ಬೆಕ್ಕಣ್ಣ ಬಿಟ್ಟೂಬಿಡದೆ ದಸರಾ ಕುಸ್ತಿ ಪಂದ್ಯಾವಳಿಯನ್ನು ನೋಡುತ್ತಿತ್ತು.
‘ನಮ್ಮ ಮಂತ್ರಿ, ಶಾಸಕರಿಗೂ ದಸರಾ ಕುಸ್ತಿ ಪಂದ್ಯ ಇಡಬೇಕಿತ್ತು. ಬರೇ ಕುಸ್ತಿಪಟುಗಳೇ ಎದಕ್ಕ ಕುಸ್ತಿ ಆಡಬೇಕು?’ ಎಂದಿತು.
‘ಮಂತ್ರಿ, ಶಾಸಕರ ಅಖಾಡನೇ ಬೇರೆ. ಮೈಮಣ್ಣಾಗದೆ ಪ್ರತಿದಿನ ಕುಸ್ತಿ ಆಡೋ ಪಟುಗಳು ಅವರು’ ಎಂದೆ.
‘ಅದೂ ಖರೇ. ಯಾರು ಯಾವಾಗ ಯಾವ ಪಟ್ಟು ಹಾಕ್ತಾರಂತ ಆ ಚಾಮುಂಡೇಶ್ವರಿಗೂ ಗೊತ್ತಾಗಲ್ಲ’ ಎಂದು ನಕ್ಕಿತು.
‘ಆದ್ರೂ ಮಂತ್ರಿ, ಶಾಸಕರಿಗೆ ಏನರೆ ಒಂದು ದಸರಾ ಪಂದ್ಯ ಇಡಬಕು. ಅವರು ಜನಸಾಮಾನ್ಯರ ಪ್ರತಿನಿಧಿಗಳು. ಅವರು ದಸರಾ ಪಂದ್ಯದಲ್ಲಿ ಭಾಗವಹಿಸಿದರು ಅಂದ್ರೆ ಜನಸಾಮಾನ್ಯರೇ ಭಾಗವಹಿಸಿದಂಗೆ, ಹೌದಿಲ್ಲೋ’ ಎಂಬ ವಾದ ಮುಂದಿಟ್ಟಿತು.
‘ಮ್ಯೂಸಿಕಲ್ ಚೇರ್ ಸ್ಪರ್ಧೆ ಇಡಬೌದು. ಆದ್ರೆ ಕುರ್ಚಿ ಸ್ಪರ್ಧೆನೂ ಪ್ರತಿದಿನ ನಡೆದೈತಿ’.
‘ಹಂಗಾದ್ರೆ ಅದು ಪ್ರಧಾನಿ ಕುರ್ಚಿ ಇದ್ದಂಗೆ. ಸದ್ಯಕ್ಕೆ ಮೋದಿಮಾಮ ಬಿಟ್ಟರೆ ಮತ್ತ್ಯಾರೂ ಕೂರಂಗಿಲ್ಲ! ಮ್ಯೂಸಿಕಲ್ ಚೇರ್ ಆಟಕ್ಕೆ ಮುಖ್ಯಮಂತ್ರಿ ಕುರ್ಚಿ ಇಡಬೌದು, ಪ್ರಧಾನಿ ಕುರ್ಚಿ ಇಡಂಗಿಲ್ಲ!’ ಎಂದು ಮುಸಿಮುಸಿ ನಕ್ಕಿತು.