ಗೂಗಲ್ ಲೆನ್ಸ್ ಮೂಲಕ ಪತ್ರಿಕಾ ಪ್ರಕಟಣೆಯ ಸ್ಕ್ರೀನ್ ಶಾಟ್ ಅನ್ನು ಪರಿಶೀಲನೆಗೊಳಪಡಿಸಿದಾಗ, ಅದನ್ನು ಹಲವರು ಹಂಚಿಕೊಂಡಿರುವುದು ಕಂಡುಬಂತು. ಈ ಬಗ್ಗೆ ಮತ್ತಷ್ಟು ಹುಡುಕಾಟ ನಡೆಸಿದಾಗ, ಇನಾಮ್ ಉನ್ ನಬಿ ಎನ್ನುವವರು, ಇದು ವಿರೋಧ ಪಕ್ಷಗಳ ಕುತಂತ್ರ ಎಂದು ಆರೋಪಿಸಿ ಬರೆದ ಎಕ್ಸ್ ಪೋಸ್ಟ್ ಕಂಡಿತು. ಅದನ್ನು ಆಧಾರವಾಗಿಟ್ಟುಕೊಂಡು ಹುಡುಕಾಟ ನಡೆಸಿದಾಗ, ಪಿಟಿಐ ಸುದ್ದಿಯೊಂದನ್ನು ‘ಡೆಕ್ಕನ್ ಹೆರಾಲ್ಡ್’ ಪ್ರಕಟಿಸಿರುವುದು ಸಿಕ್ಕಿತ್ತು. ಅದು ಬಿಜೆಪಿಯ ಜಮ್ಮು ಕಾಶ್ಮೀರ ಘಟಕದ ಅಧ್ಯಕ್ಷರು ಕೊಟ್ಟ ಹೇಳಿಕೆಯ ಸುದ್ದಿ. ‘ಎಂಜಿನಿಯರ್ ರಶೀದ್ ಅವರ ಸ್ವಾಗತ ರ್ಯಾಲಿಗೆ ಬರುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟಿರುವ ಪತ್ರಿಕಾ ಪ್ರಕಟಣೆ ನಕಲಿ’ ಎಂದು ಅವರು ಸ್ಪಷ್ಟೀಕರಣ ನೀಡಿದ್ದರು. ಜತೆಗೆ, ಆ ಪತ್ರಿಕಾ ಪ್ರಕಟಣೆಯು ನಕಲಿ ಎಂದು ಜಮ್ಮು ಕಾಶ್ಮೀರದ ಬಿಜೆಪಿ ಘಟಕದ ಅಧ್ಯಕ್ಷ ರವೀಂದರ್ ರೈನಾ ಎಕ್ಸ್ನಲ್ಲಿಯೂ ಸ್ಪಷ್ಟೀಕರಣ ನೀಡಿದ್ದಾರೆ. ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.