪದ್ಧತಿ ವಿರುದ್ಧ ವಿಶ್ವ ದಿನವನ್ನು 2002ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಪರಿಚಯಿಸಿತು. ಈ ದಿನವೂ ಮಕ್ಕಳು ಬೆಳೆಯಲು ಗೌರವಯುತ ಜೀವನ ನಡೆಸಲು ಮತ್ತು ಪ್ರಪಂಚದಾದ್ಯಂತ ಬಾಲಕಾರ್ಮಿಕ ‍ಪದ್ಧತಿ ವಿರುದ್ಧ ಹೋರಾಡುವ ಅಗತ್ಯವನ್ನು ಒತ್ತಾಯಿಸುತ್ತದೆ. 2024ರ ಆಚರಣೆಯು ‘ನಮ್ಮ ಬದ್ಧತೆಗಳ ಮೇಲೆ ಕಾರ್ಯನಿರ್ವಹಿಸೋಣ: ಬಾಲಕಾರ್ಮಿಕ ಪದ್ಧತಿ ಕೊನೆಗೊಳಿಸೋಣ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿದೆ.

‘ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆಯು ತಿಂಗಳು ಪೂರ್ತಿ ಜಾಗೃತಿ ಜಾಥಾ ಸಪ್ತಾಹ ಅನಿರೀಕ್ಷಿತ ದಾಳಿಗಳು ಶಾಲೆ ಹಾಗೂ ಸಮುದಾಯಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. 2016ರ ಬಾಲಕಾರ್ಮಿಕ ನಿಷೇಧ (ತಿದ್ದುಪಡಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆಯೂ ಈ ವಿಚಾರದಲ್ಲಿ ಕಠಿಣವಾಗಿದ್ದು ದಂಡ ಹಾಗೂ ಜೈಲು ಶಿಕ್ಷೆಗೂ ಅವಕಾಶ ಕಲ್ಪಿಸಿದೆ’ ಎಂದು ಮೈಸೂರು ಉಪ ವಿಭಾಗ ಕಾರ್ಮಿಕ ಅಧಿಕಾರಿ ರಾಜೇಶ್‌ ಕೆ. ಜಾಧವ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT