ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ನೀತಿಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿದ್ದ ಘಟನೆ ಉತ್ತರ ಪ್ರದೇಶದ ಲಖೀಂಪುರ ಖೀರಿಯಲ್ಲಿ 2021ರ ಅಕ್ಟೋಬರ್ನಲ್ಲಿ ನಡೆದಿತ್ತು. ಖೀರಿ ಕ್ಷೇತ್ರದ ಸಂಸದ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾಗಿದ್ದ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ಅವರು ಕಾರು ಹರಿಸಿದ್ದರು ಎಂದು ಆರೋಪಿಸಲಾಗಿತ್ತು. ಅಜಯ್ ಕುಮಾರ್ ವಿರುದ್ಧ ರೈತ ಸಂಘಟನೆಗಳ ಮತ್ತು ಸಾಮಾಜಿಕ ಹೋರಾಟಗಾರರ ಆಕ್ರೋಶ ಇದ್ದರೂ ಬಿಜೆಪಿಯು ಈ ಬಾರಿ ಅವರನ್ನೇ ಕಣಕ್ಕಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆಯ ಬಲದೊಂದಿಗೆ ಕಣಕ್ಕಿಳಿದಿರುವ ಮಿಶ್ರಾ, ‘ಹ್ಯಾಟ್ರಿಕ್’ ಗೆಲುವಿನ ವಿಶ್ವಾಸದಲ್ಲಿದ್ದಾರೆ.