ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾ: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಕಸರತ್ತು

ಶಿರಾ: ಕಾಂಗ್ರೆಸ್‌ನಲ್ಲಿ ಹೆಚ್ಚಿದ ಆಕಾಂಕ್ಷಿಗಳು: ಗೊಂದಲದ ಲಾಭ ಪಡೆಯಲು ಮೈತ್ರಿ ಪಕ್ಷ ಸಜ್ಜು
Published : 12 ಸೆಪ್ಟೆಂಬರ್ 2024, 4:07 IST
Last Updated : 12 ಸೆಪ್ಟೆಂಬರ್ 2024, 4:07 IST
ಫಾಲೋ ಮಾಡಿ
Comments

ಶಿರಾ: ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್‌ 13ರಂದು ಚುನಾವಣೆ ನಡೆಯಲಿದ್ದು, ಅಧಿಕಾರದ ಗದ್ದುಗೆಗೆ ಮೂರು ಪಕ್ಷಗಳಲ್ಲಿ ಕಸರತ್ತು ನಡೆಯುತ್ತಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ‌ ಕಾರಣ ಪಕ್ಷೇತರರ ಸಹಕಾರದೊಂದಿಗೆ ಅಧಿಕಾರಕ್ಕೇರುವುದು ಅನಿವಾರ್ಯ. ನಗರಸಭೆಯ 31 ಸದಸ್ಯರ ಜೊತೆಗೆ ಶಾಸಕ, ಸಂಸದ ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರ ಮತಗಳು ಸೇರಿದಂತೆ 35 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಇದರಿಂದಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಪಡೆಯಲು 18 ಮತಗಳ ಅಗತ್ಯ. ಸದ್ಯ ಕಾಂಗ್ರೆಸ್ 14, ಜೆಡಿಎಸ್, ಬಿಜೆಪಿ ಮೈತ್ರಿಕೂಟ 13 ಮತ್ತು 8 ಮಂದಿ ಪಕ್ಷೇತರರಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಪಟ್ಟಿಯೇ ಇದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ತಲೆನೋವು ತಂದಿದೆ.

ಕಾಂಗ್ರೆಸ್‌ನ ಮಹಮದ್ ಜಾಫರ್, ಜೀಷಾನ್ ಮಹಮದ್, ತೇಜಾ ಭಾನುಪ್ರಕಾಶ್, ಶಿವಶಂಕರ್ ಅವರ ಜೊತೆಗೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯ ಅಜೇಯ್ ಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ನಗರಸಭೆಯ 31 ಸದಸ್ಯರಲ್ಲಿ 14 ಮಂದಿ ಮುಸ್ಲಿಂ ಸಮುದಾಯದ ಸದಸ್ಯರಿದ್ದಾರೆ. ಅದರಲ್ಲಿ 8 ಮಂದಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಇವರು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆ ಸವಾಲಾಗಿದೆ.

ಕಾಂಗ್ರೆಸ್‌ನ ಮಹಮದ್ ಜಾಫರ್ ಮತ್ತು ಜೀಷಾನ್ ಮಹಮದ್ ಅವರ ನಡುವೆ ತೀವ್ರ ಸ್ಪರ್ಧೆ ಇದ್ದು, ಪಕ್ಷೇತರ ಸದಸ್ಯರು ಯಾರ ಪರ ಒಲವು ತೋರುತ್ತಾರೊ ಅವರಿಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ.

ಶಾಸಕ ಟಿ.ಬಿ.ಜಯಚಂದ್ರ ಅವರು ಈಗಾಗಲೇ ನಗರಸಭೆ ಸದಸ್ಯರ ಅಭಿಪ್ರಾಯಗಳನ್ನು ಪಡೆದಿದ್ದು, ‘ಎಲ್ಲರೂ ಒಗ್ಗೂಡಿ ಬನ್ನಿ’ ಎಂದು ಕಳುಹಿಸಿದ್ದಾರೆ. ಶಾಸಕರ ನಡೆ ನಿಗೂಢವಾಗಿದ್ದು ಕೊನೆಯ ಕ್ಷಣದವರೆಗೂ ಗುಟ್ಟು ಬಿಟ್ಟುಕೊಡದಿರುವುದು ಆಕಾಂಕ್ಷಿಗಳಲ್ಲಿ ಆತಂಕ ಮೂಡಿಸಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಮಹಮದ್ ಜಾಫರ್ ಅವರು ಜಾಮೀಯಾ ಮಸೀದಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮುದಾಯದ ಪ್ರಬಲ ನಾಯಕ. ಜೀಷಾನ್ ಮಹಮದ್ ಅವರಿಗೆ ಅವರ ತಂದೆ ಅಲ್ಲಾಭಕ್ಕಾಷ್ ಪ್ಯಾರು ಅವರ ಹೆಸರೇ ಶ್ರೀರಕ್ಷೆ.

ಕಾಂಗ್ರೆಸ್ ಸದಸ್ಯರು ಅಧಿಕಾರಕ್ಕಾಗಿ ಹೋರಾಟ ಪ್ರಾರಂಭಿಸಿದ್ದು ಈ ಗೊಂದಲದ ಲಾಭ ಪಡೆಯಲು ಜೆಡಿಎಸ್, ಬಿಜೆಪಿ ಮೈತ್ರಿಕೂಟ ಸಿದ್ಧತೆ ನಡೆಸಿದೆ. ಅಧಿಕಾರ ಪಡೆಯಲು ಎಲ್ಲ ತಂತ್ರಗಳನ್ನು ನಡೆಸುತ್ತಿದ್ದು, ಅವರಲ್ಲಿ ಆರ್.ರಾಮು, ಅಂಜಿನಪ್ಪ, ಉಮಾ ವಿಜಯಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಅಧ್ಯಕ್ಷ ಚುನಾವಣೆಯಲ್ಲಿ ಕುದುರೆ ವ್ಯಾಪಾರ ಹೆಚ್ಚಾಗಿದ್ದು ಯಾರ ನಿಷ್ಠೆ ಯಾರ ಪರವಾಗುವುದು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.

ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದ್ದು, ಮೂರು ಪಕ್ಷದಲ್ಲಿ ತಲಾ ಇಬ್ಬರು ಅರ್ಹ ಅಭ್ಯರ್ಥಿಗಳಿದ್ದರೂ, ಕಾಂಗ್ರೆಸ್ ಪಕ್ಷದ ಲಕ್ಷ್ಮಿಕಾಂತ್ ಉಪಾಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT