‘ಕುಂದುಕೊರತೆ ಆಲಿಸದ ಪೊಲೀಸರು’
‘ಶೋಷಿತ ಪರಿಶಿಷ್ಟ ಸಮುದಾಯಗಳು ನಿರಾತಂಕವಾಗಿ ಬದುಕಲು ಅವರಿಗೆ ಧೈರ್ಯ ತುಂಬುವುದಕ್ಕಾಗಿ ಪೊಲೀಸ್ ಠಾಣೆಗಳಲ್ಲಿ ಸಮುದಾಯದ ಮುಖಂಡರ ಕುಂದುಕೊರತೆ ಸಭೆ ನಡೆಸಬೇಕು. ಹೋಬಳಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಸಮುದಾಯದವರ ಸಭೆ ನಡೆಸಲು ಅಧಿಕಾರಿಗಳು ಮೀನ–ಮೇಷ ಎಣಿಸುತ್ತಿದ್ದಾರೆ. ದೌರ್ಜನ್ಯ ಪ್ರಕರಣಗಳ ಹೆಚ್ಚಳಕ್ಕೆ ಇದು ಸಹ ಮುಖ್ಯ ಕಾರಣ. ಅಧಿಕಾರಿಗಳು ಸಭೆ ನಡೆಸಿ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು’ ಎಂದು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ‘ಕಾಟಾಚಾರಕ್ಕೆ ನಡೆಯುವ ಸಭೆ’ ‘ಪರಿಶಿಷ್ಟ ಸಮುದಾಯಗಳ ಕುಂದುಕೊರತೆ ಆಲಿಸಲು ಉಪ ವಿಭಾಗದ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ದೌರ್ಜನ್ಯ ನಿಯಂತ್ರಣ ಕಾಯ್ದೆಯ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ರಚಿಸಲಾಗಿದೆ. ಮೂರು ತಿಂಗಳಿಗೊಮ್ಮೆ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಕಾಟಾಚಾರಕ್ಕೆ ಸಭೆ ನಡೆಸಲಾಗುತ್ತದೆ. ಸಭೆಗೆ ಸಂಬಂಧಪಟ್ಟ ಅಧಿಕಾರಿಗಳೇ ಗೈರಾಗಿ ತಮ್ಮ ಕಚೇರಿಯ ಸಿಬ್ಬಂದಿ ಕಳಿಸುತ್ತಾರೆ. ಸಮಿತಿ ಸದಸ್ಯರ ಒತ್ತಾಯಕ್ಕೆ ಮುಂದಿನ ಸಭೆಯ ಹೊತ್ತಿಗೆ ಪರಿಹಾರವೂ ಸಿಗುವುದಿಲ್ಲ’ ಎಂದು ಸಮಿತಿ ಸದಸ್ಯ ಹರೀಶ್ ಬಾಲು ‘ಪ್ರಜಾವಾಣಿ’ಯೊಂದಿಗೆ ಬೇಸರ ತೋಡಿಕೊಂಡರು. ‘ರಚನೆಯಾಗದ ಜಿಲ್ಲಾ ಸಮಿತಿ’ ‘ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶೋಷಿತ ಸಮುದಾಯಗಳ ಸಮಸ್ಯೆಗಳನ್ನು ಆಲಿಸುವುದಕ್ಕೆ ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ದೌರ್ಜನ್ಯ ನಿಯಂತ್ರಣ ಕಾಯ್ದೆಯ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ರಚಿಸಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತದೆ. 8 ತಿಂಗಳ ಹಿಂದೆ ಸಮಿತಿಯ ಕಡೆ ಸಭೆ ನಡೆದಿತ್ತು. ನಂತರ ಸಮಿತಿ ಅವಧಿಯೂ ಮುಗಿಯಿತು. ಬಳಿಕ ಹೊಸ ಸಮಿತಿಯನ್ನು ಜಿಲ್ಲಾಧಿಕಾರಿ ಇದುವರೆಗೆ ರಚಿಸಿಲ್ಲ. ಈಗಲಾದರೂ ಸಮಿತಿ ರಚಿಸಿ ಪರಿಶಿಷ್ಟರ ಕುಂದುಕೊರತೆಗಳನ್ನು ಸಕಾಲದಲ್ಲಿ ಆಲಿಸಿ ಪರಿಹರಿಸಲಿ’ ಎಂದು ಆರ್ಪಿಐ ಕಾರ್ಯಾಧ್ಯಕ್ಷ ಜಿ. ಗೋವಿಂದಯ್ಯ ಆಗ್ರಹಿಸಿದರು. ‘ಪ್ರತಿ ದೂರು ದಾಖಲು ಸಹ ದೌರ್ಜನ್ಯವೇ’ ‘ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರು ಸವರ್ಣಿಯರು ನೀಡುವ ದೂರು ಆಧರಿಸಿ ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸುತ್ತಾರೆ. ಅದಾಗಲೇ ದೌರ್ಜನ್ಯಕ್ಕೊಳಗಾಗಿ ನ್ಯಾಯದ ನಿರೀಕ್ಷೆಯಲ್ಲಿ ಠಾಣೆ ಮೆಟ್ಟಿಲು ಹತ್ತಿದವರಿಗೆ ಠಾಣೆಯಲ್ಲಿ ಪ್ರತಿದೂರಿನ ಹೆಸರಿನಲ್ಲಿ ಮತ್ತೊಂದು ರೀತಿಯ ದೌರ್ಜನ್ಯ ನಡೆಯುತ್ತದೆ. ಇದು ನ್ಯಾಯಕ್ಕಾಗಿ ಹೋರಾಡವ ಮನೋಬಲವನ್ನು ಕುಸಿಯುವಂತೆ ಮಾಡಿ ಅನಿವಾರ್ಯವಾಗಿ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಸುತ್ತಿದೆ. ಪೊಲೀಸರು ಪ್ರತಿದೂರು ದಾಖಲಿಸದೆ ಸಂತ್ರಸ್ತರ ಪರವಾಗಿ ನಿಲ್ಲಬೇಕು’ ಎಂದು ಕನಕಪುರದ ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಒತ್ತಾಯಿಸಿದರು.