ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾರದೆ ಪ್ರತಿಷ್ಠಾಪನೆಯೊಂದಿಗೆ ‘ಮಂಗಳೂರು ದಸರಾ’ಕ್ಕೆ ಚಾಲನೆ

Published : 3 ಅಕ್ಟೋಬರ್ 2024, 7:26 IST
Last Updated : 3 ಅಕ್ಟೋಬರ್ 2024, 7:26 IST
ಫಾಲೋ ಮಾಡಿ
Comments

ಮಂಗಳೂರು: ಇಲ್ಲಿನ ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ಶ್ರೀ ಶಾರದಾ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ 'ಮಂಗಳೂರು ದಸರಾ' ಮಹೋತ್ಸವಕ್ಕೆ ಗುರುವಾರ ಚಾಲನೆ ದೊರಕಿತು.

ಮಂಗಳೂರು ದಸರಾದ ವಿಶೇಷ ಆಕರ್ಷಣೆಯಾದ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಮಂಗಳವಾದ್ಯಗಳೊಂದಿಗೆ ದೇವಸ್ಥಾನದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಮಾಡಿಸಿ, ದರ್ಬಾರ್ ಸಭಾಂಗಣಕ್ಕೆ ತಂದು ಪ್ರತಿಷ್ಠಾಪಿಸಲಾಯಿತು‌. ಇದೇ ಸಭಾಂಗಣದಲ್ಲಿ ಶ್ರೀಮಹಾಗಣಪತಿ, ಸಿದ್ಧಿಧಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತಾ, ಚಂದ್ರಘಂಟಾ, ಬ್ರಹ್ಮಚಾರಿಣಿ, ಶೈಲಪುತ್ರಿ, ಆದಿಶಕ್ತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಈ ವೇಳೆ ಶಾರದಾ ಹುಲಿವೇಷಧಾರಿಗಳ ತಂಡದವರು ಹುಲಿ ಕುಣಿತ ಸೇವೆ ಸಲ್ಲಿಸಿದರು. ಹುಲಿ ವೇಷ ಧರಿಸಿದ್ದ 9 ತಿಂಗಳ ಮಗುವು ಗಮನ ಸೆಳೆಯಿತು.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ರೂವಾರಿ ಬಿ.ಜನಾರ್ದನ ಪೂಜಾರಿ ಅವರು ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.

ನವರಾತ್ರಿ ಪ್ರಯುಕ್ತ ಶಾರದಾ ಮಾತೆಗೆ ಇದೇ 13ರವರೆಗೆ ನಿತ್ಯವೂ ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರಗಳು ನಡೆಯಲಿವೆ.

ನವರಾತ್ರಿ ಹಾಗೂ ದಸರಾ ಮಹೋತ್ಸವದ ಅಂಗವಾಗಿ ನಗರವು ಕಳೆ ಗಟ್ಟಿದೆ. ಕುದ್ರೋಳಿ ಕ್ಷೇತ್ರದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ದಸರಾ ಮೆರವಣಿಗೆ ಸಾಗುವ ನಗರದ ಬೀದಿಗಳಲ್ಲಿ ಮಾಡಲಾದ ವಿದ್ಯುತ್ ದೀಪಾಲಂಕಾರ ಮಂಗಳೂರು ದಸರಾ ಸಂಭ್ರಮಕ್ಕೆ ವಿಶೇಷ ಕಳೆ ತಂದಿದೆ. ಹುಲುವೇಷ ಕುಣಿತದ ತಾಸೆ ಸದ್ದು ಬೀದಿ ಬೀದಿಗಳಲ್ಲಿ ಕಿವಿಗಪ್ಪಳಿಸುತ್ತಿದೆ‌‌. ನಗರದಲ್ಲಜ ಸಡಗರದಿಸನದ ಆಚರಿಸುವ ಈ ಉತ್ಸವಕ್ಕೆ ಶುಭಾಶಯ ಕೋರುವ ಫಲಕಗಳು ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ರಾರಾಜಿಸುತ್ತಿವೆ‌.

ಇದೆ 13 ರಂದು ಸಂಜೆ ದಸರಾ ಶೋಭಾಯಾತ್ರೆ ನಡೆಯಲಿದೆ. ಇದೆ 14ರಂದು ಮುಂಜಾನೆ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಶಾರದಾ ಮೂರ್ತಿಯ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಂಪನ್ನಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT