ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೇಶ್ಗೌಡ ಗೌಡರ್ ಕೊಲೆ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜುಲೈ 11ರಿಂದ ಆರಂಭಿಸಲಿದೆ.
ಈ ಕುರಿತ ಆದೇಶವನ್ನು, "ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ"ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಪ್ರಕಟಿಸಿದ್ದಾರೆ.
ಪ್ರಕರಣದ ವಿಚಾರಣೆ ಜುಲೈ 11ರಿಂದ 18ರವರೆಗೆ (ರಜಾ ದಿನಗಳನ್ನು ಹೊರತು ಪಡಿಸಿ) ನಿತ್ಯವೂ ನಡೆಯಲಿದೆ.
ಪ್ರಕರಣವೇನು?:
2016ರ ಜೂನ್ 15ರಂದು ನಡೆದ ಬಿಜೆಪಿ ಮುಖಂಡ ಯೋಗೇಶ್ ಗೌಡ ಗೌಡರ್ ಕೊಲೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವರ್ಗಾಯಿಸಿತ್ತು. ಸಿಬಿಐ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. "ಪ್ರಕರಣದ ವಿಚಾರಣೆಯನ್ನು ಆದ್ಯತೆ ಮೇರೆಗೆ ಮೂರು ತಿಂಗಳ ಒಳಗಾಗಿ ವಿಚಾರಣೆಯನ್ನು ಮುಕ್ತಾಯಗೊಳಿಸಿ" ಎಂದು ಹೈಕೋರ್ಟ್ ವಿಶೇಷ ನ್ಯಾಯಪೀಠ ಇತ್ತೀಚೆಗಷ್ಟೇ ಸೂಚಿಸಿತ್ತು. ಈ ಸೂಚನೆ ಅನ್ವಯ ಜುಲೈ 11 ರಿಂದ ದಿನಂಪ್ರತಿ ವಿಚಾರಣೆಗಾಗಿ ದಿನಾಂಕ ನಿಗದಿಪಡಿಸಲಾಗಿದೆ.