ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Haryana Election results: ಕಾಂಗ್ರೆಸ್‌ ಆಘಾತದ ಹಿಂದಿನ 5 ಪ್ರಮುಖ ಕಾರಣಗಳು

Published : 8 ಅಕ್ಟೋಬರ್ 2024, 11:28 IST
Last Updated : 8 ಅಕ್ಟೋಬರ್ 2024, 11:28 IST
ಫಾಲೋ ಮಾಡಿ
Comments

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯ ನಂತರದ ಮತಗಟ್ಟೆ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಲಭಿಸಿತ್ತು. ಮತ ಎಣಿಕೆ ದಿನವಾದ ಮಂಗಳವಾರ ಬೆಳಿಗ್ಗೆ 9ರವರೆಗೂ ಕಾಂಗ್ರೆಸ್ ಇದೇ ಹುಮ್ಮಸ್ಸಿನಲ್ಲೇ ಇತ್ತು. ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆಗಳು ಕಾಂಗ್ರೆಸ್ ಪಾಳಯದಲ್ಲಿ ಗರಿಗೆದರಿದ್ದವು. ದೆಹಲಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಸಿಹಿ ಹಂಚಲು ಸಿದ್ಧತೆಯೂ ನಡೆದಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಈ ಚಿತ್ರಣವೇ ಬದಲಾಯಿತು. 

ಗೆಲುವಿನ ಮಾಲೆ ಬಿಜೆಪಿಯತ್ತ ವಾಲಿತು. 90 ಸದಸ್ಯಬಲದ ಹರಿಯಾಣ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಬಹುತೇಕ ಪೂರ್ಣಗೊಳ್ಳುವ ಹೊತ್ತಿಗೆ ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು. ಚುನಾವಣೋತ್ತರ ಸಮೀಕ್ಷೆಗಳು ತಲೆಕೆಳಗಾಗಿದ್ದವು. ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಗೆಲುವಿನ ದಡ ಸೇರುವ ತವಕದಲ್ಲಿದ್ದ ಕಾಂಗ್ರೆಸ್‌ನ ಕನಸಿನ ಗೋಪುರವನ್ನು ಫಲಿತಾಂಶ ನುಚ್ಚುನೂರು ಮಾಡಿತ್ತು. 

ಗೆಲುವಿನ ದಡ ಸೇರುವಲ್ಲಿ ವಿಫಲವಾದ ಕಾಂಗ್ರೆಸ್‌ಗೆ ಆಘಾತ ತಂದ ಪ್ರಮುಖ ಕಾರಣಗಳು ಇಲ್ಲಿವೆ...

ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿನ ಒಳಜಗಳ

2019ರ ಚುನಾವಣೆಯಲ್ಲಿ ಕಾಂಗ್ರೆಸ್‌ 31 ಸ್ಥಾನಗಳನ್ನು ಗೆದ್ದಿತ್ತು. 90 ಸದಸ್ಯಬಲದ ಹರಿಯಾಣ ವಿಧಾನಸಭೆಯ ಚುನಾವಣೆಯಲ್ಲಿ ಈ ಬಾರಿಯೂ ಕಾಂಗ್ರೆಸ್‌ ಪಡೆದ ಸ್ಥಾನಗಳ ಸಂಖ್ಯೆ ಇದರ ಆಸುಪಾಸಿನಲ್ಲೇ ಇದೆ. ಇದಕ್ಕೆ ಪ್ರಮುಖ ಕಾರಣ, ಪಕ್ಷದೊಳಗಿನ ಒಳಜಗಳ ಹಾಗೂ ಅಧಿಕಾರಕ್ಕಾಗಿ ಹಿರಿಯ ನಾಯಕರ ನಡುವಿನ ಗುದ್ದಾಟ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

ಚುನಾವಣೆಗೂ ಮುನ್ನ ಗೆದ್ದೇಬಿಟ್ಟೆವು ಎಂದು ಬೀಗುತ್ತಿದ್ದ ಪಕ್ಷದ ಮುಖಂಡರು, ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಚರ್ಚೆ ಆರಂಭಿಸಿದ್ದರು. ಕಾಂಗ್ರೆಸ್‌ನ ಹಿರಿಯ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಹಾಗೂ ಹಿರಿಯ ನಾಯಕಿ ಕುಮಾರಿ ಶೆಲ್ಜಾ ನಡುವೆ ಬಹಿರಂಗವಾಗಿಯೇ ಅಧಿಕಾರಕ್ಕಾಗಿ ಜಟಾಪಟಿ ಆರಂಭಗೊಂಡಿತ್ತು. ಇದು ಪಕ್ಷಕ್ಕೆ ಹಾನಿಯುಂಟುಮಾಡಿತ್ತು.

ಇದರ ನಡುವೆಯೇ ಪಕ್ಷವು ಒಗ್ಗಟ್ಟಿನಿಂದ ಹೋರಾಡುತ್ತಿದೆ ಎಂದು ಬಿಂಬಿಸಲು ಕಾಂಗ್ರೆಸ್ ತೀವ್ರ ಪ್ರಯಾಸಪಟ್ಟಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಪಕ್ಷವು ಒಡೆದ ಮನೆ ಎಂಬುದು ಜಗಜ್ಜಾಹೀರಾಗಿತ್ತು. ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಅಧಿಕಾರವನ್ನು ಹುಡಾಗೆ ನೀಡಲಾಗಿತ್ತು. ಆದರೆ, ಅದು ಅಷ್ಟಾಗಿ ಫಲ ನೀಡಲಿಲ್ಲ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಜಾಟ್ ಮತಗಳತ್ತ ಕಾಂಗ್ರೆಸ್ ಚಿತ್ತ; ಉಳಿದವರ ಮತ ಬಿಜೆಪಿಯತ್ತ

ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಯಕತ್ವ ವಹಿಸಿಕೊಂಡಿದ್ದ ಭೂಪಿಂದರ್ ಸಿಂಗ್ ಹೂಡಾ ಅವರು ಜಾಟ್ ಸಮುದಾಯದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದ್ದರು. ಆದರೆ, ಇದಕ್ಕೆ ಪರ್ಯಾಯವಾಗಿ ಜಾಟ್ ವಿರುದ್ಧದ ಮತಗಳು ಬಿಜೆಪಿ ಗೆಲುವಿಗೆ ನೆರವಾದವು. ಇತರ ಪಕ್ಷಗಳು, ಆಡಳಿತಾರೂಢ ಬಿಜೆಪಿಯನ್ನು ಬೆಂಬಲಿಸಿದ್ದು ಕಾಂಗ್ರೆಸ್‌ಗೆ ದುಬಾರಿಯಾಯಿತು ಎಂದೆನ್ನಲಾಗಿದೆ.

ಹ್ಯಾಟ್ರಿಕ್ ಸಾಧನೆಗಾಗಿ ಬಿಜೆಪಿಯ ಕಸರತ್ತು

ಚುನಾವಣೋತ್ತರ ಸಮೀಕ್ಷೆ ನಡೆಸಿದ್ದ ವಿವಿಧ ಸಂಸ್ಥೆಗಳು, ಬಿಜೆಪಿಗೆ ಈ ಬಾರಿ ಅಧಿಕಾರ ಸಿಗದು ಎಂಬುದನ್ನು ಒತ್ತಿ ಹೇಳಿದ್ದವು. ಹೀಗಿದ್ದರೂ, ಗೆಲುವಿಗಾಗಿ ಕೇಸರಿ ಪಾಳಯದಲ್ಲಿ ಸದ್ದಿಲ್ಲದ ಪ್ರಯತ್ನ ನಡೆದಿತ್ತು. ರಾಜ್ಯದಲ್ಲಿ ಪಕ್ಷದ ಉಸ್ತುವಾರಿಯನ್ನು ಧರ್ಮೇಂದ್ರ ಪ್ರದಾನ್ ಅವರಿಗೆ ನೀಡಲಾಗಿತ್ತು. ಪಕ್ಷದ ಕಾರ್ಯಕರ್ತರ ಪಡೆಯನ್ನು ಕರಾರುವಕ್ಕಾಗಿ ಬಳಸಿಕೊಂಡ ಅವರು, ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಜಯವನ್ನು, ತಮ್ಮತ್ತ ವಾಲುವಂತೆ ಮಾಡುವಲ್ಲಿ ಗೆದ್ದಿದ್ದಾರೆ. 

‘ದೊರೆತ ಜನರ ಬೆಂಬಲವನ್ನು ಮತಗಳಾಗಿ ಏಕೆ ಪರಿವರ್ತಿಸಲು ಸಾಧ್ಯವಾಗಿಲ್ಲ ಎಂಬುದರ ಕುರಿತು ಪರಾಮರ್ಶೆ ನಡೆಸಬೇಕಾಗಿದೆ’ ಎಂದು ಕಾಂಗ್ರೆಸ್‌ನ ಮುಖಂಡರು ಹೇಳಿದ್ದಾರೆ.

ಪಟ್ಟಣ ಪ್ರದೇಶಗಳ ಮೇಲೆ ಬಿಜೆಪಿ ಹಿಡಿತ

ಹರಿಯಾಣದ ಪ್ರಮುಖ ನಗರಗಳಾದ ಗುರುಗ್ರಾಮ ಹಾಗೂ ಫರಿದಾಬಾದ್‌ನಂತ ನಗರ ಪ್ರದೇಶಗಳಲ್ಲಿ ಬಿಜೆಪಿ ತನ್ನ ಹಿಡಿತ ಸಾಧಿಸಿರುವುದು ಈ ಬಾರಿಯ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ. ಮತ್ತೊಂದೆಡೆ ಗ್ರಾಮೀಣ ಭಾಗದ ಮತಗಳನ್ನು ಕಾಂಗ್ರೆಸ್ ಪಡೆದಿದೆಯಾದರೂ, ನಿರೀಕ್ಷಿತ ಮಟ್ಟದ ಮತಗಳನ್ನು ಅದು ಪಡೆದಿಲ್ಲ. ಆದರೆ, ನಗರ ಪ್ರದೇಶಗಳ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಾದೇಶಿಕ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳ ಮತಗಳಿಕೆಯ ಆಘಾತ

ಈವರೆಗಿನ ಫಲಿತಾಂಶದಲ್ಲಿ ಮತ ಗಳಿಕೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಅಲ್ಪ ಮುನ್ನಡೆ ಸಾಧಿಸಿದೆ. ಆದರೆ ಅದನ್ನು ಗೆಲುವಾಗಿ ಪರಿವರ್ತಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಕೆಲವು ಕ್ಷೇತ್ರಗಳಲ್ಲಿ ಗೆಲುವಿನ ಅಂತರ ತೀರಾ ಕಡಿಮೆಯಾಗಿದೆ. ಆದರೆ ಅಲ್ಲೆಲ್ಲಾ, ಪ್ರಾದೇಶಿಕ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಅನುಕಂಪದ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ಗೆ ಆಘಾತ ನೀಡಿವೆ. ಆದರೆ ಇದರ ನೇರ ಲಾಭ ಬಿಜೆಪಿಗೆ ಆಗಿರುವುದು ಸ್ಪಷ್ಟ.

ಹಾಗೆಂದ ಮಾತ್ರಕ್ಕೆ, ಪ್ರಾದೇಶಿಕ ಪಕ್ಷಗಳೂ ಈ ಬಾರಿ ಮುಗ್ಗರಿಸಿರುವುದು ಸ್ಪಷ್ಟವಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ಐಎನ್‌ಎಲ್‌ಡಿ ಹಾಗೂ ಬಿಎಸ್‌ಪಿ ತಲಾ ಒಂದು ಸ್ಥಾನದಲ್ಲಿ ಹಾಗೂ ನಾಲ್ವರು ಸ್ವತಂತ್ರ್ಯ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT