ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

LS Polls | ಕಾರ್ಯಕರ್ತರ ಕಡೆಗಣನೆಯಿಂದಲೇ ಸೋಲು: ಕಾಂಗ್ರೆಸ್‌ ಪದಾಧಿಕಾರಿಗಳ ದೂರು

ಸರ್ಕಾರದ ನಡೆ ವಿರುದ್ಧ ಕಾಂಗ್ರೆಸ್‌ ಪದಾಧಿಕಾರಿಗಳ ದೂರು
Published 13 ಜುಲೈ 2024, 0:11 IST
Last Updated 13 ಜುಲೈ 2024, 0:11 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಕಾರ್ಯಕರ್ತರು, ಸ್ಥಳೀಯ ಮುಖಂಡರನ್ನು ಕಡೆಗಣಿಸಿದ್ದೇ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕಾರಣ ಎಂದು ಕೆಪಿಸಿಸಿ ಪದಾಧಿಕಾರಿಗಳು ಅಹವಾಲು ಮಂಡಿಸಿದ್ದಾರೆ.

ಸೋಲಿನ ಪರಾಮರ್ಶೆಗೆ ಎಐಸಿಸಿ ನಾಯಕ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ರಚಿಸಲಾದ ಸತ್ಯ ಶೋಧನಾ ಸಮಿತಿ ಮುಂದೆ ಬಹುತೇಕ ಪದಾಧಿಕಾರಿಗಳು ಈ ಅಸಮಾಧಾನ ಹೊರಹಾಕಿದ್ದಾರೆ.

ವಿಧಾನಸಭಾ ಚುನಾವಣೆಯ ಪೂರ್ವದಲ್ಲಿದ್ದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ನಡುವಿನ ಹೊಂದಾಣಿಕೆ ಲೋಕಸಭಾ ಚುನಾವಣೆಯ ವೇಳೆ ಕಾಣಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ನಂತರ ಬಹುತೇಕ ಸಚಿವರು ಹಾಗೂ ಶಾಸಕರು ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರಿಗಿಂತ ಐದು ‘ಗ್ಯಾರಂಟಿ’ ಯೋಜನೆಗಳನ್ನೇ ಅತಿಯಾಗಿ ನೆಚ್ಚಿಕೊಂಡರು. ಗೆಲುವಿನ ದಡ ಸೇರಲು ಗ್ಯಾರಂಟಿ ಯೋಜನೆಯ ಲಾಭ ಪಡೆದ ಫಲಾನುಭವಿಗಳ ಮತಗಳು ನೆರವಾಗುತ್ತವೆ ಎಂದು ನಂಬಿದರು. ‘ಗ್ಯಾರಂಟಿ’ ಯೋಜನೆಗಳ ಮೇಲಿನ ಅತಿಯಾದ ವಿಶ್ವಾಸ, ಸರ್ಕಾರ ಮತ್ತು ಪಕ್ಷದ ಕಾರ್ಯಕರ್ತರ ನಡುವಿನ ಬಾಂಧವ್ಯವನ್ನು ಸಡಿಲಗೊಳಿಸಿತು. ಇದರಿಂದ ಹಲವು ಸಚಿವರು, ಶಾಸಕರ ಕ್ಷೇತ್ರಗಳಲ್ಲೂ ಹಿನ್ನಡೆ ಅನುಭವಿಸಬೇಕಾಯಿತು ಎಂದು ಕಾರಣಗಳನ್ನು ನೀಡಿದ್ದಾರೆ.

ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಶಾಸಕರಿಗೆ ಸಿಕ್ಕ ಮನ್ನಣೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸಿಗಲಿಲ್ಲ. ನಿಗಮ–ಮಂಡಳಿಗಳ ನೇಮಕದಲ್ಲೂ ಕಡೆಗಣಿಸಲಾಯಿತು. ವರಿಷ್ಠರು ಕಾರ್ಯಕರ್ತರಿಗೂ ಸಮಾನ ಆದ್ಯತೆ ನೀಡಲು ಸೂಚಿಸಿದರೂ, ಕಾಟಾಚಾರಕ್ಕೆ ಒಂದಷ್ಟು ನೇಮಕಾತಿ ಮಾಡಲಾಯಿತು. ಸರ್ಕಾರವು ಪಕ್ಷವನ್ನೇ ವಿಶ್ವಾಸಕ್ಕೇ ತೆಗೆದುಕೊಳ್ಳಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. 

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ, ‘ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಫಲವಾಗಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದೆಗೆಲ್ಲುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಫಲ ಸಿಗಲಿಲ್ಲ. ಹಲವು ಸಚಿವರು, ಶಾಸಕರ ಕ್ಷೇತ್ರಗಳಲ್ಲೂ ಹಿನ್ನಡೆಯಾಗಿದೆ’ ಎಂದರು.

‘ಧಾರವಾಡ ಲೋಕಸಭಾ ಚುನಾವಣೆಗೆ ಹಿಂದೆ ನಾನೂ ಸ್ಪರ್ಧಿಸಿದ್ದೆ. ಈ ಬಾರಿ ಹೊಸ ಅಭ್ಯರ್ಥಿ ಕಣಕ್ಕೆ ಇಳಿಸಲಾಗಿತ್ತು. ಸಾಕಷ್ಟು ಪ್ರಯತ್ನಪಟ್ಟರೂ ಗೆಲುವು ಪಡೆಯಲು ಆಗಲಿಲ್ಲ. ಹಾಗಂತ ಜಿಲ್ಲೆಯಲ್ಲಿ ಯಾರೂ ಹೊಂದಾಣಿಕೆ ರಾಜಕೀಯ ಮಾಡಿಲ್ಲ. ನೇಹಾ ಕೊಲೆ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡಿತು. ಅವರ ತಂದೆ ಕಾಂಗ್ರೆಸ್‌ ಮುಖಂಡರಾದರೂ, ಅವರನ್ನೂ ದಾರಿ ತಪ್ಪಿಸಿದರು’ ಎಂದು ಬೇಸರ ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT