ನವದೆಹಲಿ: ಮುಂಬರುವ ಟಿ20 ವಿಶ್ವಕಪ್ಗೆ ಭಾರತ ತಂಡ ನಾಲ್ವರು ಸ್ಪಿನ್ನರ್ಗಳನ್ನು ಆಯ್ಕೆ ಮಾಡಿರುವ ನಿರ್ಧಾರದಿಂದ ಅಚ್ಚರಿಯಾಗಿಲ್ಲ ಎಂದು ವೆಸ್ಟ್ ಇಂಡೀಸ್ನ ಮಾಜಿ ನಾಯಕ ಕೋರ್ಟ್ನಿ ವಾಲ್ಷ್ ಅಭಿಪ್ರಾಯಪಟ್ಟಿದ್ದಾರೆ.
15 ಸದಸ್ಯರ ತಂಡದಲ್ಲಿ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರು ಸ್ಥಾನ ಪಡೆದಿದ್ದಾರೆ.
‘ಭಾರತವು ನಾಲ್ವರು ಸ್ಪಿನ್ನರ್ಗಳನ್ನು ಆಯ್ಕೆ ಮಾಡುವುದರಲ್ಲಿ ನನಗೆ ಆಶ್ಚರ್ಯವಿಲ್ಲ. ಇದು ಅವರ ಶಕ್ತಿ ಎಂದು ತೋರುತ್ತದೆ’ ಎಂದು ಬಿಗ್ ಕ್ರಿಕೆಟ್ ಲೀಗ್ ಪ್ರಾರಂಭದ ಸಂದರ್ಭದಲ್ಲಿ ವಾಲ್ಷ್ ಸುದ್ದಿಸಂಸ್ಥೆಗೆ ತಿಳಿಸಿದರು.
ವೆಸ್ಟ್ ಇಂಡೀಸ್ ಮೂವರು ಸ್ಪಿನ್ನರ್ಗಳನ್ನು ಆಯ್ಕೆ ಮಾಡಿದೆ. ಇದು ವಿಭಿನ್ನ ಪರಿಸ್ಥಿತಿಗಳಲ್ಲಿ ಇರಲಿದೆ ಮತ್ತು ಪ್ರತಿಯೊಬ್ಬರೂ ತಂಡವನ್ನು ಸಮತೋಲನಗೊಳಿಸಬೇಕು. ಭಾರತವು ಗುಣಮಟ್ಟದ ವೇಗದ ಬೌಲರ್ಗಳನ್ನು ಹೊಂದಿದೆ. ಆದ್ದರಿಂದ ಈ ಟೂರ್ನಿ ಸ್ಪರ್ಧಾತ್ಮಕವಾಗಿದೆ. ಬಹುತೇಕ ತಂಡಗಳು ಉತ್ತಮ ಗುಣಮಟ್ಟದ ವೇಗದ ಬೌಲರ್ಗಳು ಮತ್ತು ಸ್ಪಿನ್ನರ್ಗಳನ್ನು ಹೊಂದಿವೆ ಎಂದರು.
‘ಈ ಟೂರ್ನಿಯಲ್ಲಿ ಬಹುಶಃ ಬ್ಯಾಟರ್ಗಳು ಪ್ರಾಬಲ್ಯ ಸಾಧಿಸಬಹುದು. ಆದರೆ ಯಾರು ಗೆಲ್ಲುತ್ತಾರೆ ಎಂದು ಊಹಿಸುವುದು ಕಷ್ಟ, ಉತ್ತಮ ಪ್ರದರ್ಶನ ನೀಡುವ ತಂಡಗಳು ಯಶಸ್ವಿಯಾಗುತ್ತವೆ. ವಿಶ್ವಕಪ್ಗೆ ಜಂಟಿ ಆತಿಥ್ಯ ವಹಿಸಿರುವ ವೆಸ್ಟ್ ಇಂಡೀಸ್ ಸಹ ಚಾಂಪಿಯನ್ ಆಗುವ ಅವಕಾಶ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ತವರಿನ ತಂಡ ಸಹ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದೇನೆ. ಇದು ಸಮತೋಲಿತ ತಂಡ. ನಾನು ತುಂಬಾ ಆಶಾವಾದಿಯಾಗಿದ್ದೇನೆ’ ಎಂದರು.