ಬಳ್ಳಾರಿ ಮೇಯರ್ ಚುನಾವಣೆ ಮುಂದೂಡಿರುವುದನ್ನು ಪ್ರಕಟಿಸಿ ಪೊಲೀಸರ ನೆರವಿನಿಂದ ಪಾಲಿಕೆಯ ಸಭಾಂಗಣದಿಂದ ಹೊರ ಬರುತ್ತಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ
ಪ್ರಜಾವಾಣಿ ಚಿತ್ರ– ಮುರಳಿಕಾಂತ ರಾವ್
ಬಳ್ಳಾರಿ ಮೇಯರ್ ಚುನಾವಣೆ ಮುಂದೂಡಿದ ಕ್ರಮ ಖಂಡಿಸಿ ಪಾಲಿಕೆಯ ಬಿಜೆಪಿ ಸದಸ್ಯರು ಗಡಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಮುಜುಗರ ತಪ್ಪಿಸಿಕೊಂಡ ಕಾಂಗ್ರೆಸ್ ಸಚಿವ ನಾಗೇಂದ್ರ ವರ್ಸಸ್ ಭರತ್ ರೆಡ್ಡಿ ಬಿಜೆಪಿ ಜತೆ ಕಾಂಗ್ರೆಸ್ನ ಒಂದು ಬಣ ರಹಸ್ಯ ಒಪ್ಪಂದ?
ಬಿಜೆಪಿ ಸದಸ್ಯರ ಧರಣಿ
ಮೇಯರ್ ಚುನಾವಣೆಯನ್ನು ದಿಢೀರ್ ಮುಂದೂಡಿದ ಅಧಿಕಾರಿಗಳ ಕ್ರಮ ಖಂಡಿಸಿ ಪಾಲಿಕೆ ಬಿಜೆಪಿ ಸದಸ್ಯರು ಮಂಗಳವಾರ ಇಲ್ಲಿನ ಗಡಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ‘ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಈಗ ರಿಪಬ್ಲಿಕ್ ಆಫ್ ಬಳ್ಳಾರಿ ಆರಂಭವಾಗಿದೆ. ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾದ ಬಳಿಕ ರಾಜಕೀಯ ವಾತಾವರಣ ಬದಲಾಗುತ್ತಿದೆ. ಪಕ್ಷೇತರ ಸದಸ್ಯರ ಮುಖಾಂತರ ಬಿಜೆಪಿ ಇಲ್ಲಿ ಅಧಿಕಾರ ಹಿಡಿಯಲಿದೆ ಎಂಬ ಆತಂಕದಿಂದ ಚುನಾವಣೆ ಮುಂದೂಡಲಾಗಿದೆ’ ಎಂದು ಪಾಲಿಕೆ ಬಿಜೆಪಿ ಸದಸ್ಯ ಶ್ರೀನಿವಾಸ್ ಮೋತ್ಕರ್ ಆರೋಪಿಸಿದರು. ‘ಕಮಿಷನರ್ ಎಡಿಸಿ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಒತ್ತಡಕ್ಕೆ ಮಣಿದಿದ್ದಾರೆ. ಅವರು ಚುನಾವಣೆ ಮುಂದೂಡಿಕೆಗೆ ಕಾರಣ ಕೊಡಲಿ’ ಎಂದು ಆಗ್ರಹಿಸಿದರು. ‘ಮುಂದೆ ಮೇಯರ್ ಚುನಾವಣೆ ನಡೆದರೂ ಬಹಿಷ್ಕರಿಸುತ್ತೇವೆ. ಯಾವುದೇ ಕಾರಣ ಇಲ್ಲದೆ ಚುನಾವಣೆ ಮುಂದೂಡಲಾಗುತ್ತದೆ ಎಂದರೆ ಏನರ್ಥ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಇಬ್ರಾಹಿಂ ಬಾಬು ಪ್ರಶ್ನಿಸಿದರು. ‘ಪ್ರಾದೇಶಿಕ ಆಯುಕ್ತರು ಬಳ್ಳಾರಿಯಲ್ಲಿದ್ದಾರೆ. ಅವರು ಇಲ್ಲಿ ಇಲ್ಲವೆಂದಾದರೆ ನಾನು ಇವತ್ತೇ ರಾಜೀನಾಮೆ ಕೊಡುತ್ತೇನೆ’ ಎಂದು ಮೋತ್ಕರ್ ಸವಾಲು ಹಾಕಿದರು. ‘ಮೇಯರ್ ಚುನಾವಣೆಗೆ ಏಳು ದಿನ ಮೊದಲು ನೋಟಿಸ್ ಕೊಡಬೇಕು. ಆದರೆ 20 ದಿನ ಮೊದಲೇ ನೋಟಿಸ್ ಕೊಡಲಾಗಿದೆ. ಆದರೂ ಪರವಾಗಿಲ್ಲ ಒಳ್ಳೆ ಕೆಲಸ ಮಾಡಿದ್ದಾರೆ. ಆದರೆ ಚುನಾವಣೆ ಮುಂದೂಡಿಕೆ ಕಾರಣ ಕೊಡುತ್ತಿಲ್ಲ. ಮಾಧ್ಯಮದವರು ಹೋಗಿ ಕಾರಣ ಏನೆಂದು ಪ್ರಶ್ನಿಸಲಿ’ ಎಂದು ಕೆ. ಹನುಮಂತಪ್ಪ ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯರಿಗೆ ಅನಾರೋಗ್ಯ!
‘ಅನಾರೋಗ್ಯದ ಕಾರಣ ತಾವು ಮೇಯರ್ ಚುನಾವಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ’ ಎಂದು ಕೆಲವು ಕಾಂಗ್ರೆಸ್ ಸದಸ್ಯರು ಪತ್ರ ಕಳುಹಿಸಿದ್ದರು’ ಎಂದು ಪಾಲಿಕೆ ಕಮಿಷನರ್ ಖಲೀಲ್ ಸಾಬ್ ಸ್ಪಷ್ಟಪಡಿಸಿದರು. ‘ಸದಸ್ಯರ ಪತ್ರವನ್ನು ಚುನಾವಣಾ ಅಧಿಕಾರಿಗಳಿಗೆ ಕಳಿಸಿದ್ದೇನೆ. ಐವರು ಪತ್ರ ಕಳಿಸಿದ್ದಾರೋ ಅಥವಾ ಒಂಭತ್ತು ಮಂದಿ ಕಳಿಸಿದ್ದಾರೋ ಎಂಬುದು ನೆನಪಿಲ್ಲ’ ಎಂದು ಕಮಿಷನರ್ ತಿಳಿಸಿದರು. ಡಿ.19ರಂದು ಮೇಯರ್ ಚುನಾವಣೆ! ಮುಂದೂಡಿದ ಮೇಯರ್ ಚುನಾವಣೆ ಡಿ.19ರಂದು ಮಧ್ಯಾಹ್ನ 12.30ಕ್ಕೆ ಪಾಲಿಕೆ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಕಮಿಷನರ್ ಅಧಿಸೂಚನೆ ಹೊರಡಿಸಿದ್ದಾರೆ.