ಬೆಂಗಳೂರು: ಬಿಗ್ಬಾಸ್ ರಿಯಾಲಿಟಿ ಶೋ ಆರಂಭವಾಗಿ ಕೇವಲ ಮೂರನೇ ದಿನಕ್ಕೆ ಲಾಯರ್ ಜಗದೀಶ್ ಬಿಗ್ಬಾಸ್ ಮನೆ ತೊರೆಯುವುದಾಗಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಸ್ವರ್ಗ ನಿವಾಸಿಯಾಗಿರುವ ಜಗದೀಶ್, ನರಕ ನಿವಾಸಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮಾನವೀಯತೆ ಇಲ್ಲದ ಜಾಗದಲ್ಲಿ ಇರಲು ಸಾಧ್ಯವಿಲ್ಲ ಎಂದಿದ್ದಾರೆ.
ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಮನೆ ತೊರೆಯುವ ನಿರ್ಧಾರ ತೆಗೆದುಕೊಂಡಿರುವ ಜಗದೀಶ್, ‘ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ಬಾಸ್ ಹೇಗೆ ಓಡ್ಸ್ತಿರಾ?’ ಎಂದು ಬಿಗ್ಬಾಸ್ಗೆ ಆವಾಜ್ ಹಾಕಿದ್ದಾರೆ. ಅಲ್ಲದೇ ಬಿಗ್ಬಾಸ್ ಕಾರ್ಯಕ್ರಮದ ಹೆಸರು ಹಾಳು ಮಾಡುವುದಾಗಿಯೂ, ಅಲ್ಲಿಗೆ ಯಾರು ಕಾಲಿಡದಂತೆ ಮಾಡುವುದಾಗಿಯೂ ಹೇಳಿದ್ದಾರೆ.
ನರಕ ನಿವಾಸಿಗಳಿಗೆ ಸ್ವರ್ಗ ನಿವಾಸಿಗಳ ಆಹಾರ ಕೊಡುವುದು, ಬಿಸಿ ನೀರು ಕಾಯಿಸಿಕೊಡುವುದು, ನರಕ ನಿವಾಸಿಗಳು ಮಾಡಬೇಕಾದ ಕೆಲಸಗಳನ್ನು ತಾವೇ ಮಾಡುವುದು ಹೀಗೆ ಅನೇಕ ವಿಚಾರಕ್ಕೆ ಜಗದೀಶ ಮನೆಯವರ ಕಂಗಣ್ಣಿಗೆ ಗುರಿಯಾಗಿದ್ದರು.
ಎರಡನೇ ದಿನ ನಡೆದ ‘ತಕ್ಕಡಿ ಭಾಗ್ಯ’ ಟಾಸ್ಕ್ನಲ್ಲಿಯೂ ಜಗದೀಶ್ ವಿರುದ್ಧ ಕ್ಯಾಪ್ಟನ್ ಧನರಾಜ್ ಮತ್ತು ಮಾನಸ ಸಂತೋಷ್ ಕೆಂಡಾಮಂಡಲವಾಗಿದ್ದರು. ಧನರಾಜ್ ಅವರನ್ನು ‘ಕಾಮಿಡಿ ಪೀಸ್’ ಎಂದು ಕರೆದಿರುವುದೇ ಇದಕ್ಕೆ ಕಾರಣವಾಗಿತ್ತು. ಹಾಸ್ಯ ಕಲಾವಿದರಿಗೆ ಗೌರವ ಕೊಡುವುದನ್ನು ಮೊದಲು ಕಲಿತುಕೊಳ್ಳಿ ಎಂದು ಮಾನಸ ನೇರವಾಗಿಯೇ ಕುಟುಕಿದ್ದರು.
ಈ ವಾರ ನಾಮಿನೇಟ್ ಆದವರ ಪಟ್ಟಿಯಲ್ಲಿ ಜಗದೀಶ್ ಅವರು ಇದ್ದಾರೆ.
ಈ ವಾರ ಜಗದೀಶ್ ಅವರು ಮನೆಯಿಂದ ಹೊರ ನಡೆಯುತ್ತಾರಾ? ಅಥವಾ ಉಳಿದುಕೊಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.