ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮರ್ಪಕ ಶಿಕ್ಷಣಕ್ಕೆ ಮದರಸಾ ಸೂಕ್ತವಲ್ಲ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

Published : 11 ಸೆಪ್ಟೆಂಬರ್ 2024, 15:49 IST
Last Updated : 11 ಸೆಪ್ಟೆಂಬರ್ 2024, 15:49 IST
ಫಾಲೋ ಮಾಡಿ
Comments

ನವದೆಹಲಿ: ದೇಶದಲ್ಲಿ ಸಮರ್ಪಕವಾದ ಶಿಕ್ಷಣ ಪಡೆಯಲು ಮದರಸಾಗಳು ಸೂಕ್ತವಲ್ಲದ ಮತ್ತು ಯೋಗ್ಯವಲ್ಲದ ಸ್ಥಳಗಳಾಗಿದ್ದು, ವಿವಿಧ ಕಾನೂನುಗಳನ್ನು ಉಲ್ಲಂಘಿಸಿ ಮನಬಂದಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್‌) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಒಟ್ಟಾರೆ ಮದರಸಾಗಳು ಸಾಂವಿಧಾನಿಕ ಆದೇಶಗಳು, ಶಿಕ್ಷಣ ಹಕ್ಕು ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆಗಳನ್ನು (2015) ಉಲ್ಲಂಘಿಸಿ ಕೆಲಸ ಮಾಡುತ್ತಿವೆ ಎಂದು ಆಯೋಗ ಹೇಳಿದೆ.

ಇಲ್ಲಿ ಸಂಪೂರ್ಣವಾಗಿ ಧಾರ್ಮಿಕ ಹಿನ್ನೆಲೆಯ ಶಿಕ್ಷಣ ನೀಡಲಾಗುತ್ತಿದ್ದು, ಮಗುವಿನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತಿದೆ. ಅಲ್ಲದೆ ಶಿಕ್ಷಣ ಹಕ್ಕು ಕಾಯ್ದೆ 2009 ಸೇರಿದಂತೆ ಇತರ ಪೂರಕ ಕಾಯ್ದೆಗಳಿಗೆ ಇವು ಬದ್ಧವಾಗಿಲ್ಲ. ಧಾರ್ಮಿಕ ವಿಷಯದ ಕಲಿಕೆಯು ಮದರಸಾಗಳಲ್ಲಿ ಸಾಂಸ್ಥೀಕರಣ ಆಗಿರುವುದರಿಂದ ಮುಗ್ಧ ಮಕ್ಕಳು ಬಳಲುತ್ತಿದ್ದಾರೆ ಎಂದು ಮಕ್ಕಳ ಹಕ್ಕುಗಳ ಸಂಸ್ಥೆ ಉಲ್ಲೇಖಿಸಿದೆ. ಉತ್ತರ ಪ್ರದೇಶ ಅಂಜುಮ್‌ ಕದರಿ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಎನ್‌ಸಿಪಿಸಿಆರ್‌ ಲಿಖಿತ ಹೇಳಿಕೆ ದಾಖಲಿಸಿದೆ.

ಎನ್‌ಸಿಪಿಸಿಆರ್‌ ಹೇಳಿಕೆಯಲ್ಲಿ ಪ್ರಸ್ತಾಪಿಸಿರುವ ಪ್ರಮುಖಾಂಶಗಳು:

  • ಮದರಸಾಗಳು ಶಾಲಾ ವ್ಯಾಖ್ಯಾನದಿಂದ ದೂರ ಉಳಿದಿವೆ. ಹೀಗಾಗಿ ಮಕ್ಕಳನ್ನು ಅಥವಾ ಅವರ ಕುಟುಂಬದವರನ್ನು ಮದರಸಾಗಳಲ್ಲಿ ಶಿಕ್ಷಣ ಪಡೆಯುವಂತೆ ಒತ್ತಾಯಿಸುವ ಯಾವುದೇ ಹಕ್ಕನ್ನು ಅವು ಹೊಂದಿಲ್ಲ

  • ಸರಿಯಾದ ಪಠ್ಯಕ್ರಮ ಇಲ್ಲದಿರುವುದು, ಶಿಕ್ಷಕರ ಅರ್ಹತೆ, ಧನಸಹಾಯ ವಿಷಯಗಳಲ್ಲಿ ಪಾರದರ್ಶಕತೆಯ ಕೊರತೆಯಿದೆ. ನೆಲದ ಕಾನೂನನ್ನು ಇವು ಉಲ್ಲಂಘಿಸುತ್ತಿವೆ. ಮಕ್ಕಳಿಗೆ ಸಮಗ್ರ ಕಲಿಕಾ ವಾತಾವರಣ ಕಲ್ಪಿಸುವಲ್ಲಿ ಮದರಸಾಗಳು ವಿಫಲವಾಗಿವೆ

  • ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಕ್ಷೇತ್ರ ಕಾರ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಗಳನ್ನು ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹೇಗೆ ಆಯೋಜಿಸಬೇಕು ಎಂಬುದು ಬಹುತೇಕ ಮದರಸಾಗಳಿಗೆ ತಿಳಿದಿಲ್ಲ. ರಾಷ್ಟ್ರೀಯ ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಯನ್ನು ಇವು ಅಳವಡಿಸಿಕೊಂಡಿಲ್ಲ

  • ಮದರಸಾ ಶಿಕ್ಷಣ ಮಂಡಳಿಯು ಕೇವಲ ಪರೀಕ್ಷೆಗಳನ್ನು ನಡೆಸುವ ಅಧಿಕಾರ ಹೊಂದಿರುವ ಸಂಸ್ಥೆಯಾಗಿರುವ ಕಾರಣ, ಅದನ್ನು ಶೈಕ್ಷಣಿಕ ಪ್ರಾಧಿಕಾರ ಎಂದು ಪರಿಗಣಿಸಬಾರದು

  • ಸಮರ್ಥವಲ್ಲದ ಪಠ್ಯಕ್ರಮವು ಮಗುವಿನ ಶೈಕ್ಷಣಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮಕ್ಕಳ ಭವಿಷ್ಯಕ್ಕೆ ಮಾರಕ

  • ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮದರಸಾಗಳು ನಡೆಯುತ್ತಿದ್ದರೂ, ಲಭ್ಯ ಮಾಹಿತಿ ಪ್ರಕಾರ ಬಿಹಾರ, ಛತ್ತೀಸಗಢ, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ ರಾಜ್ಯಗಳು ಮಾತ್ರ ಮದರಸಾ ಮಂಡಳಿಯನ್ನು ಹೊಂದಿವೆ

  • ಮದರಸಾ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದಿನಿಯತ್‌ ಪುಸ್ತಕಗಳಲ್ಲಿ ಆಕ್ಷೇಪಾರ್ಹ ವಿಷಯಗಳು ಇರುವುದು ಕಂಡುಬಂದಿದೆ

  • ಮುಸ್ಲಿಮೇತರ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಮದರಸಾಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ

  • ಮಕ್ಕಳಿಗೆ ದೈಹಿಕ ಶಿಕ್ಷೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT