ಕಾರವಾರ: ನಿರಂತರ ಮಳೆಯಿಂದ ಹೊನ್ನಾವರ ತಾಲ್ಲೂಕಿನಲ್ಲಿ ಹರಿಯುವ ಗುಂಡಬಾಳ ನದಿ ಉಕ್ಕೇರಿದ್ದು, ನದಿ ಪಾತ್ರದಲ್ಲಿರುವ ಆರು ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶಿಸಿದ್ದಾರೆ.
ಅನಿಲಗೋಡ ಗ್ರಾಮದಲ್ಲಿರುವ ಜನತಾ ವಿದ್ಯಾಲಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಂಡ ಬಾಳದ ನಂ-2, ಗುಂಡಿ ಬೈಲ್ ನಂ-2, ಹುಡ್ಗೋಡ ಇಟ್ಟಿಹಾದ ಪಬ್ಲಿಕ್ ಶಾಲೆ, ಗಂಜಿಗೆರೆಯ ಹಿರಿಯ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಗುಂಡಬಾಳ ನದಿಯು ಉಕ್ಕೇರಿದ ಪರಿಣಾಮ ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಜನಕೇರಿ ಮತ್ತು ಹಿತ್ತಲಕೇರಿ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಜನರನ್ನು ಸಮೀಪದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.