ಲೇಹ್–ಶ್ರೀನಗರ ಹೆದ್ದಾರಿ ಮುಕ್ತ
ನವದೆಹಲಿ, ಜುಲೈ 8– ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಭಾರತೀಯ ಸೇನೆ, ಒಂದೂವರೆ ತಿಂಗಳಿಂದ ಮುಚ್ಚಿದ್ದ ಲೇಹ್–ಶ್ರೀನಗರ ಹೆದ್ದಾರಿಯನ್ನು ಇಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿತು.
ಪ್ರಮುಖ ಆಯಕಟ್ಟಿನ ಪ್ರದೇಶವಾದ ಟೈಗರ್ ಹಿಲ್ ಮತ್ತು ಜುಬಾರ್ ಹಿಲ್ ಪ್ರದೇಶವನ್ನು ಭಾರತೀಯ ಪಡೆ ವಶಪಡಿಸಿಕೊಂಡಿರುವುದರಿಂದ ದ್ರಾಸ್ ಹಾಗೂ ಬಟಾಲಿಕ್ ಮೂಲಕ ಹಾದುಹೋಗುವ ಈ ಹೆದ್ದಾರಿಯನ್ನು ಮುಕ್ತಗೊಳಿಸಲು ಸಾಧ್ಯವಾಯಿತು.
ಸಚಿವ ನಾಣಯ್ಯ ವಿರುದ್ಧ ಹಕ್ಕುಚ್ಯುತಿ ಆರೋಪ
ಬೆಂಗಳೂರು, ಜುಲೈ 8– ಭಟ್ಕಳದ ಶಾಸಕ ಡಾ.ಯು. ಚಿತ್ತರಂಜನ್ ಅವರ ಕೊಲೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ವಿಚಾರಣಾ ಆಯೋಗ ತನ್ನ ವರದಿ ಕೊಟ್ಟು ಎರಡೂವರೆ ವರ್ಷಗಳಾದರೂ ಆ ವರದಿಯನ್ನು ಸದನದ ಮುಂದೆ ಮಂಡಿಸದೆ ಕಾನೂನು ಸಚಿವ ಎಂ.ಸಿ. ನಾಣಯ್ಯ ಅವರು ಸದನದ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಬಿಜೆಪಿಯ
ಡಾ.ಎಂ.ಪಿ. ಕರ್ಕಿ ಅವರು ಇಂದು ವಿಧಾನಸಭೆಯಲ್ಲಿ ಆರೋಪಿಸಿದರು.
ಈ ಸದನದ ಹಿಂದಿನ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದಾಗ ಮೂರು ತಿಂಗಳಲ್ಲಿ ವರದಿ ಮಂಡಿಸಲಾಗುತ್ತದೆ ಎಂಬ ಆಶ್ವಾಸನೆಯನ್ನು ಕಾನೂನು ಸಚಿವರು ನೀಡಿದ್ದರು. ಆದರೆ ಈ ಸದನದ ಕಾರ್ಯಕಲಾಪಗಳು ನಾಳೆ ಮುಗಿಯುತ್ತವೆ. ಆದರೂ ಕಾನೂನು ಸಚಿವರು ವರದಿ ಮಂಡಿಸದೆ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ತಮ್ಮ ವಾದವನ್ನು ಮಂಡಿಸಿದರು.