ಚನ್ನಪಟ್ಟಣ (ರಾಮನಗರ): ‘ಮನೆ ಮಕ್ಕಳಿಗೆ ತಪ್ಪು ಮಾಡಿ ಎಂದು ಯಾರಾದರೂ ಹೇಳುತ್ತೇವೆಯೇ? ಯಾರೇ ತಪ್ಪು ಮಾಡಿದರೂ ತಪ್ಪೇ. ಕಾನೂನಿನ ಮುಂದೆ ಎಲ್ಲರೂ ತಲೆ ಬಾಗಲೇಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ಬೈರಾಪಟ್ಟಣದಲ್ಲಿ ಭಾನುವಾರ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಸದಸ್ಯರು ಮತ್ತು ಸಿಬ್ಬಂದಿ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದ ಚೆಕ್ ವಿತರಣೆ, ಸದಸ್ಯರ ಮರಣ ಮತ್ತು ರಾಸು ಮರಣ ಪರಿಹಾರ ಚೆಕ್ ವಿತರಣಾ ಸಮಾರಂಭದಲ್ಲಿ ಅವರು ಮಾತನಡಿದರು.
‘ಕಾನೂನಿನ ಮುಂದೆ ಎಲ್ಲರೂ ಸಮಾನರು. ತಪ್ಪು ಮಾಡಿ ಎಂದು ನಾವು ಮಕ್ಕಳಿಗೆ ಹೇಳುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಬೇಕು. ಅದೇ ರೀತಿ, ತಪ್ಪು ಮಾಡಿದ ಯಾರೇ ಆದರೂ ಕಾನೂನಿನ ಎದುರು ತಲೆಬಾಗಬೇಕು’ ಎಂದರು.