ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಕೃಷ್ಣಾ ನಗರದ ನಂದಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಬಾಯ್ಲರ್ ಸ್ಪೋಟವಾಗಿದೆ. ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಸ್ಫೋಟವಾದ ಬಾಯ್ಲರ್ ಬಳಿಯೇ 15 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಟೀ ಕುಡಿಯಲು ಹೊರಗೆ ಹೊರಟಾಗ ಏಕಾಏಕಿ ಬಾಯ್ಲರ್ ಸ್ಪೋಟವಾಗಿದ್ದು, ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಪಾರಾಗಿದ್ದಾರೆ.
ಮುಂಬರುವ ಹಂಗಾಮಿಗೆ ಕಬ್ಬು ನುರಿಸಲು ಕಾರ್ಖಾನೆಯ ಯಂತ್ರಗಳನ್ನು ಸಿದ್ಧತೆ ಮಾಡುವ ವೇಳೆ ಬಾಯ್ಲರ್ ಸ್ಫೋಟವಾಗಿದೆ.
ವರ್ಷದ ಹಿಂದೆ ಅಂದರೆ, 2023ರ ಮಾರ್ಚ್ 4 ರಂದು ಇದೇ ಸಕ್ಕರೆ ಕಾರ್ಖಾನೆಯ ಮತ್ತೊಂದು ಬಾಯ್ಲರ್ ಸ್ಫೋಟವಾಗಿ, ಒಬ್ಬ ಕಾರ್ಮಿಕ ಸಾವಿಗೀಡಾಗಿ, ನಾಲ್ಕು ಜನ ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದವು.
ಈ ಹಿಂದಿನ ಆಡಳಿತ ಮಂಡಳಿಯು ಕಳಪೆ ಗುಣಮಟ್ಟದ ಬಾಯ್ಲರ್ ಕೂರಿಸಿರುವುದೇ ಸ್ಫೋಟಕ್ಕೆ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.