ಕಾಳಿ ಹುಲಿ ಸಂರಕ್ಷಿತಾರಣ್ಯವೂ ಸೇರಿದಂತೆ ಐದು ಅರಣ್ಯ ವಿಭಾಗಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಶೇ 80ರಷ್ಟು ಅರಣ್ಯ ಭೂಮಿ ಇದೆ. ಹಿಂದಿನ ಕಾಲದಿಂದಲೂ ವನ್ಯಜೀವಿ ಉತ್ಪನ್ನ ಬಳಕೆ ಜಿಲ್ಲೆಯಲ್ಲಿ ಹೆಚ್ಚಿದೆ ಎಂಬ ಪ್ರತೀತಿ ಇದೆ. ಪಾರಂಪರಿಕ ಔಷಧ ಪದ್ಧತಿ, ಧಾರ್ಮಿಕ ಆಚರಣೆಗಳಿಗೆ ವನ್ಯಜೀವಿ ಉತ್ಪನ್ನ ಬಳಕೆ ಇದ್ದವು. ಆದರೆ, ಅರಣ್ಯ ಇಲಾಖೆ ನೀಡಿದ ಸೂಚನೆಗೆ ಕೇವಲ 16 ಜನರು ಜಿಂಕೆ ಕೊಂಬು, ಕಾಡುಕೋಣದ ಕೊಂಬು ಸೇರಿದಂತೆ 78 ವಿಧಧ ಉತ್ಪನ್ನಗಳನ್ನು ಆಯಾ ವಲಯ ಅರಣ್ಯಾಧಿಕಾರಿ ಕಚೇರಿಗೆ ಸಲ್ಲಿಸಿದ್ದಾರೆ. ಈ ಪೈಕಿ ಶಿರಸಿ ವಲಯ ವ್ಯಾಪ್ತಿಯಲ್ಲೇ ಹೆಚ್ಚು ಉತ್ಪನ್ನಗಳು ಸಲ್ಲಿಕೆಯಾಗಿವೆ.