<p>‘ರಾಜ್ಯದಲ್ಲಿ ಭ್ರಷ್ಟಾಚಾರವು ಸಾಂಸ್ಥೀಕರಣಗೊಳ್ಳುವ ಮಟ್ಟಕ್ಕೆ ಬೇರುಬಿಟ್ಟಿದೆ. ಅದನ್ನು ನಿಗ್ರಹಿಸುವ ಸವಾಲನ್ನು ಎದುರಿಸಿ ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡಲು ನಾನು ನಿಮ್ಮೆಲ್ಲರ ಸಹಕಾರ ಕೋರುತ್ತೇನೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳನ್ನು ನನ್ನ ಸರ್ಕಾರ ಕೈಗೊಳ್ಳಲಿದೆ...’ </p>.<p>2023ರ ಜುಲೈ 4ರಂದು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮಾಡಿದ ಭಾಷಣದ ಸಾಲುಗಳಿವು.</p>.<p>ಬಿಜೆಪಿ ಆಡಳಿತಾವಧಿಯ ಭ್ರಷ್ಟಾಚಾರ, ಸ್ವಜನಪಕ್ಷಪಾತವು ನಾಡಿನ ಅಭಿವೃದ್ಧಿಗೆ ‘ಕೇಡು’ ಎಂಬುದನ್ನು ಜನರಿಗೆ ಅರ್ಥ ಮಾಡಿಸಿದ್ದ ಕಾಂಗ್ರೆಸ್ ನಾಯಕರು, ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದರು. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ತಮ್ಮ ‘ಸರ್ಕಾರದ ಹಾದಿ’ಯ ಬಗ್ಗೆ 224 ಶಾಸಕರು, ಪರಿಷತ್ತಿನ 75 ಸದಸ್ಯರ ಮುಂದೆ ರಾಜ್ಯಪಾಲರಿಂದ ಹೀಗೆ ಭರವಸೆ ಕೊಡಿಸಿದ್ದರು.</p>.<p>ಬಿಜೆಪಿ ಅವಧಿಯ ಆಡಳಿತದಿಂದ ರೋಸಿಹೋಗಿದ್ದ ಜನರು ಕೂಡ ಪ್ರಾಮಾಣಿಕ, ಭ್ರಷ್ಟಾಚಾರರಹಿತ ಆಡಳಿತ ರಾಜ್ಯದಲ್ಲಿ ಟಿಸಿಲೊಡೆಯುತ್ತದೆ ಎಂದು ನಂಬಿದ್ದರು. ರಾಜ್ಯಪಾಲರು ವಾಗ್ದಾನ ಮಾಡಿ, ಒಂದು ವರ್ಷ 10 ದಿನ ಕಳೆದಿದೆ. ವಿಧಾನಮಂಡಲದ ಅಧಿವೇಶನವೂ ಈಗ ನಡೆಯುತ್ತಿದೆ. ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ವಿದ್ಯಮಾನ ಗಮನಿಸಿದರೆ, ಬೇರು ಬಿಟ್ಟಿದ್ದ ಭ್ರಷ್ಟಾಚಾರದ ಮರವೀಗ ತನ್ನ ರೆಂಬೆ ಕೊಂಬೆಗಳನ್ನು ಚಾಚಿ ಬೆಳೆಯುತ್ತಿದೆ ಎನಿಸುತ್ತದೆ. ರಾಜ್ಯಪಾಲರ ಭಾಷಣವನ್ನು ಮತ್ತೆ ನೆನಪಿಸಬೇಕಾದ ಕಾಲ ಇದಾಗಿದೆ.</p>.<p>ಈ ಸರ್ಕಾರ ಅಧಿಕಾರಕ್ಕೆ ಬಂದ ಹೊಸತರಲ್ಲಿ ‘ಗ್ಯಾರಂಟಿ’ಗಳ ಗುನುಗು, ಅವು ಬಹುಜನರಿಗೆ ತಂದಿತ್ತ ಹಿತಾನುಭವದಲ್ಲಿ ಆಡಳಿತಾರೂಢರು ‘ನುಡಿದಂತೆ ನಡೆಯುತ್ತಿದ್ದಾರೆಯೇ’ ಎಂಬ ಪ್ರಶ್ನೆಯೇ ಕಾಡಲಿಲ್ಲ. ವರ್ಷ ಸಮೀಪಿಸುತ್ತಿದ್ದಂತೆ ಭ್ರಷ್ಟಾಚಾರದ ಕಬಂಧ ಬಾಹುಗಳು, ಬಿಜೆಪಿ ನೇತೃತ್ವದ ಸರ್ಕಾರದ ಅವಧಿಗಿಂತ ಬಿಗಿಗೊಂಡು, ವ್ಯವಸ್ಥೆಯನ್ನು ಆಪೋಶನ ತೆಗೆದುಕೊಳ್ಳುವ ಮಟ್ಟಿಗೆ ವಿಸ್ತಾರಗೊಳ್ಳುತ್ತಿರುವುದರ ಕುರುಹು ಕಾಣಿಸತೊಡಗಿತು. ಅದಕ್ಕೆ ಸ್ಫೋಟಕ ತಿರುವು ನೀಡಿದ್ದು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ. ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳದೇ ಇದ್ದರೆ ಎಲ್ಲ ಹಗರಣಗಳಂತೆಯೇ ಇದೂ ಕಡತಗಳಡಿ ಹೂತುಹೋಗುತ್ತಿತ್ತು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣದ ಪೈಕಿ ₹ 94 ಕೋಟಿಯನ್ನು ವರ್ಗಾವಣೆ ಮಾಡಿ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂಬುದು ತನಿಖೆಯಿಂದ ಮೇಲ್ನೋಟಕ್ಕೆ ದೃಢಪಟ್ಟಿದೆ. ಸಚಿವ, ಶಾಸಕರ ಪಾತ್ರ ಇದರಲ್ಲಿ ಇಲ್ಲ ಎಂದು ಅಧಿಕಾರಾರೂಢರು ಪ್ರತಿಪಾದಿಸಿದರು. ಹಗರಣದ ಜಾಲ ಬಿಚ್ಚಿಕೊಳ್ಳುತ್ತಾ ಹೋದಂತೆ, ಇಲಾಖೆಯ ಉಸ್ತುವಾರಿ ಹೊತ್ತು, ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ನಾಗೇಂದ್ರ ಬಂಧನವಾಗಿದೆ. ‘ದೊಡ್ಡವರು’ ಇದರಲ್ಲಿ ಭಾಗಿಯಾಗಿರುವ ಗುಮಾನಿ ತನಿಖಾ ಸಂಸ್ಥೆಗಳಿಗಿದೆ. </p>.<p>ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ಸೇರಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ 14 ನಿವೇಶನ ಹಂಚಿಕೆ ಮಾಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷಗಳು ಬಲವಾದ ಆರೋಪ ಮಾಡಿ, ದಾಖಲೆಗಳನ್ನೂ ಬಿಡುಗಡೆ ಮಾಡಿವೆ. ಎಲ್ಲವೂ ನ್ಯಾಯಯುತವಾಗಿವೆ; ತಮ್ಮದೇನೂ ತಪ್ಪಿಲ್ಲ ಎಂದು ಪ್ರತಿಪಾದಿಸಿರುವ ಸಿದ್ದರಾಮಯ್ಯ, ಈ ಪ್ರಕರಣದ ತನಿಖೆಗೆ ಏಕಸದಸ್ಯ ಆಯೋಗ ರಚಿಸಿದ್ದಾರೆ. ನಿವೇಶನ ಹಂಚಿಕೆಯಲ್ಲಿ ಯಾವುದೇ ಲೋಪವಾಗಿಲ್ಲವೆಂದರೆ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಆಯೋಗ ರಚಿಸುವ ಅಗತ್ಯವೇ ಇರಲಿಲ್ಲ. ಆದರೆ, ವಿಪಕ್ಷಗಳ ಆರೋಪ–ಮುಖ್ಯಮಂತ್ರಿಯವರ ಸಮರ್ಥನೆಗಳ ನಡುವೆ ಜಾರಿದ ಎಳೆಯೊಂದು ಸಂಶಯವನ್ನು ಹುಟ್ಟುಹಾಕಿದೆ. ಆಯೋಗದ ತನಿಖೆಯಷ್ಟೇ ಸತ್ಯಾಂಶವನ್ನು ಹೊರಗೆಳೆಯಬಲ್ಲದು.</p>.<p>ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿರುವ ಶಾಸಕ ವಿನಯ ಕುಲಕರ್ಣಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ವಿರುದ್ಧ ಹಲವು ಆಪಾದನೆಗಳನ್ನು ಮಾಡಿದ್ದಾರೆ. ಅಲ್ಲಿಯೂ ಅಕ್ರಮ ನಡೆದ ಗುಮಾನಿಗಳು ಇವೆ. </p>.<p>ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಲವು ಆರೋಪಗಳನ್ನು ಮಾಡಿದ್ದಾರೆ. ‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ತರುತ್ತಿರುವ ಬೃಹತ್ ಯೋಜನೆಗಳು, ನಗರ ಯೋಜನೆಗೆ ಸಂಬಂಧಿಸಿದ ವಿವಿಧ ಅನುಮತಿ, ಕಸದ ಗುತ್ತಿಗೆ ಬದಲು ಈ ವಿಷಯಗಳಲ್ಲಿ ಆಳುವವರ ನಡೆಗಳಂತೂ ಪಾರದರ್ಶಕವಾಗಿಲ್ಲ. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಗುತ್ತಿಗೆಗೆ ಶೇ 40ರಷ್ಟು ಲಂಚ ನೀಡಬೇಕಾಗಿತ್ತು ಎಂದು ಕಾಂಗ್ರೆಸ್ ನಾಯಕರು ದೊಡ್ಡ ಆಂದೋಲನ ನಡೆಸಿದ್ದರು. ಒಂದು ವರ್ಷದ ಬಳಿಕವೂ ಪರಿಸ್ಥಿತಿ ಬದಲಾಗಿಲ್ಲ.</p>.<p>ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾದ ಅವಧಿಯಲ್ಲೂ ಇಂತಹದೇ ಹಲವು ವಿವಾದಗಳು ಮುನ್ನೆಲೆಗೆ ಬಂದಿದ್ದವು. ಅರ್ಕಾವತಿ ಬಡಾವಣೆಯ 868 ಎಕರೆ ಜಮೀನನ್ನು ‘ರೀ–ಡೂ’ ಹೆಸರಿನಲ್ಲಿ ಕೈಬಿಟ್ಟಿದ್ದು, ಹಗರಣದ ಸ್ವರೂಪ ಪಡೆದುಕೊಂಡಿತ್ತು. ‘ನ್ಯಾಯಾಲಯಗಳ ಆದೇಶವನ್ನಷ್ಟೇ ಪಾಲಿಸಿದ್ದೇವೆ’ ಎಂದು ಸರ್ಕಾರ ಪ್ರತಿಪಾದನೆ ಮಾಡಿದರೂ ಬಿಳಿ ಅಂಗಿಗೆ ಅಂಟಿದ್ದ ಕಪ್ಪುಕಲೆ ಅಳಿಸಲಾಗಿರಲಿಲ್ಲ. ವಿರೋಧ ಪಕ್ಷಗಳ ಒತ್ತಡ ಹೆಚ್ಚಾದಾಗ, ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ನೇತೃತ್ವದ ಆಯೋಗವನ್ನು ರಚಿಸಿ ವಿವಾದ ತಣ್ಣಗಾಗಿಸಲಾಗಿತ್ತು. ಈ ‘ರೀ–ಡೂ’ ಫಲಾನುಭವಿಗಳು 2019ರಲ್ಲಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವರೂ ಆಗಿಬಿಟ್ಟರು. ಹೀಗಾಗಿ, ಬಿಜೆಪಿ ಈ ವಿಷಯದಲ್ಲಿ ಮೌನಕ್ಕೆ ಶರಣಾಯಿತು.</p>.<p>ಸಿದ್ದರಾಮಯ್ಯ ಕಟ್ಟಿದ್ದ ಭಾರಿ ಬೆಲೆಯ ಹ್ಯೂಬ್ಲಾಟ್ ಕೈಗಡಿಯಾರ ಹಲವು ದಿನ ಸದ್ದು ಮಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸಿದ್ದರಾಮಯ್ಯ, ಅದನ್ನು ಸರ್ಕಾರದ ಸ್ವತ್ತಾಗಿಸುವಂತೆ ಕೋರಿ ಸಭಾಧ್ಯಕ್ಷರಿಗೆ ಹಸ್ತಾಂತರಿಸಿದ್ದರು. ಹಲವು ಆರೋಪಗಳ ಕುರಿತಾಗಿ ಲೋಕಾಯುಕ್ತಕ್ಕೆ ದೂರುಗಳ ಸರಮಾಲೆಯೇ ಹರಿದುಬಂದಿತ್ತು. ಲೋಕಾಯುಕ್ತ ಶಕ್ತಿ ಕುಗ್ಗಿಸಲು ಮುಂದಾದ ಸರ್ಕಾರ, ಭ್ರಷ್ಟಾಚಾರ ನಿಗ್ರಹ ದಳ ರಚಿಸಿತು. ಹಾಗೆ ಮಾಡುವ ಮುಖೇನ, ಭ್ರಷ್ಟಾಚಾರದ ಯಾವುದೇ ದೂರು, ತನಿಖೆಯ ಗೊಡವೆಯೇ ಇಲ್ಲದಂತೆ ನೋಡಿಕೊಂಡಿತ್ತು. ಈಗ ಮತ್ತೆ ಹಗರಣಗಳ ಒಂದೊಂದೇ ‘ಹಾವು’ ಹೊರಗೆ ಬರಲಾರಂಭಿಸಿದೆ. </p>.<p>ವರ್ಷದ ಹಿಂದೆ ರಾಜ್ಯಪಾಲರಿಂದ ಆಶ್ವಾಸನೆ ಕೊಡಿಸಿದಂತೆ ಸರ್ಕಾರವನ್ನು ಸರಿದಾರಿಗೆ ತರಬೇಕಾದ ಕರ್ತವ್ಯವನ್ನು ಮುಖ್ಯಮಂತ್ರಿ ಪಾಲಿಸಬೇಕಾಗಿದೆ. ಸಿದ್ದರಾಮಯ್ಯ ಈಗಿನ ದೇವರಾಜ ಅರಸು ಎಂದು ಅವರ ಅಭಿಮಾನಿಗಳು ಹೇಳಿಕೊಳ್ಳುವುದುಂಟು. ಪ್ರಬಲ ಜಾತಿಯವರ ಸೊಕ್ಕನ್ನು ಮುರಿದಿದ್ದ ಅರಸು ಅವರು, ಅಲ್ಲಿಯವರೆಗೆ ರಾಜಕೀಯ ಹಾಗೂ ಸರ್ಕಾರಿ ನೌಕರಿಯಲ್ಲಿ ಪ್ರಾತಿನಿಧ್ಯವೇ ಸಿಗದ ಅಲಕ್ಷಿತ ಸಮುದಾಯಗಳಿಗೆ ಭವಿಷ್ಯದ ಬೆಳಕನ್ನು ತೋರಿಸಿಕೊಟ್ಟವರು. ತುರ್ತು ಪರಿಸ್ಥಿತಿಯ ಅಂಕುಶಗಳನ್ನು ಮುಂದಿಟ್ಟುಕೊಂಡು, ಮಲ ಹೊರುವ ಹಾಗೂ ಜೀತ ಪದ್ಧತಿಯ ನಿಷೇಧ ಜಾರಿ ಮಾಡಿದರು. ಉಳುವವನಿಗೆ ಹೊಲ ನೀಡುವ ಕಾಯ್ದೆ ಜಾರಿಗೊಳಿಸಿದರು. ಅಧಿಕಾರ ಪಾರಮ್ಯ ಉಳಿಸಿಕೊಳ್ಳಲು ಅಳಿಯ ಎಂ.ಡಿ.ನಟರಾಜ ಅವರ ಶಕ್ತಿಯನ್ನೂ ಯಥೇಚ್ಛವಾಗಿ ದುಡಿಸಿಕೊಂಡರು ಎಂಬ ಆರೋಪಕ್ಕೂ ಗುರಿಯಾದರು.</p>.<p>ಸಿದ್ದರಾಮಯ್ಯನವರು ಅರಸು ಹಾದಿಯಲ್ಲಿ ಕೆಲವೊಮ್ಮೆ ಸಾಗಿರುವುದು ಉಂಟು. ಹಿಂದುಳಿದವರೊಬ್ಬರು ಉನ್ನತ ಅಧಿಕಾರದಲ್ಲಿ ಮುಂದುವರಿಯುವುದಕ್ಕೆ ಅಂದು ಅರಸರಿಗೆ ನಟರಾಜ ಬೇಕಿದ್ದಿರಬಹುದು. ಆದರೆ, ಇಂದಿನ ‘ಅರಸ’ರಿಗೆ ಪ್ರಜಾಪ್ರಭುತ್ವದ ದೊಡ್ಡ ರಕ್ಷಣೆಯಿದೆ; ಸುತ್ತಲಿರುವ ಹಲವು ನಟರಾಜರು ಬೇಕಿಲ್ಲ. ಸೀಸರ್ನ ಪತ್ನಿ ಸಂಶಯಾತೀತಳಾಗಿರಬೇಕು ಎಂಬ ನಾಣ್ನುಡಿ ಇದೆ. ಹಿಂದೆ, ತಮ್ಮ ವಿರುದ್ಧ ಆರೋಪ ಎದುರಾದಾಗ ಕೈಗಡಿಯಾರವನ್ನು ಸಭಾಧ್ಯಕ್ಷರ ಸುಪರ್ದಿಗೆ ನೀಡಿದ್ದ ಸಿದ್ದರಾಮಯ್ಯ, ತಮ್ಮ ಹೆಸರಿನಲ್ಲೇ ‘ರಾಮ’ ಇದ್ದಾನೆ ಎಂದು ಹೇಳಿಕೊಳ್ಳುತ್ತಾರೆ. ದಾರಿಹೋಕನೊಬ್ಬ ಟೀಕೆ ಮಾಡಿದ್ದಕ್ಕೆ ಶ್ರೀರಾಮ ಸೀತೆಯನ್ನೇ ವನವಾಸಕ್ಕೆ ದೂಡಿದ್ದ. ಈಗ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಆರೋಪ ಎದುರಾಗಿದೆ. ಸರ್ಕಾರದ ಮುಖ್ಯಸ್ಥರಾಗಿರುವ ಅವರು, ಪತ್ನಿ ಜಮೀನಿಗೆ ಪರ್ಯಾಯವಾಗಿ ₹ 65 ಕೋಟಿ ಪರಿಹಾರ ಕೇಳುವುದು ಸರಿಯಲ್ಲ; ರಕ್ಷಣೆಗಾಗಿ ಜಾತಿಯ ಅಸ್ತ್ರದ ಗುರಾಣಿಯೂ ಬೇಕಿರಲಿಲ್ಲ. ನಿವೇಶನಗಳನ್ನು ವಾಪಸ್ ನೀಡಿ, ಪ್ರಭಾವಿ ನಾಯಕ ಹೇಗಿರಬೇಕೆಂದು ತೋರಿಸಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ರಾಜ್ಯದಲ್ಲಿ ಭ್ರಷ್ಟಾಚಾರವು ಸಾಂಸ್ಥೀಕರಣಗೊಳ್ಳುವ ಮಟ್ಟಕ್ಕೆ ಬೇರುಬಿಟ್ಟಿದೆ. ಅದನ್ನು ನಿಗ್ರಹಿಸುವ ಸವಾಲನ್ನು ಎದುರಿಸಿ ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡಲು ನಾನು ನಿಮ್ಮೆಲ್ಲರ ಸಹಕಾರ ಕೋರುತ್ತೇನೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳನ್ನು ನನ್ನ ಸರ್ಕಾರ ಕೈಗೊಳ್ಳಲಿದೆ...’ </p>.<p>2023ರ ಜುಲೈ 4ರಂದು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮಾಡಿದ ಭಾಷಣದ ಸಾಲುಗಳಿವು.</p>.<p>ಬಿಜೆಪಿ ಆಡಳಿತಾವಧಿಯ ಭ್ರಷ್ಟಾಚಾರ, ಸ್ವಜನಪಕ್ಷಪಾತವು ನಾಡಿನ ಅಭಿವೃದ್ಧಿಗೆ ‘ಕೇಡು’ ಎಂಬುದನ್ನು ಜನರಿಗೆ ಅರ್ಥ ಮಾಡಿಸಿದ್ದ ಕಾಂಗ್ರೆಸ್ ನಾಯಕರು, ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದರು. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ತಮ್ಮ ‘ಸರ್ಕಾರದ ಹಾದಿ’ಯ ಬಗ್ಗೆ 224 ಶಾಸಕರು, ಪರಿಷತ್ತಿನ 75 ಸದಸ್ಯರ ಮುಂದೆ ರಾಜ್ಯಪಾಲರಿಂದ ಹೀಗೆ ಭರವಸೆ ಕೊಡಿಸಿದ್ದರು.</p>.<p>ಬಿಜೆಪಿ ಅವಧಿಯ ಆಡಳಿತದಿಂದ ರೋಸಿಹೋಗಿದ್ದ ಜನರು ಕೂಡ ಪ್ರಾಮಾಣಿಕ, ಭ್ರಷ್ಟಾಚಾರರಹಿತ ಆಡಳಿತ ರಾಜ್ಯದಲ್ಲಿ ಟಿಸಿಲೊಡೆಯುತ್ತದೆ ಎಂದು ನಂಬಿದ್ದರು. ರಾಜ್ಯಪಾಲರು ವಾಗ್ದಾನ ಮಾಡಿ, ಒಂದು ವರ್ಷ 10 ದಿನ ಕಳೆದಿದೆ. ವಿಧಾನಮಂಡಲದ ಅಧಿವೇಶನವೂ ಈಗ ನಡೆಯುತ್ತಿದೆ. ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ವಿದ್ಯಮಾನ ಗಮನಿಸಿದರೆ, ಬೇರು ಬಿಟ್ಟಿದ್ದ ಭ್ರಷ್ಟಾಚಾರದ ಮರವೀಗ ತನ್ನ ರೆಂಬೆ ಕೊಂಬೆಗಳನ್ನು ಚಾಚಿ ಬೆಳೆಯುತ್ತಿದೆ ಎನಿಸುತ್ತದೆ. ರಾಜ್ಯಪಾಲರ ಭಾಷಣವನ್ನು ಮತ್ತೆ ನೆನಪಿಸಬೇಕಾದ ಕಾಲ ಇದಾಗಿದೆ.</p>.<p>ಈ ಸರ್ಕಾರ ಅಧಿಕಾರಕ್ಕೆ ಬಂದ ಹೊಸತರಲ್ಲಿ ‘ಗ್ಯಾರಂಟಿ’ಗಳ ಗುನುಗು, ಅವು ಬಹುಜನರಿಗೆ ತಂದಿತ್ತ ಹಿತಾನುಭವದಲ್ಲಿ ಆಡಳಿತಾರೂಢರು ‘ನುಡಿದಂತೆ ನಡೆಯುತ್ತಿದ್ದಾರೆಯೇ’ ಎಂಬ ಪ್ರಶ್ನೆಯೇ ಕಾಡಲಿಲ್ಲ. ವರ್ಷ ಸಮೀಪಿಸುತ್ತಿದ್ದಂತೆ ಭ್ರಷ್ಟಾಚಾರದ ಕಬಂಧ ಬಾಹುಗಳು, ಬಿಜೆಪಿ ನೇತೃತ್ವದ ಸರ್ಕಾರದ ಅವಧಿಗಿಂತ ಬಿಗಿಗೊಂಡು, ವ್ಯವಸ್ಥೆಯನ್ನು ಆಪೋಶನ ತೆಗೆದುಕೊಳ್ಳುವ ಮಟ್ಟಿಗೆ ವಿಸ್ತಾರಗೊಳ್ಳುತ್ತಿರುವುದರ ಕುರುಹು ಕಾಣಿಸತೊಡಗಿತು. ಅದಕ್ಕೆ ಸ್ಫೋಟಕ ತಿರುವು ನೀಡಿದ್ದು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ. ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳದೇ ಇದ್ದರೆ ಎಲ್ಲ ಹಗರಣಗಳಂತೆಯೇ ಇದೂ ಕಡತಗಳಡಿ ಹೂತುಹೋಗುತ್ತಿತ್ತು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣದ ಪೈಕಿ ₹ 94 ಕೋಟಿಯನ್ನು ವರ್ಗಾವಣೆ ಮಾಡಿ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂಬುದು ತನಿಖೆಯಿಂದ ಮೇಲ್ನೋಟಕ್ಕೆ ದೃಢಪಟ್ಟಿದೆ. ಸಚಿವ, ಶಾಸಕರ ಪಾತ್ರ ಇದರಲ್ಲಿ ಇಲ್ಲ ಎಂದು ಅಧಿಕಾರಾರೂಢರು ಪ್ರತಿಪಾದಿಸಿದರು. ಹಗರಣದ ಜಾಲ ಬಿಚ್ಚಿಕೊಳ್ಳುತ್ತಾ ಹೋದಂತೆ, ಇಲಾಖೆಯ ಉಸ್ತುವಾರಿ ಹೊತ್ತು, ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ನಾಗೇಂದ್ರ ಬಂಧನವಾಗಿದೆ. ‘ದೊಡ್ಡವರು’ ಇದರಲ್ಲಿ ಭಾಗಿಯಾಗಿರುವ ಗುಮಾನಿ ತನಿಖಾ ಸಂಸ್ಥೆಗಳಿಗಿದೆ. </p>.<p>ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ಸೇರಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ 14 ನಿವೇಶನ ಹಂಚಿಕೆ ಮಾಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷಗಳು ಬಲವಾದ ಆರೋಪ ಮಾಡಿ, ದಾಖಲೆಗಳನ್ನೂ ಬಿಡುಗಡೆ ಮಾಡಿವೆ. ಎಲ್ಲವೂ ನ್ಯಾಯಯುತವಾಗಿವೆ; ತಮ್ಮದೇನೂ ತಪ್ಪಿಲ್ಲ ಎಂದು ಪ್ರತಿಪಾದಿಸಿರುವ ಸಿದ್ದರಾಮಯ್ಯ, ಈ ಪ್ರಕರಣದ ತನಿಖೆಗೆ ಏಕಸದಸ್ಯ ಆಯೋಗ ರಚಿಸಿದ್ದಾರೆ. ನಿವೇಶನ ಹಂಚಿಕೆಯಲ್ಲಿ ಯಾವುದೇ ಲೋಪವಾಗಿಲ್ಲವೆಂದರೆ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಆಯೋಗ ರಚಿಸುವ ಅಗತ್ಯವೇ ಇರಲಿಲ್ಲ. ಆದರೆ, ವಿಪಕ್ಷಗಳ ಆರೋಪ–ಮುಖ್ಯಮಂತ್ರಿಯವರ ಸಮರ್ಥನೆಗಳ ನಡುವೆ ಜಾರಿದ ಎಳೆಯೊಂದು ಸಂಶಯವನ್ನು ಹುಟ್ಟುಹಾಕಿದೆ. ಆಯೋಗದ ತನಿಖೆಯಷ್ಟೇ ಸತ್ಯಾಂಶವನ್ನು ಹೊರಗೆಳೆಯಬಲ್ಲದು.</p>.<p>ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿರುವ ಶಾಸಕ ವಿನಯ ಕುಲಕರ್ಣಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ವಿರುದ್ಧ ಹಲವು ಆಪಾದನೆಗಳನ್ನು ಮಾಡಿದ್ದಾರೆ. ಅಲ್ಲಿಯೂ ಅಕ್ರಮ ನಡೆದ ಗುಮಾನಿಗಳು ಇವೆ. </p>.<p>ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಲವು ಆರೋಪಗಳನ್ನು ಮಾಡಿದ್ದಾರೆ. ‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ತರುತ್ತಿರುವ ಬೃಹತ್ ಯೋಜನೆಗಳು, ನಗರ ಯೋಜನೆಗೆ ಸಂಬಂಧಿಸಿದ ವಿವಿಧ ಅನುಮತಿ, ಕಸದ ಗುತ್ತಿಗೆ ಬದಲು ಈ ವಿಷಯಗಳಲ್ಲಿ ಆಳುವವರ ನಡೆಗಳಂತೂ ಪಾರದರ್ಶಕವಾಗಿಲ್ಲ. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಗುತ್ತಿಗೆಗೆ ಶೇ 40ರಷ್ಟು ಲಂಚ ನೀಡಬೇಕಾಗಿತ್ತು ಎಂದು ಕಾಂಗ್ರೆಸ್ ನಾಯಕರು ದೊಡ್ಡ ಆಂದೋಲನ ನಡೆಸಿದ್ದರು. ಒಂದು ವರ್ಷದ ಬಳಿಕವೂ ಪರಿಸ್ಥಿತಿ ಬದಲಾಗಿಲ್ಲ.</p>.<p>ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾದ ಅವಧಿಯಲ್ಲೂ ಇಂತಹದೇ ಹಲವು ವಿವಾದಗಳು ಮುನ್ನೆಲೆಗೆ ಬಂದಿದ್ದವು. ಅರ್ಕಾವತಿ ಬಡಾವಣೆಯ 868 ಎಕರೆ ಜಮೀನನ್ನು ‘ರೀ–ಡೂ’ ಹೆಸರಿನಲ್ಲಿ ಕೈಬಿಟ್ಟಿದ್ದು, ಹಗರಣದ ಸ್ವರೂಪ ಪಡೆದುಕೊಂಡಿತ್ತು. ‘ನ್ಯಾಯಾಲಯಗಳ ಆದೇಶವನ್ನಷ್ಟೇ ಪಾಲಿಸಿದ್ದೇವೆ’ ಎಂದು ಸರ್ಕಾರ ಪ್ರತಿಪಾದನೆ ಮಾಡಿದರೂ ಬಿಳಿ ಅಂಗಿಗೆ ಅಂಟಿದ್ದ ಕಪ್ಪುಕಲೆ ಅಳಿಸಲಾಗಿರಲಿಲ್ಲ. ವಿರೋಧ ಪಕ್ಷಗಳ ಒತ್ತಡ ಹೆಚ್ಚಾದಾಗ, ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ನೇತೃತ್ವದ ಆಯೋಗವನ್ನು ರಚಿಸಿ ವಿವಾದ ತಣ್ಣಗಾಗಿಸಲಾಗಿತ್ತು. ಈ ‘ರೀ–ಡೂ’ ಫಲಾನುಭವಿಗಳು 2019ರಲ್ಲಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವರೂ ಆಗಿಬಿಟ್ಟರು. ಹೀಗಾಗಿ, ಬಿಜೆಪಿ ಈ ವಿಷಯದಲ್ಲಿ ಮೌನಕ್ಕೆ ಶರಣಾಯಿತು.</p>.<p>ಸಿದ್ದರಾಮಯ್ಯ ಕಟ್ಟಿದ್ದ ಭಾರಿ ಬೆಲೆಯ ಹ್ಯೂಬ್ಲಾಟ್ ಕೈಗಡಿಯಾರ ಹಲವು ದಿನ ಸದ್ದು ಮಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸಿದ್ದರಾಮಯ್ಯ, ಅದನ್ನು ಸರ್ಕಾರದ ಸ್ವತ್ತಾಗಿಸುವಂತೆ ಕೋರಿ ಸಭಾಧ್ಯಕ್ಷರಿಗೆ ಹಸ್ತಾಂತರಿಸಿದ್ದರು. ಹಲವು ಆರೋಪಗಳ ಕುರಿತಾಗಿ ಲೋಕಾಯುಕ್ತಕ್ಕೆ ದೂರುಗಳ ಸರಮಾಲೆಯೇ ಹರಿದುಬಂದಿತ್ತು. ಲೋಕಾಯುಕ್ತ ಶಕ್ತಿ ಕುಗ್ಗಿಸಲು ಮುಂದಾದ ಸರ್ಕಾರ, ಭ್ರಷ್ಟಾಚಾರ ನಿಗ್ರಹ ದಳ ರಚಿಸಿತು. ಹಾಗೆ ಮಾಡುವ ಮುಖೇನ, ಭ್ರಷ್ಟಾಚಾರದ ಯಾವುದೇ ದೂರು, ತನಿಖೆಯ ಗೊಡವೆಯೇ ಇಲ್ಲದಂತೆ ನೋಡಿಕೊಂಡಿತ್ತು. ಈಗ ಮತ್ತೆ ಹಗರಣಗಳ ಒಂದೊಂದೇ ‘ಹಾವು’ ಹೊರಗೆ ಬರಲಾರಂಭಿಸಿದೆ. </p>.<p>ವರ್ಷದ ಹಿಂದೆ ರಾಜ್ಯಪಾಲರಿಂದ ಆಶ್ವಾಸನೆ ಕೊಡಿಸಿದಂತೆ ಸರ್ಕಾರವನ್ನು ಸರಿದಾರಿಗೆ ತರಬೇಕಾದ ಕರ್ತವ್ಯವನ್ನು ಮುಖ್ಯಮಂತ್ರಿ ಪಾಲಿಸಬೇಕಾಗಿದೆ. ಸಿದ್ದರಾಮಯ್ಯ ಈಗಿನ ದೇವರಾಜ ಅರಸು ಎಂದು ಅವರ ಅಭಿಮಾನಿಗಳು ಹೇಳಿಕೊಳ್ಳುವುದುಂಟು. ಪ್ರಬಲ ಜಾತಿಯವರ ಸೊಕ್ಕನ್ನು ಮುರಿದಿದ್ದ ಅರಸು ಅವರು, ಅಲ್ಲಿಯವರೆಗೆ ರಾಜಕೀಯ ಹಾಗೂ ಸರ್ಕಾರಿ ನೌಕರಿಯಲ್ಲಿ ಪ್ರಾತಿನಿಧ್ಯವೇ ಸಿಗದ ಅಲಕ್ಷಿತ ಸಮುದಾಯಗಳಿಗೆ ಭವಿಷ್ಯದ ಬೆಳಕನ್ನು ತೋರಿಸಿಕೊಟ್ಟವರು. ತುರ್ತು ಪರಿಸ್ಥಿತಿಯ ಅಂಕುಶಗಳನ್ನು ಮುಂದಿಟ್ಟುಕೊಂಡು, ಮಲ ಹೊರುವ ಹಾಗೂ ಜೀತ ಪದ್ಧತಿಯ ನಿಷೇಧ ಜಾರಿ ಮಾಡಿದರು. ಉಳುವವನಿಗೆ ಹೊಲ ನೀಡುವ ಕಾಯ್ದೆ ಜಾರಿಗೊಳಿಸಿದರು. ಅಧಿಕಾರ ಪಾರಮ್ಯ ಉಳಿಸಿಕೊಳ್ಳಲು ಅಳಿಯ ಎಂ.ಡಿ.ನಟರಾಜ ಅವರ ಶಕ್ತಿಯನ್ನೂ ಯಥೇಚ್ಛವಾಗಿ ದುಡಿಸಿಕೊಂಡರು ಎಂಬ ಆರೋಪಕ್ಕೂ ಗುರಿಯಾದರು.</p>.<p>ಸಿದ್ದರಾಮಯ್ಯನವರು ಅರಸು ಹಾದಿಯಲ್ಲಿ ಕೆಲವೊಮ್ಮೆ ಸಾಗಿರುವುದು ಉಂಟು. ಹಿಂದುಳಿದವರೊಬ್ಬರು ಉನ್ನತ ಅಧಿಕಾರದಲ್ಲಿ ಮುಂದುವರಿಯುವುದಕ್ಕೆ ಅಂದು ಅರಸರಿಗೆ ನಟರಾಜ ಬೇಕಿದ್ದಿರಬಹುದು. ಆದರೆ, ಇಂದಿನ ‘ಅರಸ’ರಿಗೆ ಪ್ರಜಾಪ್ರಭುತ್ವದ ದೊಡ್ಡ ರಕ್ಷಣೆಯಿದೆ; ಸುತ್ತಲಿರುವ ಹಲವು ನಟರಾಜರು ಬೇಕಿಲ್ಲ. ಸೀಸರ್ನ ಪತ್ನಿ ಸಂಶಯಾತೀತಳಾಗಿರಬೇಕು ಎಂಬ ನಾಣ್ನುಡಿ ಇದೆ. ಹಿಂದೆ, ತಮ್ಮ ವಿರುದ್ಧ ಆರೋಪ ಎದುರಾದಾಗ ಕೈಗಡಿಯಾರವನ್ನು ಸಭಾಧ್ಯಕ್ಷರ ಸುಪರ್ದಿಗೆ ನೀಡಿದ್ದ ಸಿದ್ದರಾಮಯ್ಯ, ತಮ್ಮ ಹೆಸರಿನಲ್ಲೇ ‘ರಾಮ’ ಇದ್ದಾನೆ ಎಂದು ಹೇಳಿಕೊಳ್ಳುತ್ತಾರೆ. ದಾರಿಹೋಕನೊಬ್ಬ ಟೀಕೆ ಮಾಡಿದ್ದಕ್ಕೆ ಶ್ರೀರಾಮ ಸೀತೆಯನ್ನೇ ವನವಾಸಕ್ಕೆ ದೂಡಿದ್ದ. ಈಗ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಆರೋಪ ಎದುರಾಗಿದೆ. ಸರ್ಕಾರದ ಮುಖ್ಯಸ್ಥರಾಗಿರುವ ಅವರು, ಪತ್ನಿ ಜಮೀನಿಗೆ ಪರ್ಯಾಯವಾಗಿ ₹ 65 ಕೋಟಿ ಪರಿಹಾರ ಕೇಳುವುದು ಸರಿಯಲ್ಲ; ರಕ್ಷಣೆಗಾಗಿ ಜಾತಿಯ ಅಸ್ತ್ರದ ಗುರಾಣಿಯೂ ಬೇಕಿರಲಿಲ್ಲ. ನಿವೇಶನಗಳನ್ನು ವಾಪಸ್ ನೀಡಿ, ಪ್ರಭಾವಿ ನಾಯಕ ಹೇಗಿರಬೇಕೆಂದು ತೋರಿಸಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>