ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

100 ರನ್‌ಗೆ ಆಲೌಟ್ ಆದರೂ ಸವಾಲು ಎದುರಿಸಲು ಸಿದ್ಧರಾಗಿದ್ದೆವು: ರೋಹಿತ್

Published : 1 ಅಕ್ಟೋಬರ್ 2024, 12:53 IST
Last Updated : 1 ಅಕ್ಟೋಬರ್ 2024, 12:53 IST
ಫಾಲೋ ಮಾಡಿ
Comments

ಬೆಂಗಳೂರು: ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಆಕ್ರಮಣಕಾರಿ ಮನೋಭಾವದಿಂದ ಆಡುವ ಮೂಲಕ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ಏಳು ವಿಕೆಟ್ ಅಂತರದ ಜಯ ಗಳಿಸಿದೆ. ಆ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಮಹತ್ವದ ಅಂಕ ಗಳಿಸಿದೆ.

ಎರಡೂವರೆ ದಿನ ಮಳೆಯಿಂದಾಗಿ ನಷ್ಟವಾದ ಟೆಸ್ಟ್ ಪಂದ್ಯದಲ್ಲಿ ಫಲಿತಾಂಶ ಸಾಧಿಸಲು ಟೀಮ್ ಇಂಡಿಯಾದ ಧನಾತ್ಮಕ ಆಟವು ಎಲ್ಲಡೆಯಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಪಂದ್ಯದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, 'ಒಂದು ವೇಳೆ 100 ರನ್ನಿಗೆ ಆಲೌಟ್ ಆದರೂ ಸವಾಲು ಎದುರಿಸಲು ಸಿದ್ಧರಾಗಿದ್ದೆವು' ಎಂದು ತಿಳಿಸಿದ್ದಾರೆ.

ಬಾಂಗ್ಲಾದೇಶದ 233 ರನ್‌ಗಳಿಗೆ ಉತ್ತರವಾಗಿ ಟ್ವೆಂಟಿ-20 ಶೈಲಿಯಲ್ಲಿ ಬ್ಯಾಟ್ ಬೀಸಿದ್ದ ಭಾರತ ಮೊದಲ ಇನಿಂಗ್ಸ್‌ನಲ್ಲಿ 34.4 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಆ ಮೂಲಕ 52 ರನ್‌ಗಳ ಮುನ್ನಡೆ ಗಳಿಸಿತ್ತು.

ಈ ಸಂದರ್ಭದಲ್ಲಿ ಭಾರತ ದಾಖಲೆ ವೇಗದಲ್ಲಿ 50, 100, 150, 200 ಮತ್ತು 250 ರನ್‌ಗಳ ಗಡಿಯನ್ನು ದಾಟಿತ್ತು.

'ಎರಡೂವರೆ ದಿನ ಕಳೆದುಕೊಂಡ ಬಳಿಕ ನಾಲ್ಕನೇ ದಿನ ಎದುರಾಳಿ ತಂಡವನ್ನು ಸಾಧ್ಯವಾದಷ್ಟು ಬೇಗ ಆಲೌಟ್ ಮಾಡಿ ಬ್ಯಾಟಿಂಗ್ ನಡೆಸಲು ಬಯಸಿದ್ದೆವು. ಬಾಂಗ್ಲಾದೇಶ ತಂಡ 233ಕ್ಕೆ ಆಲೌಟ್ ಆದಾಗ ನಮಗೆ ಸ್ಕೋರ್ ಬಗ್ಗೆ ಚಿಂತೆ ಇರಲಿಲ್ಲ. ಪಂದ್ಯದಲ್ಲಿ ಎಷ್ಟು ಓವರ್‌ಗಳು ಉಳಿದಿವೆ ಎಂಬುದು ಮುಖ್ಯವೆನಿಸಿತ್ತು' ಎಂದು ರೋಹಿತ್ ಹೇಳಿದ್ದಾರೆ.

'ತಂಡದೆಲ್ಲ ಆಟಗಾರರ ಪ್ರಯತ್ನದಿಂದಾಗಿ ಈ ಪಿಚ್‌ನಲ್ಲಿ ಫಲಿತಾಂಶ ಹೊರಹೊಮ್ಮಲು ಸಾಧ್ಯವಾಗಿದೆ. ಸವಾಲುಗಳನ್ನು ಎದುರಿಸಲು ನಾವು ಸಿದ್ಧರಿದ್ದೆವು. ಆಕ್ರಮಣಕಾರಿಯಾಗಿ ಆಡುವಾಗ ಸತತವಾಗಿ ವಿಕೆಟ್ ಕಳೆದುಕೊಂಡು ಬೇಗನೇ ಆಲೌಟ್ ಆಗುವ ಭೀತಿ ಇರುತ್ತದೆ. ಆದರೆ 100 ಅಥವಾ 120ಕ್ಕೆ ಆಲೌಟ್ ಆದರೂ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಿದ್ದೆವು' ಎಂದು ಅವರು ತಿಳಿಸಿದ್ದಾರೆ.

ಅಂತಿಮವಾಗಿ ಟೀಮ್ ಇಂಡಿಯಾ ತವರು ನೆಲದಲ್ಲಿ ಸತತ 18ನೇ ಸರಣಿ ಜಯದ ಸಿಹಿ ಸವಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT