ಬೆಂಗಳೂರು: ‘ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿಯನ್ನು ಅ. 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಮುಂದಿಟ್ಟು ಚರ್ಚೆ ನಡೆಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಹಿಂದುಳಿದ ವರ್ಗಗಳ ಸಚಿವರು, ಶಾಸಕರು, ಮುಖಂಡರ ಜೊತೆ ಮುಖ್ಯಮಂತ್ರಿ ಸೋಮವಾರ ಸಭೆ ನಡೆಸಿದರು. ಸಭೆಯಲ್ಲಿ ಭಾಗವಹಿಸಿ ಹಿಂದುಳಿದ ವರ್ಗಗಳ ನಾಯಕರು ಪಕ್ಷಾತೀತವಾಗಿ ಜಾತಿಗಣತಿ ವರದಿಯ ಜಾರಿಗೆ ಒತ್ತಾಯಿಸಿದರು.
ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ಇದೇ 10ರಂದು ನಡೆಯುವ ಸಂಪುಟ ಸಭೆಗೆ ಈ ವರದಿಯನ್ನು ತರುವುದಿಲ್ಲ. 18ರ ಸಂಪುಟ ಸಭೆ ಮುಂದೆ ತರುತ್ತೇನೆ’ ಎಂದರು.
ವರದಿಗೆ ವಿರೋಧ ವ್ಯಕ್ತ ಆಗಿದೆಯಲ್ಲವೇ? ಎಂಬ ಪ್ರಶ್ನೆಗೆ, ‘ಸಚಿವ ಸಂಪುಟ ಸಭೆ ಏನು ಹೇಳುತ್ತದೆಯೋ ಹಾಗೆ ಮಾಡುತ್ತೇವೆ. ಸಂಪುಟ ಸಭೆಯ ನಿರ್ಣಯದ ಪ್ರಕಾರ ತಿರ್ಮಾನ ಮಾಡುತ್ತೇವೆ’ ಎಂದರು.
‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವರದಿ ಕೊಡಲು ಆಯೋಗ ಅಧ್ಯಕ್ಷರಾಗಿದ್ದ ಕಾಂತರಾಜು ಸಮಯ ನಿಗದಿ ಮಾಡಿದ್ದರು. ಆದರೆ, ಕುಮಾರಸ್ವಾಮಿ ವರದಿ ತೆಗೆದುಕೊಳ್ಳಲಿಲ್ಲ. ಈಗ ನಮ್ಮ ಅವಧಿಯಲ್ಲಿ ವರದಿ ಜಾರಿಗೆ ಹಿಂದುಳಿದ ವರ್ಗಗಳ ನಾಯಕರು ಮನವಿ ಮಾಡಿದ್ದಾರೆ’ ಎಂದರು.
‘ಕಾಂತರಾಜು ಅವರ ಬಳಿಕ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ವರದಿಯನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ವರದಿ ಜಾರಿಗೆ ಒತ್ತಾಯ ಇದೆ. ವರದಿ ಜಾರಿ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆಂದು ವಾರದ ಹಿಂದೆ ನಾನೇ ಹೇಳಿದ್ದೆ. ಹಿಂದುಳಿದ ವರ್ಗಗಳ ನಾಯಕರು ಇಂದು ಭೇಟಿ ಮಾಡಿ ಒತ್ತಾಯಿಸಿದ್ದಾರೆ’ ಎಂದೂ ಹೇಳಿದರು.
‘ಇದು ಹಿಂದುಳಿದ ವರ್ಗಗಳ ಸಮೀಕ್ಷೆ ಮಾತ್ರ ಅಲ್ಲ. ಏಳು ಕೋಟಿ ಜನರ ಸಮೀಕ್ಷೆ. ದೇಶದಲ್ಲಿ ಮೊದಲ ಬಾರಿಗೆ ಇಂಥ ಸಮೀಕ್ಷೆ ರಾಜ್ಯದಲ್ಲಿ ನಡೆದಿದೆ. ನಾನು ಈ ವರದಿ ನೋಡಿಲ್ಲ, ಓದಿಲ್ಲ’ ಎಂದೂ ಸಿದ್ದರಾಯಮ್ಮ ಹೇಳಿದರು.