‘ಮಹಾಯುತಿ’ಯನ್ನು ಕಿತ್ತೊಗೆಯಲು ಒಟ್ಟಾಗಿರೋಣ: ಅಖಿಲೇಶ್
ಲಖನೌ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವನ್ನು ಕಿತ್ತೊಗೆಯಲು ಎಲ್ಲರೂ ಒಟ್ಟಾಗಿ ಕಾರ್ಯತಂತ್ರ ರೂಪಿಸಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಕರೆ ನೀಡಿದ್ದಾರೆ ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿ ಶಿವಸೇನಾ(ಶಿಂದೆ ಬಣ) ಮತ್ತು ಎನ್ಸಿಪಿ(ಅಜಿತ್ ಬಣ) ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ವಿರೋಧಿಗಳನ್ನು ಸೋಲಿಸಿ ಬದಲಾವಣೆ ತರಲು ಬದ್ಧರಾಗಿರುವುದಾಗಿ ‘ಎಕ್ಸ್’ನಲ್ಲಿ ತಿಳಿಸಿದರು. ‘ಈ ಬಾರಿಯ ಚುನಾವಣೆಯು ಮಹಾರಾಷ್ಟ್ರದಲ್ಲಿ ಬಿಜೆಪಿ ಮಾಡುತ್ತಿರುವ ವಿಧ್ವಂಸಕ ಪಿತೂರಿ ಮತ್ತು ಕೋಮುವಾದದ ರಾಜಕಾರಣವನ್ನು ಕೊನೆಗೊಳಿಸಲಿದೆ. ವಿರೋಧ ಪಕ್ಷಗಳ ಕೂಟದ ಸಕಾರಾತ್ಮಕ ಕಾರ್ಯತಂತ್ರವನ್ನು ಅರಿಯುವಲ್ಲಿ ಬಿಜೆಪಿ ವಿಫಲವಾಗಿದೆ. ಮಹಾರಾಷ್ಟ್ರದ ಆರ್ಥಿಕತೆಯನ್ನು ನಿಧಾನವಾಗಿ ನಾಶ ಮಾಡುವ ಬಿಜೆಪಿಯ ಷಡ್ಯಂತ್ರವು ರಾಜ್ಯದ ಜನರ ಮುಂದೆ ಬಯಲಾಗಿದೆ’ ಎಂದು ಹೇಳಿದ್ದಾರೆ.