ನಿವೇಶನ ವಾಪಸ್ ಸ್ವಾಗತಾರ್ಹ: ಅಬ್ರಹಾಂ
‘ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಂದ 14 ನಿವೇಶನಗಳನ್ನು ವಾಪಸ್ ಪಡೆದ ಮುಡಾ ಕ್ರಮವು ಕಾನೂನಾತ್ಮಕವಾಗಿ ಸರಿ ಇದೆ’ ಎಂದು ಆರ್ಟಿಐ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಹೇಳಿದರು. ಮುಡಾ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ‘ನಿವೇಶನಗಳನ್ನು ಹಿಂಪಡೆಯುವಂತೆ ನಾನು ಹಿಂದೆಯೇ ಆಗ್ರಹಿಸಿದ್ದೆ. ಈಗ ವಾಪಸ್ ಪಡೆದಿರುವುದರಿಂದ ಧನ್ಯವಾದ ಹೇಳಲು ಬಂದಿದ್ದೆ. ಇದರಿಂದ ತನಿಖೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದು’ ಎಂದರು. ‘ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ಐವರು ಮುಖ್ಯಮಂತ್ರಿಗಳ ವಿರುದ್ಧ ಹೋರಾಡಿದ್ದೇನೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವೆ’ ಎಂದರು. ಜಿ.ಟಿ. ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಹಿಂದೆ ತುಳಸಿದಾಸಪ್ಪನವರು ಸಣ್ಣ ಆರೋಪಕ್ಕೆ ರಾಜೀನಾಮೆ ನೀಡಿದ್ದರು. ಮಹಾನ್ ವ್ಯಕ್ತಿಗಳಿದ್ದ ಊರಿನವರು ಅರ್ಥ ಮಾಡಿಕೊಳ್ಳಬೇಕು’ ಎಂದರು.